ರೈಲಿನ ಮಹಿಳಾ ಬೋಗಿಯಲ್ಲಿದ್ದ ಮಹಿಳೆಯನ್ನು ತಳ್ಳಿ ಕೊಲೆ ಶಂಕೆ: ಅರಣ್ಯ ಇಲಾಖೆ ಸಿಬ್ಬಂದಿ ಸಾವು

By Sathish Kumar KHFirst Published Feb 1, 2024, 11:22 AM IST
Highlights

ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನ ಮಹಿಳಾ ಬೋಗಿಯಲ್ಲಿ ಕುಳಿತು ಆಗಮಿಸುತ್ತಿದ್ದ ಅರಣ್ಯ ಇಲಾಖೆ ಮಹಿಳಾ ಸಿಬ್ಬಂದಿಯನ್ನು ತಳ್ಳಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ತುಮಕೂರು (ಫೆ.01): ಬೆಂಗಳೂರಿನ ಅರಣ್ಯ ಭವನದ ಸಿಬ್ಬಂದಿ ಶಿವಮೊಗ್ಗದಲ್ಲಿ ನಡೆದ ಡಿಎಆರ್ ಪರೀಕ್ಷಾ ಮೇಲ್ವಿಚಾರಕಿಯಾಗಿ ಕಾರ್ಯ ನಿರ್ವಹಿಸಿ ವಾಪಸ್ ರೈಲಿನಲ್ಲಿ ಬರುವಾಗ ತುಮಕೂರು ಬಳಿ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. 

ತುಮಕೂರು ಸಮೀಪದ ಹಿರೇಹಳ್ಳಿ ಸಮೀಪ ಘಟನೆ ನಡೆದಿದ್ದು, ಮೃತರನ್ನು ಅನ್ನಪೂರ್ಣ (50) ಎಂದು ಗುರುತಿಸಲಾಗಿದೆ. ಹಿರೇಹಳ್ಳಿಯ ರೈಲ್ವೇ ಹಳಿ ಮೇಲೆ ಮೃತ ಶರೀರ‌ ಪತ್ತೆಯಾಗಿದೆ. ಇವರು ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದವರಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ಅರಣ್ಯ ಭವನದಲ್ಲಿ ಸ್ಟೆನೋಗ್ರಾಫರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಾಗಿದ್ದ ಅನ್ನಪೂರ್ಣ ಅವರು ಪರೀಕ್ಷಾ ಕೊಠಡಿ ಮೇಲ್ವಿಚಾರಕ ಕಾರ್ಯನಿರ್ವಹಣೆ ನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದರು. ಕೆಲಸ ಮುಗಿಸಿ ವಾಪಸ್ ರೈಲಿನಲ್ಲಿ  ಬೆಂಗಳೂರಿಗೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಬೆಳಗಾವಿ ಡಬಲ್ ಮರ್ಡರ್: ಮದುವೆಯಾಗಿ 30 ದಿನಕ್ಕೆ ಓಡಿಹೋದ ಹೆಂಡ್ತಿಯನ್ನು ಪ್ರಿಯಕರನೊಂದಿಗೆ ಕೊಲೆಗೈದ ಗಂಡ

ಶಿವಮೊಗ್ಗದಿಂದ ಜ.30ರಂದು ಬೆಂಗಳೂರಿಗೆ ಹೊರಟ ಅನ್ನಪೂರ್ಣ ಅವರೊಂದಿಗೆ ಸಹೋದರ ಬ್ರಹ್ಮಾನಂದ್ ಕೂಡ ಬರುತ್ತಿದ್ದರು. ಬ್ರಹ್ಮಾನಂದ್ ರಿಸರ್ವೇಷನ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರೆ, ಅನ್ನಪೂರ್ಣ ರೈಲಿನ  ಮಹಿಳಾ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಬ್ರಹ್ಮಾನಂದ್ ಇಳಿದಾಗ ಅವರ ಸಹೋದರಿ ಪತ್ತೆಯಾಗಿಲ್ಲ. ಹೀಗಾಗಿ, ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, ರೈಲ್ವೆ ನಿಲ್ದಾಣಗಳ ಸಿಸಿಟಿವಿ ಪರಿಶೀಲನೆ ಮಾಡಿದಾಗ ಎಲ್ಲಿಯೂ ಇಳಿದು ಹೋದ ಬಗ್ಗೆ ಸುಳಿವು ಸಿಕ್ಕಿಲ್ಲ. ಹೀಗಾಗಿ, ರೈಲ್ವೆ ಹಳಿಗಳಲ್ಲಿ ಶೋಧನೆ ಮಾಡಿದಾಗ ತುಮಕೂರಿನ ಹಿರೇಹಳ್ಳಿ ಬಳಿ ಶವ ಪತ್ತೆಯಾಗಿದೆ. ಇಲ್ಲಿಂದ 20 ಕಿಲೋ ಮೀಟರ್ ದೂರದಲ್ಲಿ ಅನ್ನಪೂರ್ಣ ಅವರ ಬ್ಯಾಗ್ ಪತ್ತೆಯಾಗಿದೆ.

ಅನ್ನಪೂರ್ಣ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಯಾರೋ ಕಿಡಿಗೇಡಿಗಳು ರೈಲಿನಿಂದ ತಳ್ಳಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

6 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಗಂಡ ಹೆಣ್ಣಾಗಿ ಪತ್ತೆ:
ರಾಮನಗರ (ಫೆ.1):
ನಾಪತ್ತೆಯಾಗಿದ್ದ ವಿವಾಹಿತ ವ್ಯಕ್ತಿಯೊಬ್ಬ ಲಿಂಗ ಬದಲಾವಣೆ ಮಾಡಿಕೊಂಡು ಪತ್ತೆಯಾದ ಘಟನೆ ರಾಮನಗರದಲ್ಲಿ ವರದಿಯಾಗಿದೆ. 2017ರಲ್ಲಿ ಮನೆ ಬಿಟ್ಟು ಹೋಗಿದ್ದ ಗಂಡ, ಇದೀಗ ಲಿಂಗ ಪರಿವರ್ತನೆ ಮಾಡಿಕೊಂಡಿರುವುದನ್ನು ಕಂಡ ಕುಟುಂಬಸ್ಥರು ಆಘಾತಗೊಂಡಿದ್ದು, ಗಂಡನನ್ನು ಆ ರೂಪದಲ್ಲಿ ಕಂಡ ಹೆಂಡತಿ ಆಘಾತಕ್ಕೀಡಾಗಿದ್ದಾರೆ. ಮೂಲಗಳ ಪ್ರಕಾರ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಣರಾವ್ ಎಂಬುವರು 2015 ರಲ್ಲಿ ಮದುವೆಯಾಗಿ ಪತ್ನಿಯೊಂದಿಗೆ ರಾಮನಗರಲ್ಲಿ ನೆಲೆಸಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಮದುವೆ ಆದ ಎರಡೇ ವರ್ಷಕ್ಕೆ ಅಂದರೆ 2017ರಲ್ಲಿ ಲಕ್ಷ್ಮಣ್ ಸಾಲದ ವಿಚಾರಕ್ಕೆ ಜಿಗುಪ್ಸೆಗೊಂಡು ಮನೆಯಿಂದ ನಾಪತ್ತೆಯಾಗಿದ್ದ. ಗಂಡನ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಪತ್ನಿ ಐಜೂರು ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದರು.

ಮದುವೆಗೆ 1 ದಿನ ಮೊದಲು ವಧುವಿನ ಮೇಲೆ ಅತ್ಯಾಚಾರ, ವಿವಾಹ ರದ್ದುಗೊಳಿಸಿದ ವರನ ಕುಟುಂಬ!

ಸುಳಿವು ಕೊಟ್ಟ 'ಬಿಗ್ ಬಾಸ್':
ಬರೊಬ್ಬರಿ ಆರು ವರ್ಷಗಳ ಬಳಿಕ ಇದೀಗ ಲಕ್ಷ್ಮಣ್ ರಾವ್ ಸುಳಿವು ಪತ್ತೆಯಾಗಿದೆ. ಆದರೆ, ಸುಳಿವು ನೀಡಿದ್ದು ಮಾತ್ರ ಕನ್ನಡದ ರಿಯಾಲಿಟಿ ಷೋ ಬಿಗ್ ಬಾಸ್... ಹೌದು.. ಇತ್ತೀಚೆಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿ ನೀತು ವನಜಾಕ್ಷಿ ಮೈಸೂರಿಗೆ ಆಗಮಿಸಿದ್ದರು. ಮೈಸೂರಿನಲ್ಲಿ ತೃತೀಯ ಲಿಂಗಿಗಳು ಅವರನ್ನು ಸ್ವಾಗತಕ್ಕೆ ತೆರಳಿ ಸನ್ಮಾನಿಸಿದ್ದರು. ಈ ವೇಳೆ ತೃತೀಯ ಲಿಂಗಿ ರಶ್ಮಿಕಾ ಮಾಡಿದ್ದ ರೀಲ್ಸ್‌ನಲ್ಲಿ ಲಕ್ಷ್ಮಣ್ ಹೆಣ್ಣಾಗಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಅವರನ್ನು ಪತ್ತೆ ಮಾಡಿದ ಪೊಲೀಸರು ‘ನಿನಗೆ ಹೆಂಡತಿ ಮಕ್ಕಳು ಬೇಡವೇ” ಎಂದು ಪ್ರಶ್ನಿಸಿದಾಗ, ‘ನನಗೆ ನನ್ನ ತೃತೀಯ ಲಿಂಗಿಗಳ ಕುಟುಂಬವೇ ಇಷ್ಟ. ಹೆಂಡತಿ ಮಕ್ಕಳು ಬೇಡ, ನಿಮ್ಮ ತಂಟೆಗೆ ಬರುವುದಿಲ್ಲ. ನನ್ನನ್ನು ಬಿಟ್ಟು ಬಿಡಿ’ ಎಂದು ಬೇಡಿಕೊಂಡಿದ್ದಾನೆ. ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡು ನಾಪತ್ತೆ ಪ್ರಕರಣ ಇತ್ಯರ್ಥ ಗೊಳಿಸಿದ್ದಾರೆ. 

click me!