
ಬೆಂಗಳೂರು (ಡಿ.01): ದೆಹಲಿಯಲ್ಲಿ ನಡೆಯಲಿರುವ ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ರಾಜಕುಮಾರ್ ಸಮಾಧಿ ರಸ್ತೆಯಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಸಂಸದ ರಾಜೀವ್ ರೈ ಅವರು, ಬೆಂಗಳೂರಿನ ಸಂಚಾರ ನಿರ್ವಹಣೆ ಮತ್ತು ಸಂಚಾರ ಪೊಲೀಸರ ಕಾರ್ಯವೈಖರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಚಾರ ಪೊಲೀಸರು ಕರೆ ಸ್ವೀಕರಿಸುತ್ತಿಲ್ಲ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಸದ ರಾಜೀವ್ ರೈ ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮುಖ್ಯಮಂತ್ರಿ (@CMofKarnataka), ಬೆಂಗಳೂರು ಪೊಲೀಸ್ ಕಮಿಷನರ್ (@CPBlr) ಮತ್ತು ಜಂಟಿ ಸಂಚಾರ ಆಯುಕ್ತರನ್ನು (@Jointcptraffic) ಟ್ಯಾಗ್ ಮಾಡಿ, ಸಂಚಾರ ದಟ್ಟಣೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೌರವಾನ್ವಿತ ಮುಖ್ಯಮಂತ್ರಿಗಳೇ ಹೀಗೆ ಹೇಳುವುದಕ್ಕೆ ಕ್ಷಮಿಸಿ, ಆದರೆ ನಿಮ್ಮಲ್ಲಿ ಅತ್ಯಂತ ಕೆಟ್ಟ ಸಂಚಾರ ನಿರ್ವಹಣೆ ಮತ್ತು ಅತ್ಯಂತ ಬೇಜವಾಬ್ದಾರಿ, ನಿಷ್ಪ್ರಯೋಜಕ ಸಂಚಾರ ಪೊಲೀಸರು ಇದ್ದಾರೆ' ಎಂದು ಖಾರವಾಗಿ ಬರೆದಿದ್ದಾರೆ.
ಸಂಸದರ ಈ ಟ್ವೀಟ್ಗೆ ಗಿರೀಶ್ ಕೆ.ಎಸ್. ಎಂಬ ಬಳಕೆದಾರರು ಪ್ರತಿಕ್ರಿಯಿಸಿ, 'ನೀವು ಕರ್ನಾಟಕವನ್ನು ಬಿಟ್ಟು ನಿಮಗೆ ಬೇಕಾದಲ್ಲೆಲ್ಲಾ ಹೋಗಬಹುದು. ಬೇಜವಾಬ್ದಾರಿ ವ್ಯಕ್ತಿಯಂತೆ ಮಾತನಾಡಬೇಡಿ. ಹೇಳೋದು ಏನಾದ್ರೂ ಇದ್ರೆ ಕನ್ನಡದಲ್ಲಿ ಹೇಳಿ' ಎಂದು ಕನ್ನಡದಲ್ಲಿ ಕಾಮೆಂಟ್ ಮಾಡಿದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಂಸದ ರಾಜೀವ್ ರೈ ಅವರು, 'ಸುಮ್ಮನಿರಿ (Just shut up).. ಸಮಸ್ಯೆಯನ್ನು ಹೇಳಿದರೆ ಭಾಷೆಯನ್ನು ಮಧ್ಯದಲ್ಲಿ ತೂರಿಸಿ ಮಾತನಾಡುವ ಧೈರ್ಯ ಮಾಡಬೇಡಿ...' ಎಂದು ತೀಕ್ಷ್ಣವಾಗಿ ಉತ್ತರಿಸಿದ್ದಾರೆ.
ಇನ್ನು ರಾಜ್ಯದ ರಾಜಧಾನಿ ಬೆಂಗಳೂರಿನ ಸಂಚಾರ ಸಮಸ್ಯೆಯ ಕುರಿತು ಸಂಸದರ ಆಕ್ರೋಶವು ನಗರದ ಮೂಲಸೌಕರ್ಯ ನಿರ್ವಹಣೆಯ ಲೋಪಗಳ ಕಡೆಗೆ ಮತ್ತೊಮ್ಮೆ ಬೆಳಕು ಚೆಲ್ಲಿದೆ. ಸಂಚಾರ ಪೊಲೀಸರ ಕಾರ್ಯವೈಖರಿ ಮತ್ತು ಕರ್ತವ್ಯ ನಿರ್ಲಕ್ಷ್ಯದ ಆರೋಪಗಳ ಕುರಿತು ಗೃಹ ಸಚಿವಾಲಯ ಮತ್ತು ಬೆಂಗಳೂರು ಪೊಲೀಸ್ ಇಲಾಖೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ