
ಹುಬ್ಬಳ್ಳಿ (ಸೆ.19): ಜಾತ್ಯತೀತರು ಎಂದು ಹೇಳುತ್ತಲೇ ಮುಂದಿನ ಪೀಳಿಗೆಯನ್ನು ಇನ್ನಷ್ಟು ಜಾತಿವಾದಿಗಳನ್ನಾಗಿ ಮಾಡುತ್ತಿದ್ದೇವೆ. ಜಾತಿ ಸಮಾವೇಶಗಳಿಂದ ತಪ್ಪು ಸಂದೇಶ ಹೋಗುತ್ತಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಆರ್ಥಿಕ, ಸಾಮಾಜಿಕ ಸಮೀಕ್ಷೆಯ ಗಣತಿಗೆ ಮುಂದಾಗುತ್ತಿದ್ದಂತೆ ರಾಜ್ಯದ ಎಲ್ಲೆಡೆ ಈಗ ‘ಜಾತಿ ಸಮಾವೇಶ’ಗಳ ಅಬ್ಬರ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಕನ್ನಡಪ್ರಭದೊಂದಿಗೆ ತಮ್ಮ ನೋವು ತೋಡಿಕೊಂಡ ಅವರು, ಜಾತಿ ಜಾತಿ ಎಂದು ಬಡಿದಾಡಿ ಏನನ್ನು ಸಾಧಿಸ ಹೊರಟಿದ್ದೇವೆ? ಎಂದು ಪ್ರಶ್ನಿಸಿದರು.
ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಿದ್ದ ಮಠಾಧೀಶರು, ರಾಜ್ಯಭಾರ ಮಾಡಿದ, ಮಾಡುತ್ತಿರುವ ಮಂತ್ರಿ-ಮಹೋದಯರು, ಮುಖಂಡರು, ಗಣ್ಯರು ಎನಿಸಿಕೊಂಡವರು ಇಂದು ತಮ್ಮ ತಮ್ಮ ಜಾತಿಗಳ ಜನರನ್ನು ದೊಡ್ಡ ಸಂಖ್ಯೆಯಲ್ಲಿ ಕೂಡಿಸಿ ಸಮಾವೇಶ ಮಾಡುವ ಮೂಲಕ ಅವರಿಗೆ ಜಾತಿಯ ವಿಷಯವನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಬೇರೆ ಸಮುದಾಯದವರನ್ನು ದ್ವೇಷಿಸುವಂತೆ ಮಾಡುತ್ತಿದ್ದಾರೆ. ಹಾಗಿದ್ದರೆ ಇವರೆಲ್ಲ ಬೇರೆ ವೇದಿಕೆಗಳಲ್ಲಿ ಜಾತ್ಯತೀತೆಯ ಭಾಷಣ ಬಿಗಿಯುವುದು ಬೂಟಾಟಿಕೆ ಅನಿಸುವುದಿಲ್ಲವೇ? ಎಂದರು.
ಹಿಂದೆ ನಾನು ಯಾರೋ ಒತ್ತಾಯ ಮಾಡಿದರು ಎನ್ನುವ ಕಾರಣಕ್ಕೆ ಒಂದು ಸಮಾವೇಶದಲ್ಲಿ ಭಾಗವಹಿಸಿದ್ದೆ. ಆ ಬಳಿಕ ಯಾವುದೇ ಜಾತಿ ಸಮಾವೇಶದಲ್ಲಿ ಭಾಗಿಯಾಗಿಲ್ಲ, ಮುಂದೆಯೂ ಯಾವುದೇ ಜಾತಿಯ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಬಸವರಾಜ ಹೊರಟ್ಟಿ, ಜಾತಿವಿನಾಶದಿಂದ ಮಾತ್ರ ಶಾಂತಿ, ಸಮಾನತೆ, ಸಹೋದರತ್ವ ಬೆಳೆಯಲು ಸಾಧ್ಯ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ