ಜಾತಿ - ಜನಗಣತಿ ಮುನ್ನ ಗುರು, ವಿರಕ್ತರು ಒಂದಾಗಲಿ: ಕೇಂದ್ರ ಸಚಿವ ಸೋಮಣ್ಣ

Published : Jul 23, 2025, 06:39 AM IST
V Somanna

ಸಾರಾಂಶ

ಜಾತಿ-ಜನಗಣತಿಯಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸುವ, ಸಂಘಟಿಸುವ ರೀತಿ ಗುರು-ವಿರಕ್ತರು ಒಂದಾಗಿ ಇಡೀ ಸಮಾಜವನ್ನು ಮುನ್ನಡೆಸಬೇಕು ಎಂದು ವಿ.ಸೋಮಣ್ಣ ಮನವಿ ಮಾಡಿದರು.

ದಾವಣಗೆರೆ (ಜು.23): ಕೇಂದ್ರ ಗೃಹ ಇಲಾಖೆ ವ್ಯವಸ್ಥಿತವಾಗಿ 2026ರಲ್ಲಿ ದೇಶಾದ್ಯಂತ ಕೈಗೊಳ್ಳುವ ಜಾತಿ-ಜನಗಣತಿಯಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸುವ, ಸಂಘಟಿಸುವ ರೀತಿ ಗುರು-ವಿರಕ್ತರು ಒಂದಾಗಿ ಇಡೀ ಸಮಾಜವನ್ನು ಮುನ್ನಡೆಸಬೇಕು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ, ಸಮಾಜದ ಹಿರಿಯ ನಾಯಕ ವಿ.ಸೋಮಣ್ಣ ಮನವಿ ಮಾಡಿದರು. ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ 2ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅತ್ಯಂತ ವ್ಯವಸ್ಥಿತವಾಗಿಯೇ ಕೇಂದ್ರ ಗೃಹ ಇಲಾಖೆ ದೇಶದಲ್ಲಿ ಗಣತಿ ಕಾರ್ಯ ಕೈಗೊಳ್ಳಲಿದೆ.

ಗಣತಿದಾರರು ಮನೆ ಬಾಗಿಲಿಗೆ ಬಂದಾಗ ಒಳಪಂಗಡಗಳನ್ನು ಮರೆತು, ಗುರು-ವಿರಕ್ತರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಏನು ಸೂಚನೆ ನೀಡುತ್ತದೋ ಅದನ್ನು ಸಮಾಜ ಬಾಂಧವರು ದಾಖಲಿಸಬೇಕು ಎಂದರು. ರಾಜ್ಯ ಸರ್ಕಾರ ಜಾತಿ ಗಣತಿಯಲ್ಲಿ ಯಾಕೆ ಎಡವಟ್ಟು ಮಾಡಿತೋ ಅದೂ ಗೊತ್ತಿಲ್ಲ. ರಾಜ್ಯ ಸರ್ಕಾರ ಎಡವಟ್ಟು ಮಾಡಿದ್ದರಿಂದಲೇ ಪಂಚಪೀಠಗಳು ಇಂದು ಒಂದಾಗಿವೆ. ಈ ಸಮಾಜ ಯಾರೇ ಬಂದರೂ ನಮ್ಮವರೆಂದು, ಅಪ್ಪುವ, ಒಪ್ಪುವ ಸಮಾಜವಾಗಿದೆ. ನಮ್ಮ ವೀರಶೈವ ಲಿಂಗಾಯತ ಧರ್ಮಕ್ಕೆ ಇದೊಂದು ಸುದಿನ. ಪಂಚಪೀಠಗಳು ಒಂದಾಗಿದ್ದಕ್ಕೆ ಗುರುಗಳಿಗೆ ದೀರ್ಘದಂಡ ನಮಸ್ಕಾರ ಮಾಡುತ್ತೇನೆ ಎಂದರು.

ಸಮಾಜಕ್ಕೆ ಶಕ್ತಿ ತುಂಬುವ ಮಹಾತ್ಕಾರ್ಯಕ್ಕೆ ಇದೇ ದಾವಣಗೆರೆಯಿಂದಲೇ ಗುರು-ವಿರಕ್ತರು ನಾಂದಿ ಹಾಡಲಿ ಎಂದು ಅರಿಕೆ ಮಾಡಿಕೊಂಡರು. ಪಂಚಪೀಠಗಳ ಗುರುಗಳ ಒಗ್ಗೂಡುವಿಕೆಯು ಈ ಸಮಾವೇಶಕ್ಕಷ್ಟೇ ನಿಲ್ಲಬಾರದು. ಗುರು-ವಿರಕ್ತರನ್ನು ಒಂದು ಮಾಡುವ ಕೆಲಸವಾಗಬೇಕು. ಸುಮಾರು 3 ಸಾವಿರ ಮಠಗಳು ರಾಜ್ಯವ್ಯಾಪಿ ತಮ್ಮ ಕರ್ತವ್ಯ ಮಾಡುತ್ತಾ, ವೀರಶೈವ ಲಿಂಗಾಯತರಿಗೆ ಭದ್ರ ಬುನಾದಿ ನೀಡುತ್ತಿವೆ. ವೀರಶೈವ ಲಿಂಗಾಯತ ಬೇರುಗಳನ್ನು ಮೊದಲು ಗಟ್ಟಿಗೊಳಿಸೋಣ. ನಮ್ಮಂತಹ ರಾಜಕಾರಣಿಗಳ ಕೈಯಲ್ಲಿ ಇಂತಹ ಕೆಲಸ ಆಗುವುದಿಲ್ಲ. ಹರ ಗುರು ಚರ ಮೂರ್ತಿಗಳು ಸಮಾಜವನ್ನು ಒಗ್ಗೂಡಿಸುವ, ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.

ವೀರಶೈವ ಲಿಂಗಾಯತ ಧರ್ಮ, ಈ ಧರ್ಮೀಯರು ನಡೆದು ಬಂದ ಇತಿಹಾಸ ದೊಡ್ಡದಿದೆ. ಸಾವಿರಾರು ವರ್ಷಗಳ ಇತಿಹಾಸ, ಹಿನ್ನೆಲೆಯ ವಿಶಾಲ ಸಮಾಜ ನಮ್ಮದು. ಸಮಾಜವನ್ನು ಉಳಿಸುವ, ಸಂಘಟಿಸುವ ಹಾಗೂ ಮುಂದಿನ ಸಾವಿರಾರು ವರ್ಷ ಸದೃಢವಾಗಿ ಸಾಗುವಂತೆ ಗುರು-ವಿರಕ್ತರು ಒಂದಾಗಿ ಕೆಲಸ ಮಾಡಲಿ ಎಂದು ಅವರು ಮನವಿ ಮಾಡಿದರು. ಪಂಚಪೀಠಗಳು ಕೇವಲ ನಮ್ಮ ಸಮುದಾಯಕ್ಕೆ ಮಾತ್ರ ಸೀಮಿತವಾಗದೇ, ಎಲ್ಲ ಜಾತಿ, ಧರ್ಮೀಯರಿಗೆ, ಶಕ್ತಿ ಇಲ್ಲದ, ಧ್ವನಿ ಎಲ್ಲದ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿಕೊಂಡೇ ಬಂದಿವೆ. ದೆಹಲಿಯಲ್ಲಿ ಲೋಕಸಭೆ ಅಧಿವೇಶನ ನಡೆಯುತ್ತಿದೆ. ದೇಶಕ್ಕೆ ಅಡಿಪಾಯ ಹಾಕಿ, ಸಂಸ್ಕೃತಿ, ಸಂಸ್ಕಾರ, ಧರ್ಮಪ್ರಚಾರ ಮಾಡುತ್ತಿರುವ ಪಂಚ ಪೀಠಾಧೀಶರ ಕಾರ್ಯಕ್ರಮಕ್ಕೆ ನೀವು ಹೋಗಿ, ಬನ್ನಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ನನಗೆ ಕಳಿಸಿದ್ದಾರೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!