ಬೆಂಗಳೂರಿಗರಿಗೆ ಬಿಗ್ ರಿಲೀಫ್:ಸತತ 36 ಗಂಟೆಗಳ ಕಾರ್ಯಾಚರಣೆ ಬಳಿಕ ಪಂಪ್ ಹೌಸ್ ದುರಸ್ತಿ ಕಾರ್ಯ ಯಶಸ್ವಿ

By Suvarna NewsFirst Published Sep 9, 2022, 12:58 PM IST
Highlights

ಸತತ 36 ಗಂಟೆಗಳ ಕಾರ್ಯಾಚರಣೆ ಬಳಿಕ ಪಂಪ್ ಹೌಸ್ ದುರಸ್ತಿ ಕಾರ್ಯ ಯಶಸ್ವಿಯಾಗಿದೆ. ಇದರಿಂದ ಬೆಂಗಳೂರಿಗರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ.

ಮಂಡ್ಯ, (ಸೆಪ್ಟೆಂಬರ್.09): ಭಾರೀ ಮಳೆಗೆ ಭೀಮೇಶ್ವರ ನದಿ (ಚಿಕ್ಕ ತೊರೆ) ಉಕ್ಕಿ ಹರಿದ ಪರಿಣಾಮ ಜಲಾವೃತವಾಗಿದ್ದ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಪಂಪಿಂಗ್ ಸ್ಟೇಷನ್‌ಗಳ ದುರಸ್ತಿ ಕಾರ್ಯ ಯಶಸ್ವಿಯಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ (ಟಿಕೆ ಹಳ್ಳಿ) ಬಳಿಯಿರುವ ಕುಡಿಯುವ ನೀರು ಸರಬರಾಜು ಘಟಕ ಸತತ 36 ಗಂಟೆಗಳ ಕಾರ್ಯಾಚರಣೆ ಬಳಿಕ ಪುನರಾರಂಭಗೊಂಡಿದೆ. ಈ ಮೂಲಕ ಬೆಂಗಳೂರಿಗೆ ಎದುರಾಗಿದ್ದ ಕುಡಿಯುವ ನೀರಿನ ಕಂಟಕ ದೂರಾಗಿದೆ.

ಸೆ.5ರ ಸೋಮವಾರ ಸುರಿದ ಭಾರೀ ಮಳೆಗೆ ಭೀಮೇಶ್ವರ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು. ಇದರಿಂದಾಗಿ ನದಿ ಬಳಿಯ ಕುಡಿಯುವ ನೀರಿನ ಘಟಕಕ್ಕೆ ನೀರು ನುಗ್ಗಿದ ಪರಿಣಾಮ ಭಾರೀ ಪ್ರಮಾಣದ ಹಾನಿ ಉಂಟಾಗಿತ್ತು. 5 ಘಟಕಗಳ ಪೈಕಿ 500 MLD ( MILLION LITER PER DAY ) ಹಾಗೂ 330 MLD ( MILLION LITER PER DAY ) ಸಾಮರ್ಥ್ಯದ 2 ಘಟಕಗಳು ಸ್ಥಗಿತವಾಗಿತ್ತು. 2 ಘಟಕಗಳಲ್ಲಿ ಸುಮಾರು 30ಕ್ಕೂ ಅಧಿಕ ಅಡಿಯಷ್ಟು ನೀರು ನಿಂತ ಹಿನ್ನೆಲೆ ಯಂತ್ರೋಪಕರಣಗಳು ಮುಳುಗಡೆಯಾಗಿದ್ದವು. 

Bengaluru News: ಇಂದಿನಿಂದ ಎಂದಿನಂತೆ ಕಾವೇರಿ ನೀರು ಲಭ್ಯ

180 ಸಿಬ್ಬಂದಿಗಳಿಂದ ಸತತ 36 ಗಂಟೆಗಳ ಯಶಸ್ವಿ ಕಾರ್ಯಾಚರಣೆ
ಸೋಮವಾರ ಬೆಳಗಿನ ಜಾವ 3:30ರ ಸಮಯದಲ್ಲಿ ಎರಡು ಘಟಕಗಳಿಗೆ ನೀರು‌ ನುಗ್ಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಪ್ರಾಥಮಿಕವಾಗಿ ನೀರು ಹೊರ ಹಾಕುವ ಕಾರ್ಯ ಆರಂಭಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಹಾಜರಾಗಿ ದೊಡ್ಡ ದೊಡ್ಡ ಮೋಟಾರುಗಳ ಸಹಾಯದಿಂದ ನೀರು ಹೊರಹಾಕುವ ಕೆಲಸ ಮಾಡಿದ್ದರು. 2 ಘಟಕಗಳ ಪೈಕಿ ಒಂದರಲ್ಲಿ 21 ಅಡಿ ಹಾಗೂ ಮತ್ತೊಂದರಲ್ಲಿ 11 ಅಡಿಯಷ್ಟು ನೀರು ಶೇಕರಣೆಯಾಗಿತ್ತು. ಹಾಗಾಗಿ ನೀರು ಹೊರಹಾಕುವುದು ಸಿಬ್ಬಂದಿಗಳಿಗೆ ಸವಾಲಾಗಿ ಪರಿಣಮಿಸಿತು. ಸತತ 36 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ 180 ಸಿಬ್ಬಂದಿಗಳು ಸಂಪೂರ್ಣ ನೀರುನ್ನು ಹೊರತೆಗೆದು ಮುಳುಗಡೆಯಾಗಿದ್ದ ಯಂತ್ರೋಪಕರಣಗಳನ್ನು ಡ್ರೈ ಮಾಡಲು ಇರಿಸಿದ್ದಾರೆ. ಪರ್ಯಾಯವಾಗಿ ಹಾರೋಹಳ್ಳಿ ಮತ್ತು ತಾತಗುಣಿ ಪಂಪಿಂಗ್ ಸ್ಟೇಷನ್‌ಗಳಿಂದ ಸ್ಟ್ಯಾಂಡ್ ಬೈ ಪಂಪ್ ಗಳನ್ನು ತರಿಸಿಕೊಳ್ಳಲಾಗಿದೆ.

ಟಿ.ಕೆ.ಹಳ್ಳಿ ಜಲರೇಚಕ ಯಂತ್ರಾಗಾರ ಜಲಾವೃತ; ಬೆಂಗಳೂರು ಕುಡಿಯುವ ನೀರು ಪೂರೈಕೆ ಸ್ಥಗಿತ

ಮುಳುಗಡೆಯಾಗಿದ್ದ ಯಂತ್ರೋಪಕರಣಗಳ ಜಾಗಕ್ಕೆ ಸ್ಟ್ಯಾಂಡ್ ಬೈ ಪಂಪ್‌ಗಳನ್ನು ಅಳವಡಿಸಲಾಗಿದೆ. ಸದ್ಯ ಬೆಂಗಳೂರಿಗೆ 1450 MLD 1420 MLD ನೀರನ್ನು ಸರಬರಾಜು ಮಾಡಲಾಗ್ತಿದೆ. ಇನ್ನು ಮಳಗಡೆಯಾಗಿದ್ದ ಪಂಪ್‌ಗಳನ್ನು ಒಣಗಿಸಲು ಇಡಲಾಗಿದ್ದ ಬಳಿಕ ಅವುಗಳ ಸ್ಥಿತಿ ಗತಿಗಳ ಬಗ್ಗೆ ಪರಿಶೀಲಿಸಲು ಸಾಧ್ಯವಾಗಲಿದೆ. ಆ ನಂತರ ಘಟಕಗಳಲ್ಲಿ ಎಷ್ಟು ಪ್ರಮಾಣದ ನಷ್ಟು ಉಂಟಾಗಿದೆ ಎಂಬುದು ತಿಳಿದು ಬರಲಿದೆ. ಸದ್ಯ ಸ್ಟ್ಯಾಂಡ್ ಬೈ ಪಂಪ್‌ಗಳ ಮೂಲಕ ಬೆಂಗಳೂರಿಗೆ ನೀರು ಸರಬರಾಜು ಮಾಡಲಾಗ್ತಿದ್ದು ಎರಡು ದಿನಗಳಿಂದ ಬೆಂಗಳೂರಿಗೆ ಎದುರಾಗಿದ್ದ ಕುಡಿಯುವ ನೀರಿನ ಅಭಾವ ದೂರಾಗಿದೆ.

click me!