
ಬೆಂಗಳೂರು(ನ.15): ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಬ್ಬಗೋಡಿ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ವಿಶೇಷ ತನಿಖಾಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಅಪ ರಾಧಿಕ ಸಂಚಿನಲ್ಲಿ ಪಾತ್ರವಹಿಸಿರುವ ಮಾಹಿತಿ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಮೂಲದ ರಾಜ್ಯದ ಬಿಜೆಪಿ ಪ್ರಭಾವಿ ಮುಖಂಡ ಹಾಗೂ ಹಿರಿಯ ಶಾಸಕನಿಗೆ ಏಡ್ಸ್ ಸೋಂಕು ಹಬ್ಬಿಸಲು ಚುಚ್ಚು ಮದ್ದು ನೀಡುವ ಸಂಚನ್ನು ಆರೋಪಿಗಳು ರೂಪಿಸಿದ್ದರು. ಈ ಸಂಚಿನಲ್ಲಿ ಇನ್ಸ್ಪೆಕ್ಟರ್ ಅಯ್ಯಣ್ಣ ಪ್ರಮುಖ ಪಾತ್ರವಹಿಸಿದ್ದ ಸಂಗತಿ ಗೊತ್ತಾಯಿತು. ಹಾಗೆಯೇ ವಿಚಾರಣೆ ವೇಳೆ ದೂರುದಾರರು ಹಾಗೂ ಕೆಲ ಸಾಕ್ಷಿದಾರರು ಕೂಡ ಅಯ್ಯಣ್ಣ ಕುರಿತು ಮಾಹಿತಿ ನೀಡಿದ್ದರು. ಅಂತೆಯೇ ಐಪಿಸಿ 120ಬಿ (ಅಪರಾಧಿ ಸಂಚು) ಆರೋಪದಡಿ ಐಯ್ಯಣ್ಣರವನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಸಕ ಮುನಿರತ್ನ ವಿರುದ್ಧ ವೋಟರ್ ಐಡಿ ಹಗರಣ ತನಿಖೆ ವಿಳಂಬ: ಮುನಿರಾಜುಗೌಡ ದೂರು
ಮುನಿರತ್ನ ಆಪ್ತ ರೆಡ್ಡಿ:
ಶಾಸಕ ಮುನಿರತ್ನ ಅವರ ಆಪ್ತ ವಲಯದಲ್ಲಿ ಇನ್ಸ್ಪೆಕ್ಟರ್ ಅಯ್ಯಣ್ಣ ಗುರುತಿಸಿಕೊಂಡಿದ್ದರು. ಹೀಗಾಗಿಯೇ ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿ, ರಾಜಗೋಪಾಲ ನಗರ ಹಾಗೂ ಪೀಣ್ಯ ಠಾಣೆಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಅಲ್ಲದೆ ಮುನಿರತ್ನ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕೋಲಾರ ಗ್ರಾಮಾಂತರ ವೃತ್ತ ಪಿಐಗೆ ಅಯ್ಯಣ್ಣ ಕೆಲಸ ಮಾಡಿದ್ದರು. ಹಾಗೆಯೇ ಮುನಿರತ್ನ ಶಿಫಾರಸಿನ ಮೇರೆಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಆಡಳಿತ ನಡೆಸಿದ್ದ ಅವರು, ಪ್ರಸುತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮುನಿರತ್ನ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಾದ ಬೆನ್ನಲ್ಲೇ ದೂರುದಾರರು ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಯ್ಯಣ್ಣ ರೆಡ್ಡಿ ವಿರುದ್ದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಖುದ್ದು ಕಾಂಗ್ರೆಸ್ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ಲಿಖಿತ ದೂರು ಕೂಡ ಸಲ್ಲಿಸಿದ್ದರು. ಅಲ್ಲದೆ ನಿವೃತ್ತ ಐಪಿಎಸ್ ಅಧಿಕಾರಿ ಟಿ.ಆರ್.ಸುರೇಶ್ ರವರ ಅಳಿಯ ಹಾಗೂ ಐಎಎಸ್ ಅಧಿಕಾರಿ ಅಕಾಶ್ ರವರ ಮೊಬೈಲ್ ಕರೆಗಳ ವಿವರ (ಸಿಡಿಆರ್) ಅನ್ನು ಅಕ್ರಮವಾಗಿ ಪಡೆದ ಆರೋಪ ಮೇರೆಗೆ ಐಯ್ಯಣ್ಣ ವಿರುದ್ದ ಎಫ್ ಐಆರ್ಸಹ ದಾಖಲಾಗಿತ್ತು. ಹೀಗೆ ವಿವಾದಗಳಿಂದ ಅಯ್ಯಣ್ಣರೆಡ್ಡಿ ಸುದ್ದಿಯಲ್ಲಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ