ಬಿಜೆಪಿ ಸರ್ಕಾರದಿಂದ ದಲಿತರಿಗೆ ಅತಿಹೆಚ್ಚು ಅನುದಾನ : ಸಿ.ಟಿ.ರವಿ

By Kannadaprabha NewsFirst Published Jul 12, 2021, 7:27 AM IST
Highlights
  •  ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ದಲಿತರ ಹಿತಾಸಕ್ತಿ ಕಾಪಾಡಲು ಅಗತ್ಯ ಯೋಜನೆ
  • ಬಿಜೆಪಿಯಿಂದ ದಲಿತರಿಗಾಗಿ ಅತಿ ಹೆಚ್ಚು ಅನುದಾನ ಮತ್ತು ಅದರ ಸಮರ್ಪಕ ಅನುಷ್ಠಾನ ಕಾರ್ಯ

 ಬೆಂಗಳೂರು (ಜು.12):  ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ದಲಿತರ ಹಿತಾಸಕ್ತಿ ಕಾಪಾಡಲು ಅಗತ್ಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ, ದಲಿತರಿಗಾಗಿ ಅತಿ ಹೆಚ್ಚು ಅನುದಾನ ಮತ್ತು ಅದರ ಸಮರ್ಪಕ ಅನುಷ್ಠಾನ ಕಾರ್ಯ ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದೆ. ಈ ಅಂಶ ದಲಿತ ಸಮುದಾಯಕ್ಕೆ ತಿಳಿಸುವ ಕಾರ್ಯ ನಡೆಯಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಭಾನುವಾರ ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ವರ್ಚುವಲ್‌ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಚಿಂತನೆಗಳನ್ನು ಜಾರಿ ಮಾಡುವಲ್ಲಿ ಭಾರತೀಯ ಜನತಾ ಪಕ್ಷದ ಪಾತ್ರ ಹೆಚ್ಚಿನದಾಗಿದೆ ಎಂದು ಹೇಳಿದರು.

ತಮ್ಮ ಜತೆ ಸಿ.ಪಿ ಯೋಗೇಶ್ವರ್ ದೆಹಲಿಗೆ ಪ್ರಯಾಣ ಎನ್ನುವ ಸುದ್ದಿಗೆ ಸಿಟಿ ರವಿ ಸ್ಪಷ್ಟನೆ ...

ಡಾ.ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ ಪಕ್ಷ ಸೋಲಿಸಿತ್ತು. ಆ ಮೂಲಕ ಅವರಿಗೆ ಅವಮಾನ ಮಾಡಿತ್ತು. ಅವರು ಮೃತಪಟ್ಟಾಗ ದೆಹಲಿಯಲ್ಲಿ ಅವರ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಿರಲಿಲ್ಲ ಎಂದು ಟೀಕಿಸಿದ ಅವರು, ಕಾಂಗ್ರೆಸ್‌ ಪಕ್ಷಕ್ಕೆ ಅಂಬೇಡ್ಕರ್‌ ಹೆಸರು ಹೇಳಿ ಮತ ಕೇಳುವ ನೈತಿಕ ಹಕ್ಕು ಉಳಿದಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಂಬೇಡ್ಕರ್‌ ಅವರು ಹುಟ್ಟಿದ ಮಹುವಾ ಪ್ರದೇಶ ಮತ್ತು ಸ್ಮಾರಕವನ್ನು ಅಭಿವೃದ್ಧಿಪಡಿಸಲಾಗಿದೆ. ದೀಕ್ಷಾ ಭೂಮಿ, ಕರ್ಮ ಭೂಮಿ ಸೇರಿ ಅವರು ಕಾರ್ಯನಿರ್ವಹಿಸಿದ ಎಲ್ಲೆಡೆ ಅಭಿವೃದ್ಧಿ ಕಾರ್ಯ ಮಾಡಿದೆ. ಈ ಕಾರ್ಯಗಳನ್ನು ದಲಿತರು, ಬುದ್ಧಿಜೀವಿಗಳಿಗೆ ತಿಳಿಸುವ ಕಾರ್ಯ ನಡೆಸಬೇಕು ಎಂದರು.

ಪಕ್ಷದ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕೇಂದ್ರ ಸಂಪುಟದಲ್ಲಿ ದಲಿತರಿಗೆ 20 ಸ್ಥಾನ ನೀಡಿ ಸಾಮಾಜಿಕ ನ್ಯಾಯ ಕಲ್ಪಿಸಿದೆ. ಇದನ್ನು ಗಮನಿಸಿ ಕಾಂಗ್ರೆಸ್‌ ಪಕ್ಷದ ನಾಯಕರು ವಿಚಲತರಾಗಿದ್ದಾರೆ ಎಂದರು.

ವರಿಷ್ಠರಿಗೆ ಅರುಣ್‌ ಸಿಂಗ್‌ ವರದಿ ನೀಡಿದ್ದು ಸುಳ್ಳು: ರವಿ

ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯದ ಮೇಲೆ ಮುಸ್ಲಿಂ ಸಮುದಾಯದವರ ದಾಳಿಗಳು ಹೆಚ್ಚುತ್ತಿವೆ. ಈ ಬಗ್ಗೆ ನಮ್ಮ ಸಮುದಾಯಗಳ ಮುಖಂಡರು ಕೂಲಂಕಷವಾಗಿ ವಿಚಾರಣೆಗೊಳಪಡಿಸಿ ಈ ರೀತಿಯ ಘಟನೆಗಳಿಗೆ ಕುಮ್ಮಕ್ಕು ನೀಡುವವರ ಬಗ್ಗೆ ತನಿಖೆ ನಡೆಸಬೇಕು ಎಂದು ಸೂಚಿಸಿದರು.

ಎಸ್‌ಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಾಲ್‌ ಸಿಂಗ್‌ ಆರ್ಯ ವರ್ಚುವಲ್‌ ಮೂಲಕ ಭಾಗವಹಿಸಿದ್ದರು. ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಜಗದೀಶ್‌, ಪದಾಧಿಕಾರಿಗಳು, ಆಹ್ವಾನಿತರು ಸಭೆಯಲ್ಲಿ ಭಾಗಿಯಾಗಿದ್ದರು.

click me!