ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಬಿಜೆಪಿ ಸರ್ಕಾರದ ಕೊಡುಗೆ: ಸಿಎಂ ಬೊಮ್ಮಾಯಿ ಸ್ಪಷ್ಟನೆ

By Sathish Kumar KHFirst Published Mar 12, 2023, 1:17 PM IST
Highlights

ಪಕ್ಕದ ಮನೆಯಲ್ಲಿ ಗಂಡು ಮಗು ಹುಟ್ಟಿದರೆ ಇವರು ಬಂದು ಪೇಡೆ ಹಂಚುವ ರೀತಿಯಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಮಾಡಿದ ಬೆಂಗಳೂರು ಮೈಸೂರು ರಸ್ತೆಯನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ.

ಮಂಡ್ಯ (ಮಾ.12): ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಡಿಪಿಆರ್‌ ಮಾಡಿದಾಗ, ಭೂಸ್ವಾಧೀನ ಮಾಡಿದಾಗ, ಮೈಸೂರಿನಲ್ಲಿ ಅಡಿಗಲ್ಲು ಹಾಕಿದ್ದು ಹಾಗೂ 2023ರಲ್ಲಿ ಮೋದಿ ಅವರೇ ಸಕ್ಕರೆನಾಡು ಮಂಡ್ಯದಲ್ಲಿ ಉದ್ಘಾಟನೆ ಮಾಡುತ್ತಿದ್ದಾರೆ. ಇದು ಸಂಪೂರ್ಣ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ. ಆದರೆ, ಕೆಲವರು ಪತ್ರಿಕೆಯಲ್ಲಿ ನಾವೇ ಮಾಡಿದ್ದು, ಎಂದು ಹೇಳಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿ ಕಾರಿದರು.

ಮಂಡ್ಯದ ಗೆಜ್ಜಲಗೆರೆಯಲ್ಲಿ ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ಮೈಸೂರು ನಡುವೆ 10 ಲೇನ್‌ ರಸ್ತೆ ನಿರ್ಮಾಣಕ್ಕೆ 1990ರಿಂದ ಪ್ರಸ್ತಾವನೆ ಇತ್ತು. ಆದರೆ, ನೈಸ್‌ ರಸ್ತೆ ಜಾರಿಗೊಳಿಸುವ ಉದ್ದೇಶದಿಂದ ಇದನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. 2014ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ 2015ರಲ್ಲಿ ಡಿಪಿಆರ್‌ ಮಾಡಿ 2016ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಲಾಯಿತು. ನರೇಂದ್ರ ಮೋದಿ ಅವರು ಹೆಚ್ಚುವರಿ ಹಣವನ್ನು 4 ಸಾವಿರ ಕೋಟಿ ರೂ. ಹಣವನ್ನು ನರೇಂದ್ರ ಮೋದಿ ಅವರು ಕೊಟ್ಟಿದ್ದಾರೆ. 2019ರಲ್ಲಿ ಕೆಲಸ ಪ್ರಾರಂಭ ಮಾಡಲಾಯಿತು. ನರೇಂದ್ರ ಮೋದಿ ಅವರು 2023ರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.

Latest Videos

PM Modi In Karnataka: ಮೈಸೂರಿನ ಒಡೆಯರು, ಸರ್‌ಎಂವಿ ಅವರನ್ನು ನೆನೆದ ಪ್ರಧಾನಿ ಮೋದಿ!

ಡಿಪಿಆರ್‌ನಿಂದ ಉದ್ಘಾಟನೆವರೆಗೆ ಮೋದಿ ಸರ್ಕಾರ: ರಾಜ್ಯದಲ್ಲಿ ಡಿಪಿಆರ್‌ ಮಾಡಿದಾಗ, ಭೂಸ್ವಾಧೀನ ಮಾಡಿದಾಗ, ಮೈಸೂರಿನಲ್ಲಿ ಅಡಿಗಲ್ಲು ಹಾಕಿದಾಗ ಹಾಗೂ 2023ರಲ್ಲಿ ಸಕ್ಕರೆನಾಡು ಮಂಡ್ಯದಲ್ಲಿ ಉದ್ಘಾಟನೆ ಮಾಡುತ್ತಿರುವುದು ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಕೆಲವರು ಪತ್ರಿಕೆಯಲ್ಲಿ ನಾವೇ ಮಾಡಿದ್ದು, ನಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಾರೆ. ಪಕ್ಕದ ಮನೆಯಲ್ಲು ಗಂಡು ಮಗು ಹಡೆದರೆ, ಇವರು ಪೇಡೆ ಹಂಚುತ್ತಿದ್ದಾರೆ ಎನ್ನುವಂತಿದೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯ ಎಂದು ಟೀಕೆ ಮಾಡಿದರು. ನರೇಂದ್ರ ಮೋದಿ ಅವರು ಸರಿಯಾದ ಸಮಯಕ್ಕೆ ಎಲ್ಲ ಕಾಮಗಾರಿಗಳನ್ನು ಮಾಡುತ್ತಿದ್ದಾರೆಂದರೆ ಅದಕ್ಕೆ ಡಬಲ್‌ ಇಂಜಿನ್‌ ಸರ್ಕಾರವೇ ಕಾರಣವಾಗಿದೆ ಎಂದರು. 

ಮಂಡ್ಯ ಈಸ್‌ ಇಂಡಿಯಾ ಘೋಷಣೆಗೆ ಮೋದಿ ಸಾಕಾರ: ಸಕ್ಕರೆ ನಾಡಿನಲ್ಲಿ ಸಕ್ಕರೆ ಕಾರ್ಖಾನೆ, ಮೊದಲ ವಿದ್ಯುತ್‌ ಉತ್ಪಾದನೆ ಆಗಿರುವುದು ಮಂಡ್ಯದಲ್ಲಿ. ಬೆಂಗಳೂರು ಮೈಸೂರು ಸೂಪರ್‌ ಹೈವೆ ನಿರ್ಮಾಣ ಮಾಡುವ ಮೂಲಕ ಮಂಡ್ಯ ಈಸ್‌ ಇಂಡಿಯಾ ಎನ್ನುವ ಘೋಷಣೆಯನ್ನು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಕಾರ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರಾಂತಿಯನ್ನೇ ಸೃಷ್ಟಿ ಮಾಡಿರುವ ನಿತಿನ್‌ ಗಡ್ಕರಿ ಅವರು, ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಕಳೆದ 6 ವರ್ಷಗಳಲ್ಲಿ 6 ಸಾವಿರ ಕಿ.ಮೀ. ರಸ್ತೆಯನ್ನು ಕರ್ನಾಟಕದಲ್ಲಿ ಮಂಜೂರಾತಿ ಮಾಡಿ ಪೂರ್ಣಗೊಳಿಸಲಾಗುತ್ತಿದೆ. ಕರ್ನಾಟಕದ ಅಭಿವೃದ್ಧಿಗಾಗಿ, ಜನ ಕಲ್ಯಾಣ, ರಾಜ್ಯ ಕಲ್ಯಾಣ ಮತ್ತು ರಾಷ್ಟ್ರ ಕಲ್ಯಾಣವನ್ನು ಡಬಲ್‌ ಇಂಜಿನ್‌ ಸರ್ಕಾರ ಮಾಡುತ್ತಿದೆ ಎಂದರು.

ವಿಶ್ವ ನಾಯಕರಾಗಿ ಮೋದಿ ಪ್ರಸಿದ್ಧಿ: ಪ್ರಧಾನಮಂತ್ರಿ ಅವರನ್ನು ವಿಶ್ವ ನಾಯಕರು ಎಂದು ಕರೆಯಲು ಹಲವು ಕಾರಣಗಳಿವೆ. ಪಾಕಿಸ್ತಾನ, ಶ್ರೀಲಂಕಾ, ಚೀನಾ ಸೇರಿ ಅನೇಕ ದೇಶಗಳ ನಾಗರಿಕರು ವಿಶ್ವದ ದೊಡ್ಡಣ್ಣ ಅಮೇರಿಕಾ ಕೂಡ ಮೋದಿ ನಾಯಕತ್ವವನ್ನು ಮೆಚ್ಚಿಕೊಂಡಿದೆ. ಜಿ-20 ಶರಂಗಸಭೆ ನಾಯಕತ್ವ ಭಾರತಕ್ಕೆ ಬರಲು ಮೋದಿ ಅವರ ನಾಯಕತ್ವವೇ ಕಾರಣವಾಗಿದೆ. ದೇಶದ ಜನತೆಗೆ ಕಿಸಾನ್‌ ಸಮ್ಮಾನ್‌ ಯೋಜನೆ, 16,500 ಕೋಟಿ ರೂ.ಗಳನ್ನು 53 ಲಕ್ಷ ರೈತರಿಗೆ ನೀಡಲಾಗಿದೆ. 1.25 ಕೋಟಿ ಆಯುಷ್ಮಾನ್‌ ಕಾರ್ಡ್‌ನ್ನು ಜನರಿಗೆ ಕೊಡಲಾಗಿದೆ ಎಂದು ಹೇಳಿದರು.

ಮಂಡ್ಯಕ್ಕೆ ಡಬಲ್‌ ಇಂಜಿನ್‌ ಸರ್ಕಾರದ ಕೊಡುಗೆ: ಮಂಡ್ಯ ಸಕ್ಕರೆ ಕಾರ್ಖಾನೆ ಬಂದ್‌ ಆಗಿತ್ತು. 100 ಕೋಟಿ ರೂ.ಗಿಂತ ಹೆಚ್ಚು ಅನುದಾನ ನೀಡಿ ಸಕ್ಕರೆ ಕಾರ್ಖಾನೆ ಮರು ಆರಂಭ ಮಾಡಲಾಗಿದೆ. ಈ ವರ್ಷ ಎಥೆನಾಲ್‌ ಘಟಕವನ್ನು ಸ್ಥಾಪಿಸಲಾಗುವುದು. ಪುರಿಗಾಲಿ ಏತನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ. ಪ್ರಧಾನಮಂತ್ರಿ ಸಡಕ್‌ ಯೋಜನೆ 250 ಕಿ.ಮೀ ರಸ್ತೆಯನ್ನು ನಿರ್ಮಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ 2.75 ಲಕ್ಷ ಜನರಿಗೆ ಕಿಸಾನ್‌ ಸಮ್ಮಾನ್‌ ಯೋಜನೆ ಹಣವನ್ನು ಕೊಡಲಾಗಿದೆ. ರೈತ ವಿದ್ಯಾನಿಧಿ ಯೋಜನೆಯಡಿ 35 ಸಾವಿರ ಮಕ್ಕಳಿಗೆ ಸವಲತ್ತು ನೀಡಲಾಗಿದೆ. ಮಂಡ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಪಾರ ಕೊಡುಗೆಗಳನ್ನು ನೀಡಿವೆ. ಸೂಪರ್‌ ಹೈವೆ ಜೊತೆಗೆ ಎಲ್ಲ ಬೇಕು ಬೇಡಿಕೆಗಳನ್ನು ಪೂರೈಸಲು ಬಿಜೆಪಿ ಮಾತ್ರ ಈಡೇರಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

PM Modi In Karnataka: ಸುಮಲತಾರನ್ನು ಸ್ವಾಗತಿಸಿದ ಪ್ರತಾಪ್‌ ಸಿಂಹ, ಪೊಲೀಸರ ಜೊತೆ ಕಾರ್ಯಕರ್ತರ ಕಿರಿಕ್‌!

ಒಮ್ಮೆ ಬಿಜೆಪಿಗೆ ಅವಕಾಶ ಕೊಟ್ಟು ನೋಡಿ: ಈಗಾಗಲೇ ಮಂಡ್ಯದಲ್ಲಿ ಕಳೆದ 30 ವರ್ಷಗಳಿಂದ ನೀವು ಎಲ್ಲರಿಗೂ ಅವಕಾಶ ಮಾಡಿಕೊಟ್ಟು ನೋಡಿದ್ದೀರಿ. ಕೇವಲ 4 ವರ್ಷಗಳಲ್ಲಿ ಅಭಿವೃದ್ಧಿ ಮಾಡಿದ ಕಾರ್ಯಗಳು ನಿಮ್ಮ ಕಣ್ಣ ಮುಂದಿವೆ. ಇನ್ನು ಮುಂದೆ ಭಾರತ ದೇಶದಲ್ಲಿ ಮಂಡ್ಯವನ್ನು ನಂಬರ್‌ 1 ಜಿಲ್ಲೆಯನ್ನು ಮಾಡುವುದಕ್ಕೆ ನಾವು ಬದ್ಧರಾಗಿರುತ್ತೇವೆ. 30 ವರ್ಷದ ವ್ಯವಸ್ಥೆಯನ್ನು ನಾವು ಬದಲಿಸುತ್ತೇವೆ. ನಮಗೆ ಆಶೀರ್ವಾದ ಮಾಡಿ, ನರೇಂದ್ರ ಮೋದಿ ಅವರ ಕೈಯನ್ನು ಬಲಪಡಿಸಬೇಕು ಎಂದು ಹೇಳಿದರು.

click me!