ಬಹುಮಾದರಿ ಸಾರಿಗೆ ವ್ಯವಸ್ಥೆ ಅಗತ್ಯ: ಗಡ್ಕರಿ

By Kannadaprabha NewsFirst Published Sep 9, 2022, 10:53 AM IST
Highlights

ಭಾರತ ಐದು ಟ್ರಿಲಿಯನ್‌ ಡಾಲರ್‌ ಅರ್ಥ ವ್ಯವಸ್ಥೆ ಹೊಂದಬೇಕಾದರೆ ಬಹುಮಾದರಿ ಸಾರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಜತೆಗೆ ಗುಣಮಟ್ಟದ ಸುಧಾರಣೆಗೆ ದೇಶದ ಎಲ್ಲಾ ಪಾಲುದಾರರು (ರಾಜ್ಯಗಳು) ಸಹಭಾಗಿತ್ವ ವಹಿಸಬೇಕು ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ

ಬೆಂಗಳೂರು (ಸೆ.9) :\ ಭಾರತ ಐದು ಟ್ರಿಲಿಯನ್‌ ಡಾಲರ್‌ ಅರ್ಥ ವ್ಯವಸ್ಥೆ ಹೊಂದಬೇಕಾದರೆ ಬಹುಮಾದರಿ ಸಾರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಜತೆಗೆ ಗುಣಮಟ್ಟದ ಸುಧಾರಣೆಗೆ ದೇಶದ ಎಲ್ಲಾ ಪಾಲುದಾರರು (ರಾಜ್ಯಗಳು) ಸಹಭಾಗಿತ್ವ ವಹಿಸಬೇಕು ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ‘ಮಂಥನ್‌-2022’ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಾವು ಭಿನ್ನಾಭಿಪ್ರಾಯಗಳಿಂದ ಹೊರಬರಬೇಕು. ಒಂದೇ ಕಡೆ ಕುಳಿತು ಚರ್ಚಿಸಿ, ಆಲೋಚಿಸಿ ಭವಿಷ್ಯದ ನೀತಿಗಳನ್ನು ರೂಪಿಸಬೇಕು. ಆಗ ಮಾತ್ರ ದೇಶದಲ್ಲಿ ಉತ್ಪಾದಿಸಿದ ಇಂಧನದ ಮೇಲೆಯೇ ದೇಶದ ಸಾರಿಗೆ ವ್ಯವಸ್ಥೆಯನ್ನು ಮುನ್ನಡೆಸಲು ಸಾಧ್ಯವಾಗುತ್ತದೆ. ತನ್ಮೂಲಕ ದೇಶವನ್ನು ಅತ್ಯಂತ ಅಭಿವೃದ್ದಿ ಹೊಂದಿದ ದೇಶವನ್ನಾಗಿ ರೂಪಿಸಬಹುದು ಎಂದು ರಾಜ್ಯಗಳಿಗೆ ಸಲಹೆ ನೀಡಿದರು.

ನಿತಿನ್ ಗಡ್ಕರಿ-ಬೊಮ್ಮಾಯಿ ಸಭೆ: ಬೆಂಗಳೂರಿನ ರಸ್ತೆ, ಟ್ರಾಫಿಕ್ ಬಗ್ಗೆ ಮಹತ್ವದ ಚರ್ಚೆ

ಬಹುಮಾದರಿ ಸಾರಿಗೆ ಹೇಗೆ?: ಭಾರತ 5 ಟ್ರಿಲಿಯನ್‌ ಡಾಲರ್‌ ಅರ್ಥ ವ್ಯವಸ್ಥೆ ಹೊಂದಬೇಕಾದರೆ ಬಹುಮಾದರಿ ಸಾರಿಗೆಯೊಂದಿಗೆ ಸಮಗ್ರ ವಿಧಾನ ಅಳವಡಿಸಿಕೊಳ್ಳಬೇಕು. ಪ್ರಸ್ತುತ ಶೇ 90 ರಷ್ಟುಪ್ರಯಾಣಿಕರ ಸಂಚಾರ ಮತ್ತು ಶೇ. 70 ರಷ್ಟುಸರಕುಗಳನ್ನು ಸಾಗಿಸಲು ರಸ್ತೆ ಮಾತ್ರ ಬಳಕೆಯಾಗುತ್ತಿದೆ. ಸಾಗಣೆ ವೆಚ್ಚವನ್ನು ಶೇ.16 ರಿಂದ 10ಕ್ಕೆ ಇಳಿಸಲು ಸಮಗ್ರ ವಿಧಾನಗಳನ್ನು ಅನುಸರಿಸುವುದು ಅಗತ್ಯ. ಕೇವಲ ರಸ್ತೆ ಸಾರಿಗೆ ನೆಚ್ಚಿಕೊಳ್ಳದೆ ಜತೆಗೆ ಜಲ ಸಾರಿಗೆ, ರೈಲ್ವೆ ಹಾಗೂ ವಿಮಾನ ನಿಲ್ದಾಣಗಳನ್ನು ಪರಸ್ಪರ ಸಂಪರ್ಕಿಸುವ ಅಗತ್ಯವಿದೆ. ಜತೆಗೆ ಸಾಗಣೆ ವಲಯದ ಪಾರ್ಕ್ಗಳಿಗೆ ಆದ್ಯತೆ ನೀಡಬೇಕಾಗಿದೆ. ರಾಜ್ಯ ಸರ್ಕಾರ ಭೂಮಿ ನೀಡಿದರೆ ಕೇಂದ್ರವು ಲಾಜಿಸ್ಟಿಕ್‌ ಪಾರ್ಕ್ಗಳನ್ನು ನಿರ್ಮಿಸಲಿದೆ ಎಂದು ಭರವಸೆ ನೀಡಿದರು.

ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ 750 ಕಿ.ಮೀ.ನಷ್ಟುರಸ್ತೆ ಹೇಗೆ ಗುಂಡಿ ಮುಕ್ತವಾಗಿದೆ ಎಂಬುದನ್ನು ವಿವರಿಸಿದ ಅವರು, ಮುಂಬೈ ಮಹಾನಗರ ಪಾಲಿಕೆ 6,000 ಕೋಟಿ ರು. ಮೊತ್ತದಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಮೆಂಟ್‌ ರಸ್ತೆಗಳನ್ನು ನಿರ್ಮಿಸಲು ಕಾರ್ಯೋನ್ಮುಖವಾಗಿದೆ. ಇದರ ಆರಂಭಿಕ ವೆಚ್ಚ ಹೆಚ್ಚಿರಬಹುದು, ಆದರೆ ಇವುಗಳಿಗೆ 25 ವರ್ಷಗಳ ಕಾಲ ನಿರ್ವಹಣಾ ವೆಚ್ಚ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ನಮ್ಮ ಇಲಾಖೆಯು ಪರಿಸರ ಮತ್ತು ಅರಣ್ಯ ಇಲಾಖೆಯೊಂದಿಗೆ ಸೇರಿ ಮರಗಳ ಬ್ಯಾಂಕ್‌ ಯೋಜನೆಯನ್ನು ರೂಪಿಸಿದೆ. ಇದರಡಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಐಎ) ಹೆದ್ದಾರಿಗಳ ಉದ್ದಕ್ಕೂ ಮರಗಳನ್ನು ನೆಡಲಿದೆ ಮತ್ತು ಆ ಮೂಲಕ ಹಸಿರು ವ್ಯಾಪ್ತಿಯನ್ನು ವಿಸ್ತರಿಸಲಿದೆ. ಇಲಾಖೆಯಿಂದ 80 ಲಕ್ಷ ಮರಗಳನ್ನು ನೆಡಲಾಗಿದೆ. ಈ ಮರಗಳು ಇಂಗಾಲ ಡೈ ಆಕ್ಸೈಡ್‌ ಹೀರಿಕೊಂಡು ಪರಿಸರಕ್ಕೆ ಅನುಕೂಲ ಮಾಡಿಕೊಡುತ್ತಿವೆ ಎಂದರು.

ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ… ಡಾ. ವಿ.ಕೆ. ಸಿಂಗ್‌, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ… ಮಾತನಾಡಿದರು. ಸಚಿವ ಬಿ. ಶ್ರೀರಾಮುಲು, ಸಂಸದರಾದ ಪಿ.ಸಿ. ಮೋಹನ್‌, ತೇಜಸ್ವಿ ಸೂರ್ಯ ಸೇರಿ ಹಲವರು ಹಾಜರಿದ್ದರು.

ಅಗತ್ಯ ಇದ್ದಾಗ ಬಳಸಿ ಬಿಸಾಡುವುದು ತಪ್ಪು, ಬಿಜೆಪಿ ವಿರುದ್ಧ ನಿತಿನ್ ಗಡ್ಕರಿ ಅತೃಪ್ತಿ?

ರಾಷ್ಟ್ರೀಯ ಹೆದ್ದಾರಿಗಳಿಂದ ಕೆರೆಗಳ ನಿರ್ಮಾಣ: ಸುಸ್ಥಿರ ವಿಧಾನಗಳ ಕುರಿತು ಮಾತನಾಡಿದ ನಿತಿನ್‌ ಗಡ್ಕರಿ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಹೆಚ್ಚು ಮಣ್ಣು ಅಗತ್ಯ. ಹೆದ್ದಾರಿಗೆ ಮಣ್ಣು ತೆಗೆಯುವ ವೇಳೆ ಹೊಸದಾಗಿ ಕೆರೆಗಳ ನಿರ್ಮಾಣ ಮಾಡಬಹುದು. ತನ್ಮೂಲಕ ಗ್ರಾಮೀಣ ಭಾಗದಲ್ಲಿ ಕೆರೆಗಳನ್ನು ಸೃಷ್ಟಿಸಿ ನೀರಿನ ಸಂರಕ್ಷಣೆ ಮಾಡಬೇಕು. ಇಂತಹ ಸುಸ್ಥಿರ ವಿಧಾನಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಆಸಕ್ತಿ ಹೊಂದಿದ್ದು, ಈಗಾಗಲೇ ಹಲವು ಕಡೆ ಕೆರೆಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು.

click me!