
ವಿಜಯಪುರ (ಅ.14): ಕೆಐಎಡಿಬಿಯಿಂದ ನಿವೇಶನಗಳನ್ನ ಮೊದಲು ತೆಗೆದುಕೊಂಡಿದ್ದೆ ತಪ್ಪು. ರಾಜ್ಯ ಹಾಗೂ ದೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಿರಿಯ ರಾಜಕಾರಣಿ, ಎಐಸಿಸಿ ಅಧ್ಯಕ್ಷರಾಗಿರುವವರು. ಆದರೂ ಅವರು ದಿನದಿಂದ ದಿನಕ್ಕೆ ಹಾದಿ ತಪ್ಪಿ ಮಾತನಾಡುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಸಿದ್ಧಾರ್ಥ ವಿಹಾರ ಟ್ರಸ್ಟಿಗೆ ಮಂಜೂರಾಗಿದ್ದ ಕೆಐಎಡಿಬಿ ನಿವೇಶನ ಖರ್ಗೆ ಕುಟುಂಬ ವಾಪಸ್ ನೀಡಿರುವ ವಿಚಾರ ಸಂಬಂಧ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಎಂದರೆ ಭಯೋತ್ಪಾದಕರ ಪಕ್ಷ ಎಂದು ಮೊನ್ನೆ ಹೇಳಿಕೆ ನೀಡಿದ್ದಾರೆ. ಬಿಜೆಪಿ ದೇಶಭಕ್ತರ ಪಾರ್ಟಿ ಎಂಬುದು ದೇಶಕ್ಕೆ ಗೊತ್ತಿದೆ. ಈ ದೇಶದಲ್ಲಿ ಜಿಹಾದಿಗಳ ಪಕ್ಷ, ಜಿಹಾದಿಗಳನ್ನು ಸಾಕುವ ಪಕ್ಷ ಎಂದರೆ ಅದು ಕಾಂಗ್ರೆಸ್ ಎಂದು ತಿರುಗೇಟು ನೀಡಿದರು.
ಭೂಮಿ ವಾಪಸ್ ಮಾಡಿ ಮಲ್ಲಿಕಾರ್ಜುನ ಖರ್ಗೆ ತಪ್ಪೊಪ್ಪಿಗೆ: ರಾಜೀವ್ ಚಂದ್ರಶೇಖರ್
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಸಿದ್ಧಾರ್ಥ ಟ್ರಸ್ಟ್ ಹಗರಣದಲ್ಲಿ ಮಲ್ಲಿಕಾರ್ಜುನ ಖರ್ಗೆ ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರೆ. ಅಕ್ರಮ ನಡೆದಿಲ್ಲವೆಂದರೆ ಯಾಕೆ ವಾಪಸ್ ಕೊಟ್ಟಿದ್ದು. ವಾಪಸ್ ಕೊಡುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡು ತಾವು ತಪ್ಪು ಮಾಡಿರುವುದು, ಒಪ್ಪಿಕೊಂಡಂತಾಗಲಿಲ್ಲವೇ? ನಾವು ತಪ್ಪೇ ಮಾಡಿಲ್ಲ ಎಂದು ಇಷ್ಟು ದಿನ ಹೋದಲ್ಲಿ ಬಂದಲ್ಲಿ ಹೇಳಿಕೊಂಡು ತಮ್ಮ ಬೆನ್ನು ತಾವು ತಟ್ಟಿಕೊಳ್ಳುತ್ತಿದ್ದರು. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ತಪ್ಪಿ ಮಾಡಿಲ್ಲ ಎಂದು ಹೇಳುತ್ತಿದ್ದರು. ಹಾಗಾದರೆ ಖರ್ಗೆಯವರು ನಿವೇಶನಗಳನ್ನು ಯಾಕೆ ವಾಪಸ್ ಕೊಟ್ಟಿದ್ದು ಎಂದು ಎಂಬಿ ಪಾಟೀಲರು ಹೇಳಲಿ. ಕಾನೂನು ಪ್ರಕಾರ ಪಡೆದಿದ್ದರೆ ಯಾರಾದರೂ ವಾಪಸ್ ಕೊಡುತ್ತಾರಾ? ತಪ್ಪೇ ಮಾಡದಿದ್ದ ಮೇಲೆ ವಾಪಸ್ ಕೊಡೋದು ಯಾಕೆ? ಎಂದು ಪ್ರಶ್ನಿಸಿದರು.
ಫಸ್ಟ್ ಲೈನ್ ಲೀಡರ್ಗಳದ್ದು ಎಲ್ಲವೂ ತನಿಖೆ ಆಗಬೇಕು. ಒಬ್ಬರದ್ದೇ ಅಲ್ಲ ಬಹಳ ಜನ ಸರ್ಕಾರಿ ಭೂಮಿಯನ್ನು ಗುಳುಂ ಮಾಡಿದ್ದಾರೆ. ವಕ್ಪ್ ಆಸ್ತಿಯನ್ನು ಕೂಡ ಫಸ್ಟ್ ಲೈನ್ ಲೀಡರ್ ಗಳು ನುಂಗಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ವಕ್ಪ್ ಗಾಗಿಯೇ ಒಂದು ಕಮಿಟಿ ನೇಮಿಸಿತ್ತು. ವಕ್ಪ್ ಆಸ್ತಿಯನ್ನ ಕಾಂಗ್ರೆಸ್ ನ ಎಲ್ಲಾ ಮುಖಂಡರು ನುಂಗಿದ್ದಾರೆ ಎಂಬ ಆರೋಪವೂ ಇದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆಗೆ ನೈತಿಕತೆ ಇದ್ದರೆ ಅವರ ಸ್ಥಾನಕ್ಕೆ ರಾಜೀನಾಮೆ ನೀಡಲಿ, ಹಾಗೆಯೇ ಸಿದ್ದರಾಮಯ್ಯ ಸಹ ರಾಜೀನಾಮೆ ನೀಡಲಿ ಎಂದರು.
ಭೂ ಹಗರಣದ ಸೈಟ್ ರಿಟರ್ನ್ಸ್ ಸರ್ಕಾರ: ಸಿದ್ದು ಬೆನ್ನಲ್ಲೇ ಖರ್ಗೆಯಿಂದಲೂ 5 ಎಕರೆ ಸೈಟ್ ವಾಪಸ್!
ರಾಜ್ಯದ ಸಿಎಂ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಇಬ್ಬರೂ ತಪ್ಪು ಮಾಡಿದ್ದಾರೆ ಅದಕ್ಕಾಗಿಯೇ ತನಿಖೆ ಭಯಕ್ಕೆ ನಿವೇಶನ ವಾಪಸ್ ನೀಡಿದ್ದಾರೆ ಅವರಿಗೆ ನೈತಿಕತೆ ಇದ್ದಾರೆ ರಾಜೀನಾಮೆ ನೀಡುತ್ತಾರೆ. ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ ಅದರ್ಥ ಅವರಲ್ಲಿ ನೈತಿಕತೆ, ಜನರು ತಿಳಿದಿರುವ ಹಾಗೆ ಪ್ರಾಮಾಣಿಕ ರಾಜಕಾರಣಗಳೇನು ಅಲ್ಲ ಎಂದು ಅವರೇ ಹೇಳಿಕೊಂಡಂತಾಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ