ಬೆಂಗಳೂರು ಪೊಲೀಸರ ಕಳ್ಳಾಟ; ಉದ್ಯಮಿ ವಂಚಿಸಿ ಲಕ್ಷ ಲಕ್ಷ ಪೀಕಿದ ಮೂವರು ಪೋಲೀಸರು ಅರೆಸ್ಟ್!

Published : May 10, 2025, 07:01 PM IST
ಬೆಂಗಳೂರು ಪೊಲೀಸರ ಕಳ್ಳಾಟ; ಉದ್ಯಮಿ ವಂಚಿಸಿ ಲಕ್ಷ ಲಕ್ಷ ಪೀಕಿದ ಮೂವರು ಪೋಲೀಸರು ಅರೆಸ್ಟ್!

ಸಾರಾಂಶ

ಬೆಂಗಳೂರಿನಲ್ಲಿ ಪೊಲೀಸ್ ಭ್ರಷ್ಟಾಚಾರ ಮುಂದುವರೆದಿದೆ. ₹50 ಲಕ್ಷ ವಂಚಿಸಿದ್ದ ಆರೋಪಿ ಸೇರಿದಂತೆ ₹6 ಲಕ್ಷ ಸುಲಿಗೆ ಮಾಡಿದ ಮೂವರು ಪೊಲೀಸರನ್ನು ಬಂಧಿಸಲಾಗಿದೆ. ವಂಚನೆಗೆ ಒಳಗಾದ ನಾಗರಾಜ್ ಎಂಬುವವರು ಕ್ರಿಪ್ಟೋ ವ್ಯವಹಾರದಲ್ಲಿ ಹಣ ಕಳೆದುಕೊಂಡಿದ್ದಾರೆ. ಚಿಕ್ಕಜಾಲ ಠಾಣೆಯ ಪೊಲೀಸರು ಸುಲಿಗೆ ಮಾಡಿದ್ದಾರೆ. ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ. ಹೆಚ್.ಎ.ಎಲ್ ಬಳಿ ಗುಜರಿ ಅಂಗಡಿಯಿಂದ ಹಣ ವಸೂಲಿ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು (ಮೇ 10): ಸಿಲಿಕಾನ್ ಸಿಟಿ ಬಬೆಂಗಳೂರಿನಲ್ಲಿ ಪೊಲೀಸರ ಕಳ್ಳಾಟ ಮುಂದುವರೆದಿದೆ. ಅಮಾಯಕ ವ್ಯಕ್ತಿಯ ಬಳಿ 6 ಲಕ್ಷ ರೂ. ಹಣ ಸುಲಿಗೆ ಮಾಡಿದ್ದ ಮೂವರು ಪೊಲೀಸರು ಉದ್ಯಮದ ಹೆಸರಿನಲ್ಲಿ 50 ಲಕ್ಷ ರೂ. ಹಣ ಕಸಿದುಕೊಂಡು ಪರಾರಿ ಆಗಿದ್ದ ಗುಂಪಿನ ಒಬ್ಬ ಸದಸ್ಯ ಸೇರಿದಂತೆ ಒಟ್ಟು 4 ಆರೋಪಿಗಳನ್ನು ಬಾಗಲೂರು ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.

ದೂರುದಾರ ನಾಗರಾಜ್ ಅವರು, ಬೆಂಗಳೂರಿನಲ್ಲಿ ಜಿಎಸ್‌ಟಿ ಫೈಲಿಂಗ್ ಕೆಲಸ ಮಾಡಿಕೊಂಡಿದ್ದರು. ರಕ್ಷಿತ್ ಎಂಬಾತ ಅದಾನಿ ಗ್ರೀನ್ ಎನರ್ಜಿ ಲಿಮಿಟೆಟ್‌ಗೆ ಜಿಎಸ್‌ಟಿ ಬಿಲ್‌ ಕೇಳಿಕೊಂಡು ಬಂದು ನಾಗರಾಜ್‌ಗೆ ಪರಿಚಯವಾಗಿದ್ದನು. ನಂತರ ಇದೇ ರಕ್ಷಿತ್ ಎಂಬ ಯುವಕ ಪುನೀತ್ ಎಂಬಾತನಿಂದ ತನ್ನ ಕಂಪನಿಗೆ ಕ್ರಿಪ್ಟೋ ಕರೆನ್ಸಿ ಖರೀದಿಸುತ್ತಿದ್ದೇನೆ ಎಂದು ಪರಿಚಯ ಮಾಡಿಕೊಟ್ಟಿದ್ದಾನೆ. ಪುನೀತನಿಗೆ ಕೊಡುವುದಕ್ಕೆ 50 ಲಕ್ಷ ರೂ. ಜಿಎಸ್‌ಟಿ ಬಿಲ್ ಬೇಕು ಎಂದು ಕೇಳಿದಾಗ ನೀವು 65 ಲಕ್ಷ ರೂ. ಹಣವನ್ನು ಪಾವತಿ ಮಾಡಬೇಕು ಎಂದು ನಾಗರಾಜ್ ಕೇಳಿದ್ದಾರೆ. ಇದಕ್ಕೆ ರಕ್ಷಿತ್ ಮತ್ತು ಪುನೀತ್ ಒಪ್ಪಿಕೊಂಡಿದ್ದಾರೆ.

ಈ ಸಂಬಂಧ ಒಂದು ಹೋಟೆಲ್‌ನಲ್ಲಿ ಪುನೀತ್‌ನನ್ನು ಭೇಟಿ ಮಾಡಲು ನಾಗರಾಜು ಮತ್ತು ರಕ್ಷಿತ್ ಇಬ್ಬರೂ ಹೋಗಿದ್ದರು. ಆದರೆ, ಇಲ್ಲಿಗೆ ಏಕಾಏಕಿ ದಾಳಿ ಮಾಡುವ ರೀತಿಯಲ್ಲಿ ಬಂದ ಚಿಕ್ಕಜಾಲ ಠಾಣೆ ಮೂವರು ಪೊಲೀಸರು, ನಾಗರಾಜ್ ಮತ್ತು ಸ್ನೇಹಿತರನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲಿಂದ ಜೀಪಿನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಪೊಲೀಸರು ನೀವು ಅಕ್ರಮವಾಗಿ ಹಣದ ವ್ಯವಹಾರ ಮಾಡುತ್ತಿದ್ದೀರಿ ಎಂದು ಹೆದರಿಸಿ ನಾಗರಾಜ್ ಕಡೆಯಿಂದ 6 ಲಕ್ಷ ರೂ. ಹಣವನ್ನು ವಸೂಲಿ ಮಾಡಿದ್ದಾರೆ. ಇದಾದ ನಂತರ ಇಂತಹ ವ್ಯವಹಾರಗಳನ್ನು ಮಾಡಬಾರದು ಎಂದು ಎಚ್ಚರಿಕೆ ನೀಡಿ ಅಲ್ಲಿಂದ ಹೋಗಿದ್ದಾರೆ.

ಪೊಲೀಸರು ನಾಗರಾಜ್‌ನನ್ನು ಬಿಟ್ಟು ಹೋದ ಬಳಿಕ ಕರೆ ಮಾಡಿದ ಪುನೀತ್ 50 ಲಕ್ಷ ರೂ. ಮೌಲ್ಯದ ಜಿಎಸ್‌ಟಿ ಬಿಲ್‌ ನೀಡುವಂತೆ ತಾನು ಹಣ ನೀಡಲು ಸಿದ್ಧ ಎಂಬಂತೆ ಮಾತನಾಡಿದ್ದಾನೆ. ನಾಳೆ ಸ್ಥಳೀಯ ಒಂದು ಪಿಜಿಯ ಬಳಿ ಬರುವಂತೆ ಸೂಚಿಸಿದ್ದಾನೆ. ಆಗ ಪುನೀತ್ ತನ್ನ ಗ್ಯಾಂಗ್‌ನೊಂದಿಗೆ ಬಂದು ನಾಗರಾಜ್‌ನನ್ನು ಕಾರಿನಲ್ಲಿ ಕೂರಿಸಿಕೊಂಡು ಬೇರೆಡೆ ಕರೆದೊಯ್ದಿದ್ದಾರೆ. ನಂತರ ನಾಗರಾಜ್‌ನಿಂದ 50 ಲಕ್ಷ ರೂ. ಹಣ ಹಾಗೂ ಮೈಮೇಲಿದ್ದ ಚಿನ್ನವನ್ನು ಕದ್ದು ಪರಾರಿ ಆಗಿದ್ದಾರೆ. ಈ ಸಂಬಂಧ ನಾಗರಾಜ್ ಅವರು ಬಾಗಲೂರು ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದರು.

ಇದೀಗ ಚಿಕ್ಕಜಾಲ ಠಾಣೆಯ ಪೊಲೀಸ್ ಸಿಬ್ಬಂದಿ ವಿಜಯ್ ಕುಮಾರ್, ಸಂತೋಷ್, ಮಂಜುನಾಥ್ ಮತ್ತು ನಾಗರಾಜ್‌ನನ್ನು ಸುಲಿಗೆ ಮಾಡುವುದಕ್ಕೆ ಪೊಲೀಸರಿಗೆ ಮಾಹಿತಿ ಕೊಟ್ಟ ಯೂಟ್ಯೂಬರ್‌ ಪ್ರವೀಣ್ ಎಂಬಾತನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್ನು ಹಣ ಪಡೆದಿದ್ದ ಪ್ರಮುಖ ಆರೋಪಿ ಪುನೀತ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಬೆಂಗಳೂರು ಪೊಲೀಸರಿಂದ ಮಾಮೂಲಿ ವಸೂಲಿ ಆರೋಪ.. 
ಜನರ ಕಷ್ಟಕ್ಕೆ ಸ್ಪಂದಿಸಬೇಕಿರುವ ಗಸ್ತು ವಾಹನದಿಂದಲೇ ವಸೂಲಿ ಆರೋಪ ಕೇಳಿಬಂದಿದೆ. ಹೆಚ್.ಎ.ಎಲ್‌ ಬಳಿಯ ಅನ್ನಸಂದ್ರ ಪಾಳ್ಯದಲ್ಲಿ ಗುಜುರಿ ಅಂಗಡಿಯವರಿಂದ ಪೊಲೀಸರು ಹಣ ವಸೂಲಿ ಮಾಡಲಾಗಿದೆ. ರಾತ್ರಿ ವೇಳೆ ಗಸ್ತು ತಿರುಗುವ ಪೊಲೀಸರ ವಾಹನದ ಬಳಿ ಬಂದು ಗುಜರಿ ಅಂಗಡಿಯವನು ಹಣ ಕೊಟ್ಟು ಹೋಗಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಆಧರಿಸಿ ಸಾರ್ವಜನಿಕರು ಇಂತಹ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದ್ದಾರೆ. ಜನರನ್ನು ರಕ್ಷಿಸುವ ಪೊಲೀಸರೇ ಹೀಗೆ‌ ಮಾಡಿದರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಘಟನೆ ಹೆಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ
ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್