ಅಂಗಾಂಗ ದಾನ ಮಾಡಿದ ಮೊದಲ ಸಿಎಂ ಬೊಮ್ಮಾಯಿ: ದೇಶಕ್ಕೆ ಮಾದರಿಯಾದ ನಡೆ

By Govindaraj SFirst Published Aug 14, 2022, 4:45 AM IST
Highlights

ರಾಜ್ಯಮಟ್ಟದ ಅಂಗಾಂಗ ದಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ವಿಧಾನಮಂಡಲ ಉಭಯ ಸದನಗಳ ಅಧ್ಯಕ್ಷರು ಸ್ವತಃ ಅಂಗಾಂಗ ದಾನಕ್ಕೆ ನೋಂದಣಿಯಾಗುವ ಮೂಲಕ ದೇಶಕ್ಕೆ ಮಾದರಿಯಾದರು.

ಬೆಂಗಳೂರು (ಆ.14): ರಾಜ್ಯಮಟ್ಟದ ಅಂಗಾಂಗ ದಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ವಿಧಾನಮಂಡಲ ಉಭಯ ಸದನಗಳ ಅಧ್ಯಕ್ಷರು ಸ್ವತಃ ಅಂಗಾಂಗ ದಾನಕ್ಕೆ ನೋಂದಣಿಯಾಗುವ ಮೂಲಕ ದೇಶಕ್ಕೆ ಮಾದರಿಯಾದರು.

ವಿಶ್ವ ಅಂಗಾಂಗ ದಾನ ದಿನಾಚರಣೆ ಹಿನ್ನೆಲೆಯಲ್ಲಿ ಶನಿವಾರ ವಿಧಾನಸೌಧದ ಮೆಟ್ಟಿಲ ಮೇಲೆ ನಡೆದ ಕಾರ್ಯಕ್ರಮದಲ್ಲಿ ಜನ ಸಾಮಾನ್ಯರಿಗೆ ಅಂಗಾಂಗ ದಾನದ ಕುರಿತು ಅರಿವು ಮೂಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಸುಧಾಕರ್‌, ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜು, ಅಬಕಾರಿ ಸಚಿವ ಕೆ.ಗೋಪಾಲಯ್ಯ, ವಿಧಾನಸಭಾ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್‌ ಹಂಗಾಮಿ ಸಭಾಪತಿ ರಘುನಾಥ್‌ ಮಲ್ಕಾಪುರೆ ಸೇರಿದಂತೆ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಅಂಗಾಂಗ ದಾನ ಪತ್ರಕ್ಕೆ ಸಹಿ ಮಾಡಿದರು. ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಅಂಗಾಂಗ ದಾನಕ್ಕೆ ನೋಂದಣಿಯಾಗಿರುವುದು ದೇಶದಲ್ಲಿಯೇ ಮೊದಲು ಎಂದು ಆರೋಗ್ಯ ಸಚಿವರ ಕಚೇರಿ ಮೂಲಗಳು ತಿಳಿಸಿವೆ.

ಅಂಗಾಂಗ ದಾನಕ್ಕೆ ಸಿಎಂ, ಸಚಿವರಿಂದ ಹೆಸರು ನೋಂದಣಿ: ಸಚಿವ ಸುಧಾಕರ್

ಮಾನವೀಯ ಕೆಲಸ- ಜೀವನ ಸಾರ್ಥಕ: ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ‘ಅಂಗಾಂಗ ದಾನ ಮಾನವೀಯತೆಯ ಕೆಲಸ. ಅಂಗಾಂಗಗಳನ್ನು ದಾನ ಮಾಡುವ ಮೂಲಕ ನಮ್ಮ ಸಾವಿನ ನಂತರವೂ ಬದುಕು ನೀಡುವ ಸಾರ್ಥಕ ಕಾರ್ಯ ಮಾಡಬಹುದಾಗಿದೆ. ಒಬ್ಬ ವ್ಯಕ್ತಿ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಎಂಟು ಜೀವಗಳನ್ನು ಉಳಿಸಬಹುದು. ಚರ್ಮದಿಂದ ಹಿಡಿದು ಎಲ್ಲ ಅಂಗಗಳನ್ನು ದಾನ ಮಾಡಬಹುದು. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಮಾನವ ಜನ್ಮ ಶ್ರೇಷ್ಠವಾದುದು. ಅಂಗಾಂಗ ದಾನದ ಮೂಲಕ ಈ ಶ್ರೇಷ್ಠ ಜೀವವನ್ನು ಉಳಿಸಿದಂತಾಗುತ್ತದೆ’ ಎಂದರು.

18 ಅಂಗಾಂಗ ಮರು ಪಡೆಯುವಿಕೆ ಕೇಂದ್ರ: ರಾಜ್ಯದಲ್ಲಿ ಪ್ರಸ್ತುತ 18 ಅಂಗಾಂಗ ಮರು ಪಡೆಯುವಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಿಮ್ಹಾ®್ಸ…ನಲ್ಲಿ ಮೆದುಳು ದಾನ ಮತ್ತು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮೂತ್ರಪಿಂಡ ದಾನಗಳನ್ನು ಮಾಡಬಹುದಾಗಿದೆ. ಮಾರ್ಕೋನಳ್ಳಿಯ ಕೃಷ್ಣಪ್ಪ, ನವೀನಕುಮಾರ್‌ ಅತ್ಯಂತ ಬಡಕುಟುಂಬದವರಾಗಿದ್ದು, ತಮ್ಮ ಮಕ್ಕಳನ್ನು ಅಪಘಾತದಲ್ಲಿ ಕಳೆದುಕೊಂಡಿದ್ದರೂ, ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ದೊಡ್ಡ ಗುಣವನ್ನು ಮೆರೆದಿದ್ದಾರೆ. ಇವರ ಉದಾತ್ತ ಗುಣ ಎಲ್ಲರಿಗೂ ಅನುಕರಣೀಯವಾದುದು ಎಂದರು.

ಅಪ್ಪು ನೆನೆದ ಸಿಎಂ: ನಟ ಪುನೀತ್‌ ರಾಜ್‌ಕುಮಾರ್‌ ನೇತ್ರದಾನದ ಮೂಲಕ ಮತ್ತು ನಟ ಸಂಚಾರಿ ವಿಜಯ್ ಅಂಗಾಂಗ ದಾನದ ಮೂಲಕ ಇತರರ ಬಾಳಿಗೆ ಬೆಳಕಾಗಿದ್ದಾರೆ ಎಂದರು. ಈ ವೇಳೆ ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳ ಚಪ್ಪಾಳೆ ಮುಗಿಲು ಮುಟ್ಟಿತ್ತು.

ಸಿಎಂ ಬೊಮ್ಮಾಯಿ ಬದಲಾವಣೆ ಇಲ್ಲ: ಅರುಣ್‌ ಸಿಂಗ್‌ ಸ್ಪಷ್ಟೋಕ್ತಿ

ಅಂಗಾಂಗಗಳನ್ನು ದಾನ ಮಾಡುವ ಮೂಲಕ ನಮ್ಮ ಸಾವಿನ ನಂತರವೂ ಬದುಕು ನೀಡುವ ಸಾರ್ಥಕ ಕಾರ್ಯ ಮಾಡಬಹುದಾಗಿದೆ. ಒಬ್ಬ ವ್ಯಕ್ತಿ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಎಂಟು ಜೀವಗಳನ್ನು ಉಳಿಸಬಹುದು.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

click me!