
ಬೆಂಗಳೂರು (ಮಾ.13): ದೇಶಾದ್ಯಂತ ಸೈಬರ್ ವಂಚನೆಗಳು ದಿನಕ್ಕೊಂದು ಹೊಸ ರೂಪ ಪಡೆಯುತ್ತಿವೆ. ಈವರೆಗೆ ಸಿಬಿಐ ಅಧಿಕಾರಿಗಳು, ಮುಂಬೈ ಪೊಲೀಸರು ಅಥವಾ ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಬರುತ್ತಿದ್ದ 'ಡಿಜಿಟಲ್ ಅರೆಸ್ಟ್' (Digital Arrest) ಕರೆಗಳು, ಈಗ ನೇರವಾಗಿ ಬೆಂಗಳೂರು ಸಿಟಿ ಪೊಲೀಸರ ಹೆಸರಿನಲ್ಲೇ ಬರಲಾರಂಭಿಸಿವೆ. ಹೌದು, ಸಿಟಿ ಪೊಲೀಸರ ಲೋಗೋ, ಸೀಲು ಮತ್ತು ಸ್ವತಃ ಪೊಲೀಸ್ ಕಮಿಷನರ್ ಅವರ ಸಹಿಯನ್ನೇ ನಕಲು ಮಾಡಿ ಮಹಿಳೆಯೊಬ್ಬರನ್ನು ವಂಚಿಸಲು ಸೈಬರ್ ಖದೀಮರು ಬಲೆ ಹೆಣೆದ ಘಟನೆ ಬೆಳಕಿಗೆ ಬಂದಿದೆ.
ನಗರದ ಮಹಿಳೆಯೊಬ್ಬರಿಗೆ ಅಪರಿಚಿತ ಸಂಖ್ಯೆಯಿಂದ ಖಾಸಗಿ ಟೆಲಿಕಾಲ್ ಮೂಲಕ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. 'ನಿಮ್ಮ ತಾಯಿ ಅಕ್ರಮ ಕೃತ್ಯವೊಂದರಲ್ಲಿ ಭಾಗಿಯಾಗಿದ್ದಾರೆ. ಅವರ ಮೇಲೆ ಗಂಭೀರವಾದ ಕ್ರಿಮಿನಲ್ ಪ್ರಕರಣ ದಾಖಲಾಗಿದೆ' ಎಂದು ಹೆದರಿಸಿದ್ದಾನೆ. ನಂತರ ಈ ಕರೆಯನ್ನು ವಿಡಿಯೋ ಕಾಲ್ಗೆ ಕನ್ವರ್ಟ್ ಮಾಡಲಾಗಿದೆ. ವಿಡಿಯೋ ಕಾಲ್ನಲ್ಲಿ ಅಧಿಕಾರಿಯಂತೆ ಪೋಸ್ ಕೊಟ್ಟ ಖದೀಮ, ಪ್ರಕರಣದ ತನಿಖೆಗಾಗಿ ನಿಮ್ಮ ಮನೆಯ ಲೊಕೇಶನ್ ಕಳುಹಿಸಬೇಕು ಎಂದು ಮಹಿಳೆಯನ್ನು ಒತ್ತಾಯಿಸಿದ್ದಾನೆ.
ಮಹಿಳೆಗೆ ನಂಬಿಕೆ ಬರಿಸಲು ಸೈಬರ್ ಖದೀಮರು ಅತ್ಯಂತ ಚಾಣಾಕ್ಷತನ ಪ್ರದರ್ಶಿಸಿದ್ದಾರೆ. ಸುಪ್ರೀಂ ಕೋರ್ಟ್ನ ಆದೇಶದ ಪ್ರತಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಧಿಕೃತ ಆದೇಶದ ಪ್ರತಿ ಎಂದು ಹೇಳಿ ಕೆಲವು ದಾಖಲೆಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದಾರೆ. ಈ ದಾಖಲೆಗಳಲ್ಲಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ನಕಲಿ ಸೀಲು ಮತ್ತು ಸಹಿಯನ್ನು ಬಳಸಲಾಗಿತ್ತು. ಅಲ್ಲದೆ, ಕರ್ನಾಟಕ ಸಿಐಡಿಯಿಂದ ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಸುಳ್ಳು ವರದಿಯನ್ನು ಕೂಡ ಸೃಷ್ಟಿಸಿದ್ದರು.
ಸೈಬರ್ ಕಿಡಿಗೇಡಿಗಳು 'ನೈನಾ ಪ್ರಕಾಶ್' ಎಂಬುವರ ಹೆಸರಿನಲ್ಲಿ ಕೆಲವು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಹಿಳೆಗೆ ತೋರಿಸಿದ್ದರು. ನಿಮ್ಮ ತಾಯಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ನಂಬಿಸಲು ಹರಸಾಹಸ ಪಟ್ಟಿದ್ದರು. ಆದರೆ, ಕಳುಹಿಸಿದ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಮಹಿಳೆಗೆ ಸಂಶಯ ಮೂಡಿದೆ. ದಾಖಲೆಗಳಲ್ಲಿದ್ದ ಅಕ್ಷರ ದೋಷಗಳು ಮತ್ತು ಲೋಗೋಗಳ ವಿನ್ಯಾಸ ನೋಡಿ ಇದು ವಂಚನೆ ಇರಬಹುದು ಎಂದು ಅವರು ಅರಿತಿದ್ದಾರೆ.
ಖದೀಮರ ಜಾಲಕ್ಕೆ ಬೀಳದ ಮಹಿಳೆ, ಕೂಡಲೇ ಆ ವಿಡಿಯೋ ಕಾಲ್ ಕಟ್ ಮಾಡಿ ಬೆಂಗಳೂರು ಪೊಲೀಸರ ಅಧಿಕೃತ ಸಹಾಯವಾಣಿಗೆ ಕರೆ ಮಾಡಿದ್ದಾರೆ. ತಾವು ಪಡೆದ ದಾಖಲೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಇ-ಮೇಲ್ ಮೂಲಕ ಬೆಂಗಳೂರು ಪೊಲೀಸರ ಅಧಿಕೃತ ಮೇಲ್ ಐಡಿಗೆ ದೂರು ರವಾನಿಸಿದ್ದಾರೆ. ಅಷ್ಟೇ ಅಲ್ಲದೆ, ಕೇಂದ್ರ ಸರ್ಕಾರದ ಸೈಬರ್ ಕ್ರೈಮ್ ಪೋರ್ಟಲ್ (Cybercrime.gov.in) ನಲ್ಲೂ ದೂರನ್ನು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಕಲಿ ದಾಖಲೆ ಸೃಷ್ಟಿಸಿದ ಜಾಲದ ಬೆನ್ನಟ್ಟಿದ್ದಾರೆ.
ಪೊಲೀಸರು ಎಂದಿಗೂ ವಿಡಿಯೋ ಕಾಲ್ ಮೂಲಕ ಯಾರನ್ನೂ ಅರೆಸ್ಟ್ ಮಾಡುವುದಿಲ್ಲ ಅಥವಾ ಹಣಕ್ಕಾಗಿ ಬೇಡಿಕೆ ಇಡುವುದಿಲ್ಲ. ಇಂತಹ ಡಿಜಿಟಲ್ ಅರೆಸ್ಟ್ ಕರೆಗಳು ಬಂದರೆ ಭಯಪಡುವ ಅಗತ್ಯವಿಲ್ಲ. ಯಾವುದೇ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ಮನೆಯ ಲೊಕೇಶನ್ ಹಂಚಿಕೊಳ್ಳಬೇಡಿ. ತಕ್ಷಣವೇ 1930 ಸಂಖ್ಯೆಗೆ ಕರೆ ಮಾಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸೈಬರ್ ವಂಚಕರ ಕೈಚಳಕ ಈಗ ಅಧಿಕೃತ ಸೀಲು-ಸಹಿಗಳವರೆಗೂ ತಲುಪಿರುವುದು ನಿಜಕ್ಕೂ ಆತಂಕಕಾರಿ ವಿಷಯವಾಗಿದೆ. ನಾಗರಿಕರ ಎಚ್ಚರಿಕೆಯೊಂದೇ ಈ ವಂಚನೆಗೆ ತಡೆ ಒಡ್ಡಬಲ್ಲದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ