
ಬೆಂಗಳೂರು: ಬೆಂಗಳೂರಿನ ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕನಕಪುರದ ಸಮೀಪ ಬದಲು ತುಮಕೂರು ಸುತ್ತಮುತ್ತ ಸ್ಥಾಪಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶುಕ್ರವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ತುಮಕೂರಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಹಳೆ ಮೈಸೂರು ಭಾಗಗಳ ಜನತೆಗೆ ಸಮಾನ ಅನುಕೂಲ ಆಗುತ್ತದೆ. ಕನಕಪುರ ರಾಜ್ಯದ ದಕ್ಷಿಣ ತುದಿಯಲ್ಲಿದ್ದು, ಅಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಅದರ ಪ್ರಯೋಜನ ಸೀಮಿತ ಪ್ರದೇಶಕ್ಕಷ್ಟೇ ಸಿಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಕನಕಪುರದಲ್ಲಿ ತಮ್ಮ ಜಮೀನಿನ ಬೆಲೆ ಹೆಚ್ಚಾಗಬೇಕು, ಅಲ್ಲಿ ತಮ್ಮ ಕಂಪನಿಗಳೂ ಬರಬೇಕೆಂಬ ಆಲೋಚನೆಯನ್ನು ಬದಿಗಿಟ್ಟು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಾಜ್ಯದ ಒಳಿತಿಗಾಗಿ ತುಮಕೂರು ಅಕ್ಕಪಕ್ಕದಲ್ಲಿ ಸ್ಥಾಪಿಸುವಂತೆ ಕೈ ಜೋಡಿಸಿ ಪ್ರಾರ್ಥಿಸುತ್ತೇನೆ. ಇದರಿಂದ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಪ್ರಯೋಜನ ಆಗಲಿದೆ ಎಂದು ತಿಳಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳೇ,
ಬೆಂಗಳೂರು ಮಹಾನಗರವು ತನ್ನ ಸಾಮರ್ಥ್ಯ ಮೀರಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯಕ್ಕೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ, ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ತಮ್ಮ ಕ್ಷೇತ್ರವಾದ ಕನಕಪುರ ವ್ಯಾಪ್ತಿಯಲ್ಲಿ ಸ್ಥಾಪಿಸುವ ಬಗ್ಗೆ ಕೇಳಿಬರುತ್ತಿರುವ ಮಾಹಿತಿಯು ಜನಸಾಮಾನ್ಯರ, ಸಮಗ್ರ ಕರ್ನಾಟಕದ ಹಿತದೃಷ್ಟಿಯಿಂದ ಕೆಲ ಮಹತ್ವದ ವಿಚಾರಗಳನ್ನು ತಮ್ಮ ಮುಂದೆ ತರಲು ಈ ಬಹಿರಂಗ ಪತ್ರ.
ಮೊದಲನೆಯದಾಗಿ, ಬೆಂಗಳೂರು ಅಭಿವೃದ್ಧಿಯೇ ಕರ್ನಾಟಕದ ಅಭಿವೃದ್ಧಿಯಲ್ಲ. ರಾಜ್ಯದ ಅಭಿವೃದ್ಧಿಯ ಫಲ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ, ಕಲ್ಯಾಣ ಕರ್ನಾಟಕ, ಮಲೆನಾಡು ಹಾಗೂ ಹಳೆ ಮೈಸೂರು ಭಾಗ ಸೇರಿ ಎಲ್ಲ ಪ್ರದೇಶಗಳಿಗೂ ಸಮಾನವಾಗಿ ತಲುಪುವಂತೆ ಯೋಜನೆಗಳನ್ನು ರೂಪಿಸುವುದು ಯಾವುದೇ ಸರ್ಕಾರದ ಜವಾಬ್ದಾರಿಯಾಗಿದೆ.
ಎರಡನೆಯದಾಗಿ, ಬೆಂಗಳೂರು ಈಗಾಗಲೇ ಜನಸಂಖ್ಯೆ, ವಾಹನ ದಟ್ಟಣೆ, ಕುಡಿಯುವ ನೀರು, ಸಂಚಾರ ಮತ್ತು ಪರಿಸರದ ಮೇಲೆ ಅತಿಯಾದ ಒತ್ತಡವನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಬೃಹತ್ ಮೂಲಸೌಕರ್ಯ ಯೋಜನೆಯನ್ನು ಬೆಂಗಳೂರಿನ ಸುತ್ತಮುತ್ತಲೇ ಕೇಂದ್ರೀಕರಿಸುವುದು ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುವ ಆಪಾಯ ಹೊಂದಿದೆ.
ಹಿಂದಿನ ಕೆಲವು ಯೋಜನೆಗಳ ಅನುಭವಗಳಿಂದ ನಾವು ಪಾಠ ಕಲಿಯಬೇಕಾಗಿದೆ. ಉದಾಹರಣೆಗೆ, ಎಲೆಕ್ಟ್ರಾನಿಕ್ಸ್ ಸಿಟಿಯನ್ನು ರಾಜ್ಯದ ಒಳಭಾಗದಲ್ಲಿ ಅಭಿವೃದ್ಧಿಪಡಿಸುವ ಬದಲು ತಮಿಳುನಾಡು ಗಡಿಯ ಸಮೀಪ ನಿರ್ಮಿಸಿದ ಪರಿಣಾಮ ಅದರ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯ ಪ್ರಯೋಜನದ ಒಂದು ಭಾಗ ನೆರೆಯ ರಾಜ್ಯಕ್ಕೂ ಹರಿಯಿತು.
ಅದೇ ರೀತಿಯಲ್ಲಿ ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ ಬಳಿಕ ಅದರ ಅಭಿವೃದ್ಧಿಯ ಪೂರಕ ಪರಿಣಾಮಗಳು ಮುಖ್ಯವಾಗಿ ಬೆಂಗಳೂರು ಸುತ್ತಮುತ್ತ ಮಾತ್ರ ಸೀಮಿತಗೊಂಡಿವೆ. ಇದೇ ಯೋಜನೆ ತುಮಕೂರು ಭಾಗದಲ್ಲಿ ಆರಂಭವಾಗಿದ್ದರೆ ಮಧ್ಯ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ದೊರೆಯುತ್ತಿತ್ತು. ತುಮಕೂರು ಕೈಗಾರಿಕಾ ವಲಯವಾಗಿ ಮತ್ತು ಬೆಳೆಯುತ್ತಿರುವ ಬೆಂಗಳೂರು ಮೇಲಿನ ಜನಸಂಖ್ಯೆ ಮತ್ತು ಸಂಚಾರದ ಒತ್ತಡವೂ ಗಣನೀಯವಾಗಿ ಕಡಿಮೆಯಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕನಕಪುರದಲ್ಲಿ ನಿರ್ಮಿಸುವ ಬದಲು ತುಮಕೂರು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಥಾಪಿಸುವುದೇ ರಾಜ್ಯದ ದೀರ್ಘಾವಧಿಯ ಹಿತಕ್ಕೆ ಅನುಕೂಲಕರ.
ತುಮಕೂರು ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳು, ರೈಲು ಸಂಪರ್ಕ, ಕೈಗಾರಿಕಾ ಬೆಳವಣಿಗೆ ಮತ್ತು ಭೌಗೋಳಿಕ ಸ್ಥಾನಮಾನದಿಂದಾಗಿ ರಾಜ್ಯದ ಮಧ್ಯಭಾಗಕ್ಕೆ ಸಹಜ ಪ್ರವೇಶದ್ವಾರವಾಗಿದೆ. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಹಳೆ ಮೈಸೂರು ಭಾಗಗಳ ಜನತೆಗೆ ಸಮಾನ ಅನುಕೂಲ ದೊರೆಯುತ್ತದೆ. ಇದಕ್ಕೆ ವಿರುದ್ಧವಾಗಿ ಕನಕಪುರ ರಾಜ್ಯದ ದಕ್ಷಿಣ ತುದಿಯಲ್ಲಿದ್ದು, ಅಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಅದರ ಪ್ರಯೋಜನ ಸೀಮಿತ ಪ್ರದೇಶಕ್ಕಷ್ಟೇ ಮಿತಿಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಮೀಸಲು ಅರಣ್ಯ ಪ್ರದೇಶಗಳು ಹಾಗೂ ಫಲವತ್ತಾದ ಕೃಷಿಭೂಮಿ ಸಮೀಪ ಇಂತಹ ಬೃಹತ್ ಯೋಜನೆಯನ್ನು ಕೈಗೊಳ್ಳುವುದು ಪರಿಸರ ಹಾಗೂ ಕೃಷಿ ಎರಡೂ ದೃಷ್ಟಿಯಿಂದ ಸೂಕ್ತವಲ್ಲ.
ಮಾನ್ಯರೇ, ನೆರೆಯ ರಾಜ್ಯಗಳನ್ನು ಗಮನಿಸಿದರೆ ಸಮತೋಲಿತ ಅಭಿವೃದ್ಧಿಯ ಮಹತ್ವ ಸ್ಪಷ್ಟವಾಗುತ್ತದೆ. ತಮಿಳುನಾಡಿನಲ್ಲಿ ಚೆನ್ನೈ, ಕೊಯಂಬತ್ತೂರು, ಮಧುರೈ, ತಿರುಚಿರಾಪಳ್ಳಿ, ಸೇಲಂ, ತಿರುನೆಲ್ವೆಲಿ ಸೇರಿ ಅನೇಕ ನಗರಗಳು ಅಭಿವೃದ್ಧಿಗೊಂಡಿವೆ. ಮಹಾರಾಷ್ಟ್ರದಲ್ಲಿ ಮುಂಬೈ ಜೊತೆಗೆ ಪುಣೆ, ನಾಗ್ಪುರ, ಔರಂಗಾಬಾದ್, ನಾಸಿಕ್, ಕೋಲ್ಹಾಪುರ ಮುಂತಾದ ನಗರಗಳು ಬೆಳವಣಿಗೆಯ ಕೇಂದ್ರಗಳಾಗಿವೆ. ಇದೇ ರೀತಿಯಾಗಿ ಹಿಂದಿನ ಅವಿಭಜಿತ ಆಂಧ್ರಪ್ರದೇಶದಲ್ಲಿ ಹೈದರಾಬಾದ್ ಜೊತೆಗೆ ವಿಶಾಖಪಟ್ಟಣಂ, ವಿಜಯವಾಡ, ಗುಂಟೂರು, ತಿರುಪತಿ, ವಾರಂಗಲ್ ಸೇರಿ ಅನೇಕ ನಗರಗಳು ಸಮಾನವಾಗಿ ಅಭಿವೃದ್ಧಿಗೊಂಡಿವೆ.
ಆದರೆ, ಕರ್ನಾಟಕದಲ್ಲಿ ಅಭಿವೃದ್ಧಿಯು ಬಹುತೇಕ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತ. ಮೈಸೂರು, ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರಗಿ, ಶಿವಮೊಗ್ಗ, ಹಾವೇರಿ ಮೊದಲಾದ ನಗರಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಅಭಿವೃದ್ಧಿಯನ್ನು ಇನ್ನೂ ಕಾಣಬೇಕಿದೆ. ಇದರ ಪರಿಣಾಮವಾಗಿ ಉದ್ಯೋಗ, ಶಿಕ್ಷಣ ಮತ್ತು ಹೂಡಿಕೆಗಾಗಿ ಜನ ಬೆಂಗಳೂರಿನತ್ತ ವಲಸೆ ಹೋಗುತ್ತಿದ್ದಾರೆ. ಇದು ಬೆಂಗಳೂರಿನ ಮೇಲಿನ ಒತ್ತಡವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ.
ಮತ್ತೊಂದು ಮಹತ್ವದ ವಿಷಯವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ರಾಜ್ಯದಲ್ಲಿ ಬೃಹತ್ ಯೋಜನೆಗಳ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ ಅವು ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ರೂಪುಗೊಳ್ಳುತ್ತಿವೆ ಎಂಬ ಸಾರ್ವಜನಿಕ ಅನುಮಾನ ವ್ಯಕ್ತವಾಗುತ್ತಿದೆ. ಸರ್ಕಾರ ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೂ ಪಾರದರ್ಶಕವಾಗಿದ್ದು, ಸಮಗ್ರ ಕರ್ನಾಟಕದ ಅಭಿವೃದ್ಧಿಯ ಉದ್ದೇಶವನ್ನೇ ಪ್ರತಿಬಿಂಬಿಸಬೇಕು ಎಂಬುದು ಜನರ ನಿರೀಕ್ಷೆ.
ಮಾನ್ಯ ಮುಖ್ಯಮಂತ್ರಿಗಳಾದ ತಾವು ಕನಕಪುರದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ತೀರ್ಮಾನ ಮಾಡುವ ಮುನ್ನ, ರಾಜ್ಯದ ಎಲ್ಲಾ ಶಾಸಕರು ಅಭಿಪ್ರಾಯ ಸಂಗ್ರಹಿಸಬೇಕು. ಮುಖ್ಯಮಂತ್ರಿ ಆದ ಕ್ಷಣ ಕೇವಲ ಕೇತ್ರ ಎಂಬ ಕಾರಣಕ್ಕೆ ಏಕಪಕ್ಷೀಯ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ಹೋಗಲಿ, ಕನಿಷ್ಠ ಪಕ್ಷ ಕಾಂಗ್ರೆಸ್ ಪಕ್ಷದ ಶಾಸಕರ ಒಪ್ಪಿಗೆಯನ್ನಾದರೂ ಪಡೆಯುವುದು ಒಳಿತು.
ಏಕೆಂದರೆ, ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ತುಮಕೂರು ರಸ್ತೆಯಲ್ಲಿ ಸ್ಥಾಪಿಸಬೇಕು ಎಂದು ಈಗಾಗಲೇ ಬಹಿರಂಗ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಎಲ್ಲಿ ಆಗಬೇಕು ಎಂಬುದನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ ಮುಕ್ತ ಚರ್ಚೆ ನಡೆಸಿದ ನಂತರ ತೀರ್ಮಾನಿಸುವುದು ಸೂಕ್ತ. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ಶಾಸಕರೇ ಬಂಡೆದ್ದು ಅದೊಂದು ಎರಡನೇ ಬಿಡದಿ ಟೌನ್ಶಿಪ್ ಯೋಜನೆಯಂತೆ ವಿವಾದಕ್ಕೆ ಸಿಲುಕಬಾರದು.
ಮಾನ್ಯ ಮುಖ್ಯಮಂತ್ರಿಗಳೇ, ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂಥ ಯೋಜನೆ ಮುಂದಿನ ಹಲವು ದಶಕಗಳ ಕರ್ನಾಟಕದ ಆರ್ಥಿಕ, ಕೈಗಾರಿಕಾ ಮತ್ತು ಪ್ರಾದೇಶಿಕ ಅಭಿವೃದ್ಧಿಯ ದಿಕ್ಕು ನಿರ್ಧರಿಸುವ ಐತಿಹಾಸಿಕ ನಿರ್ಧಾರ. ಆದ್ದರಿಂದ ಈ ಯೋಜನೆಯನ್ನು ಕೇವಲ ಒಂದು ಪ್ರದೇಶದ ಅಭಿವೃದ್ಧಿಯ ದೃಷ್ಟಿಯಿಂದಲ್ಲ, ಇಡೀ ರಾಜ್ಯದ ಸಮತೋಲಿತ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಅಂತಿಮಗೊಳಿಸುವಂತೆ ತಮ್ಮಲ್ಲಿ ವಿನಯಪೂರ್ವಕವಾಗಿ ಆಗ್ರಹಿಸುತ್ತೇನೆ. ಕೋಟ್ಯಂತರ ಕನ್ನಡಿಗರ ಆಶಯವೂ ಇದೇ ಆಗಿದೆ ಎಂಬುದನ್ನು ವಿನಮ್ರವಾಗಿ ತಮ್ಮ ಗಮನಕ್ಕೆ ತರುತ್ತಿದ್ದೇನೆ.
-ಬಿ.ವೈ. ವಿಜಯೇಂದ್ರ
ರಾಜ್ಯ ಅಧ್ಯಕ್ಷರು, ಬಿಜೆಪಿ ಕರ್ನಾಟಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ