
ಬೆಂಗಳೂರು (ನ.17): ಬೆಂಗಳೂರು ಕಂಬಳಕ್ಕೆ ಭರದ ಸಿದ್ದತೆಗಳು ನಡೆಯುತ್ತಿದ್ದು ನಗರದ ಪ್ಯಾಲೇಸ್ ಮೈದಾನದಲ್ಲಿ ಈಗಾಗಲೇ ಕರೆ ನಿರ್ಮಾಣ ಕಾರ್ಯ ಪೂರ್ತಿಗೊಂಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ತುಳುನಾಡಿನ ಕಂಬಳ ಬೆಂಗಳೂರಿನಲ್ಲಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಕರುನಾಡ ರಾಜಕುಮಾರ ಪುನೀತ್ ರಾಜ್ ಕುಮಾರ್ ಗೆ ವಿಶೇಷವಾಗಿ ಗೌರವ ಸಲ್ಲಿಸಲು ಕಂಬಳ ಸಮಿತಿ ನಿರ್ಧರಿಸಿದೆ.
ಹೌದು, ಈಗಾಗಲೇ ಪೂರ್ತಿಗೊಂಡಿರುವ ಬೆಂಗಳೂರು ಕಂಬಳ(Bengaluru kambala)ದ ಜೋಡುಕರೆಗಳಿಗೆ ಹೆಸರು ಅಂತಿಮಗೊಂಡಿದೆ. ಕರುನಾಡ ರಾಜಕುಮಾರ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಬಾರಿ ಮೊದಲ ಬಾರಿಗೆ ನಡೆಯುತ್ತಿರುವ ಬೆಂಗಳೂರು ಕಂಬಳಕ್ಕೆ ಅಪ್ಪು ಹೆಸರನ್ನೇ ಇಡಲು ನಿರ್ಧರಿಸಲಾಗಿದೆ. ಕಂಬಳ ಸಮಿತಿಯ ಈ ನಿರ್ಧಾರ ಸದ್ಯ ಕಂಬಳಾಭಿಮಾನಿಗಳ ಜೊತೆ ಪುನೀತ್ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ.
ಬೆಂಗಳೂರು ಕಂಬಳಕ್ಕೆ ಸಿಎಂ 1 ಕೋಟಿ ರೂ ಘೋಷಣೆ, ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ ಸೇರಿ ಹಲವು ತಾರೆಯರು ಭಾಗಿ
ಕರಾವಳಿಯ ಜಾನಪದ ಆಟ ಕಂಬಳ ನೋಡೋದೆ ಕಣ್ಣಿಗೊಂದು ಹಬ್ಬ. ಅಂತಹದ್ದರಲ್ಲಿ ಈ ಆಟ ಈಗ ರಾಜಧಾನಿ ಪ್ರವೇಶ ಮಾಡಿದೆ. ಬೆಂಗಳೂರು ಕಂಬಳ ನಮ್ಮ ಕಂಬಳ(Bengaluru kambala namma kambala) ಎಂಬ ಟ್ಯಾಗ್ ಲೈನ್ ನೊಂದಿಗೆ ನಡೆಯುತ್ತಿರುವ ಈ ಜೋಡುಕರೆ ಕಂಬಳಕ್ಕೆ ಹೆಸರು ಫಿಕ್ಸ್ ಆಗಿರಲಿಲ್ಲ. ಈಗಾಗಲೇ ಇರುವ ಕಂಬಳಗಳ ಕರೆಗಳಿಗೆ ಸೂರ್ಯ-ಚಂದ್ರ, ಕೋಟಿ-ಚೆನ್ನಯ, ರಾಮ-ಲಕ್ಷ್ಮಣ, ಕಾಂತಬಾರೆ-ಬೂದಬಾರೆ ಎಂಬಿತ್ಯಾದಿ ಹೆಸರುಗಳಿವೆ. ಹಾಗಾಗಿ ಬೆಂಗಳೂರಿಗೆ ಯಾವ ಹೆಸರಿಡಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಬೆಂಗಳೂರು ಕಂಬಳಕ್ಕೆ ಕನ್ನಡದ ಲೆಜೆಂಡ್ ನಟರಾದ ರಾಜ್ ಕುಮಾರ್ ಮತ್ತು ಪುನೀತ್ ಅವರ ಹೆಸರುಗಳು ಜೊತೆ ಸೇರುವಂತೆ ಪುನೀತ್-ರಾಜ್ ಕಂಬಳ ಎಂದು ನಾಮಕರಣ ಮಾಡಲಾಗಿದೆ....
ಉಳಿದಂತೆ ಬೆಂಗಳೂರು ಕಂಬಳದ ಸಿದ್ದತೆಗಳು ಪೂರ್ಣಗೊಂಡಿದ್ದು ಕಂಬಳ ಕರೆಗಾಗಿ ಮತ್ತು ಇತರ ಬಳಕೆಗಾಗಿ ಪ್ಯಾಲೇಸ್ ಗ್ರೌಡ್ ನಲ್ಲಿ ಎರಡು ಬೋರ್ ವೆಲ್ ಕೊರೆಸಲಾಗಿದೆ. ಈ ಎರಡೂ ಬೋರ್ ವೆಲ್ ನಲ್ಲೂ ಯಥೇಚ್ಛವಾಗಿ ನೀರು ದೊರಕಿದ್ದು ಕಂಬಳಕ್ಕೆ ಪೂರಕ ವಾತಾವರಣ ಕಲ್ಪಿಸಿದೆ. ಜೊತೆಗೆ ಇಲ್ಲಿರುವ ಹುತ್ತಗಳಿಗೂ ಕಟ್ಟೆಯನ್ನು ಕಟ್ಟಿ ಸಂರಕ್ಷಿಸಿಕೊಂಡು ಬರಲಾಗಿದೆ. ಒಂದು ಕಾಲದಲ್ಲಿ ಸರ್ಕಸ್ ನಡೆಯುತ್ತಿದ್ದ ಈ ಗ್ರೌಂಡ್ ಕ್ರಮೇಣ ಕಸದ ರಾಶಿಗಳಿಂದ, ಮುಳ್ಳುಗಂಟೆಗಳಿಂದ ತುಂಬಿತ್ತು. ಸದ್ಯ ಕಂಬಳದ ನೆಪದಲ್ಲಿ ಗ್ರೌಡ್ ಕೂಡ ಸ್ವಚ್ಚಗೊಂಡಿದೆ.
ಬೆಂಗಳೂರಿಗೆ ಬರ್ತಿದ್ದಾರೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ: ಯಾಕೆ ಗೊತ್ತಾ?
ಒಟ್ಟಿನಲ್ಲಿ ಇದೇ ನವೆಂಬರ್ 25,26 ರಂದು ಕಂಬಳ ವಿಜೃಂಭಣೆಯಿಂದ ನಡೆಯಲಿದ್ದು ರಾಜಧಾನಿ ತುಳುನಾಡಿನ ಗ್ರಾಮೀಣ ಕ್ರೀಡೆಯನ್ನು ಕಣ್ತುಂಬಿಕೊಳ್ಳಲು ಕಾತರಿಸುತ್ತಿದೆ.
ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ