
ಬೆಂಗಳೂರಿನಲ್ಲಿ ಹಾಡಹಗಲೇ ನಡೆದ 7.11 ಕೋಟಿ ರೂ. ದರೋಡೆ ಪ್ರಕರಣ ರಾಜ್ಯವನ್ನೇ ಅಲ್ಲೋಲ ಕಲ್ಲೋಲಗೊಳಿಸಿತ್ತು, ಪ್ರಕರಣದ ಕಿಂಗ್ಪಿನ್ ಆಗಿರುವ ಎಕ್ಸ್ ಎಕ್ಸೇವಿಯರ್ ಹಾಗೂ ಅಣ್ಣಪ್ಪನಾಯ್ಕ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಆಂಧ್ರ ಹಾಗೂ ತಮಿಳುನಾಡಿನ ಗಡಿಭಾಗಗಳಲ್ಲಿ ಗಟ್ಟಿಯಾಗಿ ಶೋಧ ನಡೆಯುತ್ತಿದೆ. ರಿಕವರಿಯಾದ 5.6 ಕೋಟಿ ಹಣವನ್ನು ಸೂಟ್ ಕೇಸ್ ಜೊತೆ ಚೀಲ ಹಾಗೂ ಬಟ್ಟೆಯಲ್ಲಿ ದಕ್ಷಿಣ ವಿಭಾಗ ಪೊಲೀಸರು ಕಮಿಷನರ್ ಕಚೇರಿಗೆ ತಂದಿದ್ದಾರೆ.
ಘಟನೆ ದಿನವಾದ ನವೆಂಬರ್ 19ರಂದು ಅಶೋಕ್ ಪಿಲ್ಲರ್ ಬಳಿ ವ್ಯಾಗನರ್ ಕಾರು ಮೊದಲು ಕಾಣಿಸಿಕೊಂಡಿದ್ದು, ನಂಬರ್ ಪ್ಲೇಟ್ ಇಲ್ಲದ ವಾಹನ ಬಳಕೆ ಮಾಡಿದ್ದ ವಿಚಾರ ತನಿಖೆಯಲ್ಲಿ ಪತ್ತೆಯಾಗಿದೆ. ಸಿಸಿ ಕ್ಯಾಮೆರಾ ಚಿತ್ರಣಗಳ ಮೂಲಕ 11.45ರ ವೇಳೆ ವ್ಯಾಗನರ್ ಕಾರು ಅಶೋಕ್ ಪಿಲ್ಲರ್ ರಸ್ತೆಗೆ ಬಂದು ಯು–ಟರ್ನ್ ಮಾಡಿ ಕೆಲವು ನಿಮಿಷಗಳು ಕಾದು ನಿಂತಿರುವುದು ದೃಢಪಟ್ಟಿದೆ.
ಹಣ ತುಂಬಿಕೊಂಡಿದ್ದ CMS ಕಂಪನಿಯ ವಾಹನ ಸ್ಥಳಕ್ಕೆ ಬರುವ ಮುನ್ನವೇ, ಇನೋವಾ ಕಾರ್ ಮತ್ತು ವ್ಯಾಗನರ್ ಕಾರ್ ಎರಡಕ್ಕೂ ಯೋಜನೆ ಪ್ರಕಾರ ಮುಂಚಿತವಾಗಿ ಅಡ್ಡ ಹಾಕಿ ವಾಹನವನ್ನು ನಿಲ್ಲಿಸಲಾಗಿತ್ತು. ವ್ಯಾಗನರ್ನಿಂದ ಇಳಿದ ದರೋಡೆಕೋರರು ಆರ್.ಬಿ.ಐ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ನಕಲಿ ಐಡಿ ಕಾರ್ಡುಗಳನ್ನು ತೋರಿಸಿ CMS ಸಿಬ್ಬಂದಿಗೆ ಬೆದರಿಕೆ ಹಾಕಿದ್ದರು.
ರಾಬರ್ಸ್ CMS ಸಿಬ್ಬಂದಿಯನ್ನು ತಮ್ಮ ಕಾರಿಗೆ ಎಳೆದುಕೊಂಡು ಹೋಗಿ, ಇನೋವಾ ಮತ್ತು ವ್ಯಾಗನರ್ ಎರಡನ್ನೂ ಬಳಸಿ ಸ್ಥಳದಿಂದ ಪರಾರಿಯಾಗಿದ್ದರು. ನಂತರ ಕುಪ್ಪಂ ಹತ್ತಿರ ಇನೋವಾ ಕಾರನ್ನು ನಿಲ್ಲಿಸಿ, ಹಣವನ್ನು ಚೀಲಗಳಿಗೆ ತುಂಬಿಕೊಂಡು ವ್ಯಾಗನರ್ನಲ್ಲಿ ಪರಾರಿಯಾದರು.
ಬೆಂಗಳೂರಿನ ಪೊಲೀಸರು ತನಿಖೆಯಲ್ಲಿ ಸುಳಿವು ಪಡೆದ ನಂತರ ಚಿತ್ತೂರಿನ ಅರಣ್ಯ ಪ್ರದೇಶದಲ್ಲಿ ಚೇಸಿಂಗ್ ನಡೆಸಿ ಮುಖ್ಯ ಆರೋಪಿ ಎಕ್ಸ್ ಎಕ್ಸೇವಿಯರ್ ನನ್ನು ಬಂಧಿಸಿದ್ದಾರೆ. ಅರಣ್ಯ ಪ್ರದೇಶದ ಚಿತ್ರಚೇಡು ಹತ್ತಿರ 25 ಮಂದಿ CCB ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರ ತಂಡ ಸೇರಿ ತೀವ್ರ ಶೋಧ ನಡೆಸಿದರು.
ಪ್ರಕರಣದ ತನಿಖೆ ವೇಳೆ CMS ನ ಸಿಬ್ಬಂದಿಯಾದ ಗೋಪಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, CMS ವ್ಯಾನ್ ಸಂಚಾರದ ವಿವರಗಳು, ರೂಟ್ ಮ್ಯಾಪ್, ಕ್ಯಾಶ್ ಮೂವ್ಮೆಂಟ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು, ಇವನೇ ರಾಬರಿಗೆ ಸಹಾಯ ಮಾಡಿದನೆಂಬುದು ಪೊಲೀಸ್ ಮೂಲಗಳ ಮಾಹಿತಿ.
ರಾಬರಿಕೋರರು UP ರಿಜಿಸ್ಟ್ರೇಷನ್ (UP 14 BX 2500) ಹೊಂದಿರುವ ಇನೋವಾ ಕಾರು ಚಿತ್ತೂರಿನ ಗುಡಿಪಾಲ್ ಬಳಿ ಬಿಟ್ಟು ಪಲಾಯನ ಮಾಡಿದ್ದಾರೆ. ಕೀ ಇಲ್ಲದೇ ಕಾರು ಪತ್ತೆಯಾಗಿದ್ದು, ಕಾರಿನ ಕೀ ಮೇಕರ್ ಗಾಗಿ ಹುಡುಕಾಟವೂ ನಡೆಯುತ್ತಿದೆ. ರಾಬರಿ ಬಳಿಕ ಆರೋಪಿಗಳು ಹಣವನ್ನು ಟ್ರಂಕ್ಗಳಲ್ಲಿ ತುಂಬಿಕೊಂಡು, ಆಂಧ್ರ ಮತ್ತು ತಮಿಳುನಾಡಿನ ಗಡಿಭಾಗದ ಮನೆಗಳಲ್ಲಿ ಅಡಗಿಸಿದ್ದರೂ, ಪೊಲೀಸರ ದಾಳಿ ವೇಳೆ ಎರಡು ಟ್ರಂಕ್ಗಳೂ ಪತ್ತೆಯಾಗಿವೆ. ಸುಮಾರು 80% ಹಣವಾದ ರೂ. 5.60 ಕೋಟಿ ರೂ. ಈಗಾಗಲೇ ಪತ್ತೆಯಾಗಿರುವ ಮಾಹಿತಿ ದೃಢಪಟ್ಟಿದೆ.
ರಾಬರಿ ಬಳಿಕ ನಾಪತ್ತೆಯಾಗಿರುವ ನಾಲ್ವರು ಆರೋಪಿ ರವಿ, ರಾಕೇಶ್, ಜಿತೇಶ್, ದಿನೇಶ್ ತಲಾ 10 ಲಕ್ಷ ರೂ. ಪಡೆದು ಬೇರೆ ಬೇರೆ ದಿಕ್ಕುಗಳಲ್ಲಿ ಪರಾರಿಯಾಗಿದ್ದಾರೆ ಎಂಬ ಶಂಕೆ ಇದೆ. ಚಿತ್ತೂರಿನ ಕೋರ್ಟ್ನಿಂದ ಟ್ರಾನ್ಸಿಟ್ ವಾರಂಟ್ ಪಡೆದು, ಬಂಧಿತರಾದ ಅಣ್ಣಪ್ಪನಾಯ್ಕ್, ಎಕ್ಸ್ ಎಕ್ಸೇವಿಯರ್, ಗೋಪಿ, ನೆಲ್ಸನ್, ನವೀನ್ , ಇವರನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಇಂದೇ ಸಂಜೆ ACJM ಕೋರ್ಟ್ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪೋಲೀಸ್ ಕಸ್ಟಡಿಗೆ ಅರ್ಜಿ ಸಲ್ಲಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ