
ಧರ್ಮಸ್ಥಳ ಪ್ರಕರಣಕ್ಕೆ (Dharmasthala Burial Case) ಸಂಬಂಧಿಸಿದಂತೆ ಸರ್ಕಾರ ಎಸ್ಐಟಿ (SIT) ತನಿಖೆಗೆ ಆದೇಶ ನೀಡಿದ್ದು, ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ (CT Ravi) ಹೇಳಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯಬೇಕು. ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಆದರೆ ಧರ್ಮಸ್ಥಳದಂತಹ ಪವಿತ್ರ ಸಂಸ್ಥೆಯ ವಿರುದ್ಧ ಷಡ್ಯಂತರವನ್ನು ನಾವು ಖಂಡಿಸುತ್ತೇವೆ. ಧರ್ಮಸ್ಥಳ ಒಂದು ಸರಕಾರವಲ್ಲ, ಜನರ ಶ್ರದ್ಧಾ ಕೇಂದ್ರ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಸಾವಿರಾರು ಕೆರೆಗಳ ಪುನಶ್ಚೇತನ, ಸಾಮೂಹಿಕ ವಿವಾಹ, ಉಚಿತ ವೈದ್ಯಕೀಯ ಸೇವೆಗಳಂತಹ ಮಹತ್ವದ ಕಾರ್ಯಗಳನ್ನು ಕೈಗೊಂಡಿದೆ. ಇವುಗಳನ್ನು ಕಣ್ತುಂಬಿಕೊಳ್ಳದೆ, ಕೆಲವರು ನಿಂದನೆ ಮಾಡುತ್ತಿರುವುದು ದುಃಖದ ಸಂಗತಿ ಎಂದರು.
ಧರ್ಮಸ್ಥಳವು ಶೈವ, ವೈಷ್ಣವ ಹಾಗೂ ಜೈನ ಪರಂಪರೆಯ ಸಮನ್ವಯದ ಪ್ರತೀಕ. ಇವುಗಳ ನಡುವಣ ಸಮನ್ವಯತೆಯನ್ನು ಸಾಮಾಜಿಕ ಕ್ರಾಂತಿಯಾಗಿ ಪರಿಗಣಿಸಬಹುದು. ನಾನು ಧರ್ಮಸ್ಥಳ ಪರ ನಿಂತಿದ್ದೇನೆ. ಆದರೆ ಯಾರೇ ವ್ಯಕ್ತಿ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನೂನು ಎಲ್ಲರಿಗೂ ಸಮಾನವಾಗಿದೆ. ನ್ಯಾಯಮೂರ್ತಿಯೇ ತನಿಖೆಗೆ ಮಾನಿಟರ್ ಆಗಲಿ. ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದರು.
ಧರ್ಮಸ್ಥಳವಲ್ಲ, ವ್ಯಕ್ತಿ ವಿರುದ್ಧ ಆರೋಪವಿದೆ ಎಂದು ಹೇಳಬೇಕು. ಒಂದು ವ್ಯಕ್ತಿಯ ತಪ್ಪಿಗಾಗಿ ಧರ್ಮಸ್ಥಳದ ಹೆಸರಿಗೆ ಕಲೆ ಬೀಳಬಾರದು. ನಾನು 397 ದೇವಸ್ಥಾನಗಳ ಪುನರ್ನಿರ್ಮಾಣ ಕಾರ್ಯ ಮಾಡಿದ್ದೇನೆ. ಅದರಲ್ಲಿ 37 ದೇವಾಲಯಗಳು ಚಿಕ್ಕಮಗಳೂರಿನಲ್ಲಿ.ನಾವು ಯಾರಾದ್ರೂ ತಪ್ಪು ಮಾಡಿದ್ರೆ, ಮಂಜುನಾಥ ಸ್ಚಾಮಿ ಮೇಲೆ ಆಣೆ ಮಾಡು ಅಂತೀವಿ. ಅಂತಹ ಶ್ರದ್ದೆಗೆ ಅಪನಂಬಿಕೆ ಮಾಡಬಾರದು. ಧರ್ಮಸ್ಥಳ ಎಂದಿಗೂ ಶಿಕ್ಷಣವನ್ನು ವ್ಯಾಪಾರ ಎಂದು ಪರಿಗಣಿಸಿಲ್ಲ. ಎಜುಕೇಶನ್ ಇಸ್ ಬ್ಯುಸಿನೆಸ್ ಅಂತ ಕೆಲವರು ಹೇಳ್ತಾರೆ. ಆದ್ರೆ ಧರ್ಮಸ್ಥಳ ಎಂದೂ ಹಾಗೆ ಹೇಳಿಲ್ಲ. ಅದಕ್ಕೆ ಅದರ ಫೀಸ್ ಸ್ಟ್ರಕ್ಚರ್ ನೋಡಿ. ನಾನು ಇದನ್ನ ಹೇಳಿದ್ದಕ್ಕೆ ಸಿಟಿರವಿ ಅಲ್ಲ, ಓಟಿ ರವಿ ಅಂತ ಕುಡುಕನ್ನ ಮಾಡಿದ್ರು. 2019ರಲ್ಲಿ ನನ್ನ ಕಾರು ಅಪಘಾತವಾಗಿತ್ತು. ಆದರೆ ಕೆಲವು ಮಾಧ್ಯಮಗಳು ಕೇವಲ ಶಂಕೆ ಆಧರಿಸಿ ನನ್ನ ವಿರುದ್ಧ ಅಪಪ್ರಚಾರ ನಡೆಸಿದವು. ಕುಡಿದು ಮಾತನಾಡಿದಂತೆ ಹೊರತೆಗೆದರು. ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ವಿಚಾರ ಮಟ್ಟದ ಪ್ರಶ್ನೆಗಳಿಗಿಂತ ವ್ಯಕ್ತಿತ್ವದ ನಿಂದನೆ ಹೆಚ್ಚು ಇದೆ, ಇದು ತೊಂದರೆಕಾರಿ ಎಂದು ಹೇಳಿದರು.
ಮೈಸೂರು ರಾಜ ಮನೆತನಕ್ಕೆ ನೀಡಲಾಗುತ್ತಿರುವ TDR (Transfer of Development Rights) ಹಣವನ್ನು ಸಂಪೂರ್ಣವಾಗಿ ರಾಜಮನೆತನದವರಿಗೆ ಪೂರೈಸಲಾಗುತ್ತಿಲ್ಲ. ಅದರಲ್ಲಿ ಸ್ವಲ್ಪ ಭಾಗ ಸರ್ಕಾರದ ಭಾಗವಾಗಿರೋರಿಗೂ ಹೋಗುತ್ತದೆ! ಈ ಹಣದ ಒಂದು ಭಾಗ ಸರ್ಕಾರಕ್ಕೆ ಸೇರಿದ ಕೆಲವರಿಗೂ ಹೋಗುತ್ತಿದೆ . ಇದರ ಹಿಂದಿನ ಅಂತರಂಗದಲ್ಲಿ ಬೇರೆ ರಾಜಕೀಯ ಉದ್ದೇಶವಿರುವ ಸಾಧ್ಯತೆಗಳಿವೆ. ಈ ಹಣವನ್ನು ಕೇವಲ ಮಹಾರಾಜರಿಗೆ ಮಾತ್ರವಲ್ಲದೆ. ಮಹಾರಾಜರಿಗೆ ಒಬ್ಬರಿಗೆ ಅಲ್ಲ. ಮರಿ ರಾಜರಿಗೂ ಸಹ ಇದರ ಪಾಲಿದೆ. ಇದು ಸಿಎಂಗೂ ಚೆನ್ನಾಗಿ ಗೊತ್ತು. ಇದರಲ್ಲಿ ರಾಜಕೀಯ ಇರೋದರಿಂದಲೇ ಇದು ಮರಿ ರಾಜರ ಪಾಲು ಆಗಬಾರದು ಎಂದು ರಾಜಕೀಯ ಆಟ ನಡೆಯುತ್ತಿದೆ ಈ ವಿಷಯವನ್ನು ಮುಖ್ಯಮಂತ್ರಿ ಕೂಡ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಆದರೆ, ರಾಜಕೀಯ ಕಾರಣಗಳಿಂದಾಗಿ ಈ ಹಕ್ಕನ್ನು ಮರಿ ರಾಜರಿಗೆ ನೀಡದೇ ಮುಂದುವರೆಯುತ್ತಿರುವ ದೌರ್ಭಾಗ್ಯಕರ ರಾಜಕೀಯ ಆಟ ನಡೆಯುತ್ತಿದೆ ಎಂದರು.
ಟನಲ್ ರಸ್ತೆ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸಿ.ಟಿ. ರವಿ ಅವರು ಈ ಕುರಿತು ಸ್ಪಷ್ಟನೆ ನೀಡುತ್ತಾ, “ನಾವು ಸುರಂಗ ರಸ್ತೆ ಯೋಜನೆಗೆ ವಿರುದ್ಧವಲ್ಲ. ಅಭಿವೃದ್ಧಿ ಮಾಡಬೇಡಿ ಎಂದೇ ಇಲ್ಲ. ಆದರೆ ಈ ಯೋಜನೆ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನೇ ನಾವು ವಿರೋಧಿಸುತ್ತಿದ್ದೇವೆ,” ಎಂದು ಹೇಳಿದ್ದಾರೆ. ಅವರು ಮುಂದುವರೆದು, “ಅಟಲ್ ಟನಲ್ ಪ್ರಾಜೆಕ್ಟ್ಗೆ ಇತ್ತಿಚೆಗೆ ಖರ್ಚಾಗಿದ್ದ ಮೊತ್ತಕ್ಕಿಂತ ಇಲ್ಲಿನ ಸುರಂಗ ಯೋಜನೆಗೆ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. 6+3 = 9 ಆಗಬೇಕು, ಆದರೆ ಇಲ್ಲಿ 6*3 = 18 ಮಾಡುತ್ತಿದ್ದಾರೆ. ಇದು ಸರಿಯಲ್ಲ,” ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಡಿಪಿಆರ್ (Detailed Project Report) ಬಗ್ಗೆ ಮಾತನಾಡುತ್ತಾ, "ಅದು ಕಟ್ ಅಂಡ್ ಪೇಸ್ಟ್ ಮಾಡಲಾಗಿದ್ದು, ಟೆಂಡರ್ ಪಡೆದ ಕಂಪನಿ ಇದಕ್ಕಾಗಿ 9 ಕೋಟಿ ರೂ. ಪಡೆದುಕೊಂಡಿದೆ. ಇದು ನಿಖರವಾದ ಅಧ್ಯಯನವಲ್ಲ. ಇಲ್ಲಿ ಲೂಟಿ ನಡೆಯುತ್ತಿದೆ," ಎಂದು ಗಂಭೀರ ಆರೋಪ ಮಾಡಿದ್ದಾರೆ. ಸುರಂಗ ರಸ್ತೆ ನಿರ್ಮಾಣದ ಯೋಚನೆ ನಿತಿನ್ ಗಡ್ಕರಿಯವರಿಂದಲೇ ಬಂದಿದ್ದು, ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದರು ಎಂಬುದನ್ನು ಸಿ.ಟಿ. ರವಿ ನೆನಪಿಸಿದರು. ಆದರೆ ಈ ಯೋಜನೆಯ ನಾಮದಲ್ಲಿ ಭ್ರಷ್ಟಾಚಾರ ನಡೆಸುವುದನ್ನು ಮಾತ್ರ ತಮ್ಮ ವಿರೋಧ ಎಂದು ಸ್ಪಷ್ಟಪಡಿಸಿದರು. ಇನ್ನೊಂದು ಕಡೆ, ಟನಲ್ ರಸ್ತೆ ಯೋಜನೆ ಬೇಡವೆಂದು ತೇಜಸ್ವಿ ಸೂರ್ಯ ಮತ್ತು ಆರ್. ಅಶೋಕ್ ಹೇಳಿಕೆ ನೀಡಿದ್ದರೆ, ಸಿ.ಟಿ. ರವಿ ಅವರ ಹೇಳಿಕೆ ತದ್ವಿರುದ್ಧವಾಗಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ