ಕೊರೋನಾ ನಿಯಂತ್ರಣಕ್ಕೆ ಮತ್ತೊಂದು ತಂತ್ರ ರೂಪಿಸಿದ ಸರ್ಕಾರ

By Suvarna NewsFirst Published Jul 15, 2020, 5:49 PM IST
Highlights

ರಾಜ್ಯದಲ್ಲಿ ಶರವೇಗದಲ್ಲಿ ಏರುತ್ತಿರುವ ಮಾಹಾಮಾರಿ ಕೊರೋನಾ ವಿರುದ್ಧ ಹೋರಾಟಕ್ಕೆ ರಾಜ್ಯ ಸರ್ಕಾರ ಇನ್ನಿಲ್ಲದ ಅಸ್ತ್ರಗಳನ್ನ ಪ್ರಯೋಗಿಸುತ್ತಿದೆ. ಇದೀಗ ಮತ್ತೊಂದು ಅಸ್ತ್ರ ಪ್ರಯೋಗಿಸಿದ್ದು, ಈ ಬಗ್ಗೆ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು, (ಜುಲೈ.15): ರಾಜಧಾನಿಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಿದ್ದು, ಅದರ ಅನ್ವಯ ಕಾರ್ಯನಿರ್ವಹಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ವಲಯವಾರು ಉಸ್ತುವಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಂದು (ಬುದವಾರ) ಬಿಬಿಎಂಪಿ ವಲಯವಾರು ಉಸ್ತುವಾರಿ ಅಧಿಕಾರಿಗಳ ಜೊತೆ ವಿಡಿಯೋ ಸಂವಾದದ ಮೂಲಕ ಚರ್ಚಿಸಿ ಮಾಹಿತಿ ಪಡೆದ ಅವರು, ನಿರ್ದಿಷ್ಟ ಹೊಣೆಗಾರಿಕೆ ವಹಿಸಿಕೊಂಡಿರುವ ಅಧಿಕಾರಿಗಳು ಇತರೆ ಸಹೋದ್ಯೋಗಿಗಳ ಜತೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಧಾರಾವಿ ಮಾದರಿಯಲ್ಲಿ ಲಾಕ್‌ಡೌನ್‌ಗೆ ಚಿಂತನೆ: ಮೈಸೂರು ಡಿಸಿ

ಲಾಕ್ ಡೌನ್ ಅವಧಿ ಮುಕ್ತಾಯಗೊಳ್ಳುವ ಮುನ್ನ ಬೂತ್ ಮಟ್ಟದಲ್ಲಿ ಸಮಿತಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕು. ಅದಕ್ಕಾಗಿ ಸಮಿತಿಗಳ ರಚನೆ ತರಬೇತಿ ಪ್ರಕ್ರಿಯೆ ಒಂದೆರಡು ದಿನಗಳಲ್ಲಿ ಮುಗಿಸಬೇಕು. ಆ ನಂತರ ಸಮಿತಿ ಸದಸ್ಯರು ತಮಗೆ ನಿಗದಿಗೊಳಿಸಿರುವ ಬೂತ್ ಗಳಲ್ಲಿ ಮನೆ ಮನೆ ಸಮೀಕ್ಷೆ ನಡೆಸಬೇಕು ಎಂದು ಸಲಹೆ ನೀಡಿದರು.

ಅಧಿಕಾರಿಗಳಿಗೆ ಖಡಕ್ ಸೂಚನೆ
ಸಮೀಕ್ಷೆ ವೇಳೆ ಐಎಲ್‌ಐ ಮತ್ತು ಸಾರಿ ಪ್ರಕರಣಗಳ ತಪಾಸಣೆ ನಡೆಸಿ ರೋಗ ಲಕ್ಷಣ ಆಧರಿಸಿ ಅವರನ್ನು ಹೋ ಮ್ ಐಸೋಲೇಷನ್, ಕೋವಿಡ್ ಕೇರ್ ಸೆಂಟರ್ ಮತ್ತು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಸಮಿತಿ ಸದಸ್ಯರಿಗೆ ಮಾರ್ಗಸೂಚಿ ಬಗ್ಗೆ ತರಬೇತಿ ಸಮಯದಲ್ಲೇ ಮನವರಿಕೆ ಮಾಡಿಕೊಡಬೇಕು. ಅವರಿಗೆ ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಯಂತ್ರಗಳನ್ನು ಒದಗಿಸಬೇಕು. ಆಂಬ್ಯುಲೆನ್ಸ್ ಒದಗಿಸುವುದು ಸಮಿತಿ ಜವಾಬ್ದಾರಿ ಆಗಬೇಕು. ಸಂಪರ್ಕಿತರ ಪತ್ತೆ ಕಾರ್ಯವೂ ಮರು ಆರಂಭ ಆಗಬೇಕು ಎಂದು ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ಯಾಂಡಲ್‌ವುಡ್‌ಗೆ ಕೊರೋನಾಘಾತ: ನೂರಾರು ಜೀವ ರಕ್ಷಿಸಿದ ಬಿಜೆಪಿ ಶಾಸಕ: ಜು. 15ರ ಟಾಪ್ 10 ಸುದ್ದಿ!

ಶಾಲೀನಿ ರಜನೀಶ್‌ಗೆ ಜವಾಬ್ದಾರಿ

ವಲಯವಾರು ಉಸ್ತುವಾರಿ ಅಧಿಕಾರಿಗಳು ಪ್ರತಿದಿನ ಈ ಎಲ್ಲಾ ಕೆಲಸಗಳ ಮೇಲೆ ನಿಗಾವಹಿಸಿ ಸೂಕ್ತ ಮಾರ್ಗದ ರ್ಶನ ನೀಡಬೇಕು. ಜತೆಗೆ ತಮ್ಮ ವ್ಯಾಪ್ತಿಗೆ ಸೇರಿರುವ ಲ್ಯಾಬ್ ಗಳ ಪರೀಕ್ಷೆ ಮತ್ತು ಕಾರ್ಯನಿರ್ವಹಣೆ ಮೇಲೂ ನಿಗಾ ಇಡಬೇಕು. ಒಂದು ವಾರದೊಳಗೆ ಯಾವುದೇ ಸ್ಯಾಂಪಲ್ ಬಾಕಿ ಇಲ್ಲದಂತೆ ನೋಡಿಕೊಳ್ಳಬೇಕು. ಇದರ ಸಮನ್ವಯವನ್ನು ಹಿರಿಯ ಅಧಿಕಾರಿ ಶಾಲೀನಿ ರಜನೀಶ್ ಅವರು ನೋಡಿಕೊಳ್ಳುತ್ತಾರೆಂದು ಅವರು ಹೇಳಿದರು.

ಧಾರಾವಿ ಮಾದರಿ
ಕೊಳಚೆ ಪ್ರದೇಶ ಮತ್ತು ಹೋಮ್ ಕ್ವಾರಂಟೈನ್ ಸೌಲಭ್ಯಗಳಿಲ್ಲದ ಜನವಸತಿ ಪ್ರದೇಶಗಳಲ್ಲಿ ಪಾಸಿಟಿವ್ ಆದವ ರನ್ನು ಸರ್ಕಾರಿ ವ್ಯವಸ್ಥೆಯ ಕ್ವಾರಂಟೈನ್ ಕೇಂದ್ರಗಳಲ್ಲಿ ಇಡುವ ಕೆಲಸ ಮಾಡಬೇಕು. ಇದಕ್ಕಾಗಿ ಮುಂಬಯಿ ಧಾರಾವಿಯಲ್ಲಿ ಅಳವಡಿಸಿಕೊಂಡಿರುವ ವ್ಯವಸ್ಥೆಯನ್ನು ನಗರದಲ್ಲೂ ರೂಪಿಸುವಂತೆ ನಿರ್ದೇಶನ ನೀಡಿದರು.

ವಲಯವಾರು ಅಗತ್ಯವಿರುವ ವಾಹನ ಮತ್ತು ಸಿಬ್ಬಂದಿ ಕೊರತೆಯನ್ನು ಬಿಬಿಎಂಪಿ ಆಯುಕ್ತರು ನಿರ್ವಹಿಸ ಬೇಕು. ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿ ಕೊರತೆ ನಿವಾರಿಸುವ ಕೆಲಸವನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ನೋಡಿಕೊಳ್ಳಬೇಕು ಎಲ್ಲರೂ ಒಟ್ಟಾಗಿ ಶ್ರಮಿಸುವ ಮೂಲಕ ನಗರದಲ್ಲಿ ಕೊರೋನಾ ನಿಯಂತ್ರಣಕ್ಕೆ ಸಹಕರಿಸಿ ಎಂದು ಸುಧಾಕರ್ ಮನವಿ ಮಾಡಿದರು.

click me!