
ಬೆಂಗಳೂರು (ಮಾ.9): ತಂಪಾದ ಗಾಳಿ, ಆಹ್ಲಾದಕರ ವಾತಾವರಣಕ್ಕೆ ಹೆಸರಾಗಿದ್ದ ಬೆಂಗಳೂರು ಈಗ ದಿಢೀರ್ ಉಷ್ಣನಗರಿಯಾಗಿ ಮಾರ್ಪಟ್ಟಿದೆ. ನಗರದ ತಾಪಮಾನ ಏರುತ್ತಿರುವ ರೀತಿ ನೋಡಿದರೆ, ನಾವು ಬೆಂಗಳೂರಿನಲ್ಲಿದ್ದೇವೋ ಅಥವಾ ಉತ್ತರ ಕರ್ನಾಟಕದ ಬಿಸಿಲಿನಲ್ಲಿ ಸಿಲುಕಿದ್ದೇವೋ ಎಂಬ ಅನುಮಾನ ಕಾಡತೊಡಗಿದೆ. ಈ ಬಾರಿ ಬೇಸಿಗೆ ಆರಂಭದಲ್ಲೇ ಸೂರ್ಯನ ಪ್ರಖರ ಬಿಸಿಲಿಗೆ ಜನರು ತತ್ತರಿಸಿಹೋಗಿದ್ದಾರೆ.
ಬೇಸಿಗೆ ಆರಂಭವಾಗಿ ಕೇವಲ 10 ದಿನಗಳು ಕಳೆಯುವಷ್ಟರಲ್ಲೇ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಸಾಮಾನ್ಯವಾಗಿ ಮಾರ್ಚ್ ಅಂತ್ಯದಲ್ಲಿ ಕಂಡುಬರುತ್ತಿದ್ದ ಬಿಸಿಲು ಈ ಬಾರಿ ಫೆಬ್ರವರಿ ಕೊನೆಯಲ್ಲೇ ತನ್ನ ಪ್ರತಾಪ ತೋರಿಸುತ್ತಿದೆ. ಮಧ್ಯಾಹ್ನ ಹೊರಗಡೆ ಕಾಲಿಡಲಾರದಷ್ಟು ಉರಿ ಬಿಸಿಲು ಮೈಚುರುಗುಟ್ಟಿ ಸುಸ್ತಾಗಿಸುತ್ತಿದೆ.
ಬೆಂಗಳೂರು ನಗರದಲ್ಲಿ ಗರಿಷ್ಠ 33.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಕನಿಷ್ಠ ಉಷ್ಣಾಂಶ 20.6 ಡಿಗ್ರಿ ಸೆಲ್ಸಿಯಸ್ ಕಂಡುಬಂದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭಾಗದಲ್ಲಿ ಬಿಸಿಲು ಇನ್ನೂ ಹೆಚ್ಚಾಗಿದ್ದು, ಅಲ್ಲಿ ಗರಿಷ್ಠ 34.7 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇನ್ನು ಎಚ್ಎಎಲ್ (HAL) ಏರ್ಪೋರ್ಟ್ ವ್ಯಾಪ್ತಿಯಲ್ಲಿ 33.1 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದೆ.
ಉಷ್ಣಾಂಶ ಏರಿಕೆ; ರಾತ್ರಿಯಲ್ಲೂ ತಪ್ಪದ ಸೆಕೆ
ಕೇವಲ ಹಗಲಷ್ಟೇ ಅಲ್ಲದೆ, ರಾತ್ರಿಯ ವೇಳೆಯಲ್ಲೂ ಬೆಂಗಳೂರಿಗರಿಗೆ ಸೆಕೆಯ ಅನುಭವ ಹೆಚ್ಚಾಗುತ್ತಿದೆ. ಕನಿಷ್ಠ ಉಷ್ಣಾಂಶದಲ್ಲಿ ಏರಿಕೆಯಾಗಿರುವುದರಿಂದ ರಾತ್ರಿಯ ಹೊತ್ತು ವಾತಾವರಣ ತಂಪಾಗುತ್ತಿಲ್ಲ. ಇದರಿಂದಾಗಿ ಮನೆಗಳ ಒಳಗೆ ಫ್ಯಾನ್, ಎಸಿಗಳ ಬಳಕೆ ಹೆಚ್ಚಾಗಿದ್ದು, ವಿಪರಿತ ಸೆಕೆಯಿಂದ ಸಿಲಿಕಾನ್ ಸಿಟಿ ಜನರು ಕಂಗಾಲಾಗಿದ್ದಾರೆ.
ಉಫ್! ಮತ್ತಷ್ಟು ಹೆಚ್ಚಳದ ಮುನ್ಸೂಚನೆ!
ಬೇಸಿಗೆಯ ಆರಂಭವೇ ಇಷ್ಟು ಭೀಕರವಾಗಿರುವಾಗ, ಮುಂದಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೆಂಗಳೂರಿನ ಉಷ್ಣಾಂಶ ಎಷ್ಟು ಏರಿಕೆ ಆಗಬಹುದು ಎಂಬ ಆತಂಕ ಶುರುವಾಗಿದೆ. ಹವಾಮಾನ ಇಲಾಖೆಯ ವರದಿಗಳ ಪ್ರಕಾರ, ಮುಂದಿನ ಕೆಲ ದಿನಗಳ ಕಾಲ ತಾಪಮಾನ ಇದೇ ರೀತಿ ಏರುಗತಿಯಲ್ಲಿ ಸಾಗುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ