ರಾಜ್ಯದಲ್ಲಿ ನೈತಿಕ ಪೊಲೀಸ್‌ಗಿರಿ ಬಂದ್‌: ಸಿಎಂ ಸಿದ್ದರಾಮಯ್ಯ

By Kannadaprabha NewsFirst Published Jun 7, 2023, 7:43 AM IST
Highlights

ರಾಜ್ಯದಲ್ಲಿ ಅನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ. ಈ ಸಂಬಂಧ ಎಲ್ಲ ಪೊಲೀಸ್‌ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 
 

ಬೆಂಗಳೂರು (ಜೂ.07): ರಾಜ್ಯದಲ್ಲಿ ಅನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ. ಈ ಸಂಬಂಧ ಎಲ್ಲ ಪೊಲೀಸ್‌ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮಂಗಳವಾರ ಕರ್ನಾಟಕ ರಾಜ್ಯ ಹಜ್‌ ಸಮಿತಿ ಆಯೋಜಿಸಿದ್ದ 2023 ನೇ ಸಾಲಿನ ಹಜ್‌ ವಿಮಾನ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನಬದ್ಧವಾಗಿ ರಾಜ್ಯದಲ್ಲಿ ಕಾನೂನಿನ ಆಡಳಿತ ಜಾರಿಯಲ್ಲಿದೆ. ಇದು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಪ್ರತಿಯೊಂದು ಸಮುದಾಯದ ಸಹಭಾಗಿತ್ವ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ನಮ್ಮ ಸರ್ಕಾರ ಸರ್ವರಿಗೂ ಸಮಪಾಲು ಎನ್ನುವ ಮೌಲ್ಯದಲ್ಲಿ ನಂಬಿಕೆ ಇಟ್ಟಿದೆ. 

ರಾಜ್ಯ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳು ಕನ್ನಡ ನಾಡಿನ ಸಮಸ್ತರಿಗೆ ಅನ್ವಯ ಆಗುತ್ತದೆ. ಎಲ್ಲ ಧರ್ಮ, ಎಲ್ಲಾ ಜಾತಿ-ಸಮುದಾಯಗಳ ಅರ್ಹ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆಯುತ್ತಾರೆ ಎಂದರು. ನಮ್ಮ ನಾಡು ಮತ್ತು ನಮ್ಮ ದೇಶ ಸುಭಿಕ್ಷವಾಗಿ ಪ್ರಗತಿಯ ಮಾರ್ಗದಲ್ಲಿ ಸಾಗಬೇಕಿದೆ. ಈ ನೆಲದಲ್ಲಿ ಶಾಂತಿ, ಸೌಹಾರ್ದದ ವಾತಾವರಣ ನೆಲೆಸಲಿ ಎಂದು ಪ್ರತಿಯೊಬ್ಬ ಹಜ್‌ ಯಾತ್ರಿಗಳು ಪ್ರಾರ್ಥಿಸಿ ಎಂದು ಕೇಳಿಕೊಂಡರು. ಈ ವೇಳೆ ಕಂದಾಯ ಸಚಿವ ಕೃಷ್ಣಬೈರೇಗೌಡ, ಸಚಿವ ರಹೀಂ ಖಾನ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಅಮೀರೇ ಶರಿಯತ್‌ ಕರ್ನಾಟಕದ ಹಜರತ್‌ ಮೌಲಾನಾ ಸಗೀರ್‌ ಅಹಮದ್‌ ಖಾನ್‌ ರಶಾದಿ ಸಾಹೇಬ ಮತ್ತು ವಿಜಯಪುರದ ಅಲ್ ಹಶ್ಮಿ ಟ್ರಸ್ವ್‌ ಅಧ್ಯಕ್ಷರಾದ ಮೌಲಾನಾ ಮಫ್ತಿ ಇಫ್ತಿಕಾರ್‌ ಅಹಮದ್‌ ಖಶ್ಮಿ ಸಾಹೇಬ ಇದ್ದರು.

ಸರ್ಕಾರಿ ವಕೀಲರ ನೇಮಕ ಹಗರಣ: ಇಲಾಖಾ ತನಿಖೆಗೆ ಸಿಎಂ ಸಿದ್ದು ನಿರ್ದೇಶನ

ಸಮುದಾಯಕ್ಕೆ 5000 ಕೋಟಿ ಕೊಡಿ: ಕಾರ್ಯಕ್ರಮದಲ್ಲಿ ಮಾತನಾಡಿದ ವಸತಿ ಸಚಿವ ಜಮೀರ್‌ ಅಹಮದ್‌, ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಸಮುದಾಯದ ಪ್ರಗತಿಗೆ 5000 ಕೋಟಿ ಅನುದಾನವನ್ನು ನೀಡಬೇಕು. ಸಮಾಜದ ಹಿರಿಯರು ಈ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ. ನುಡಿದಂತೆ ನಡೆಯುವ ಸಿದ್ದರಾಮಯ್ಯ ಅವರು ಈ ಭರವಸೆ ಈಡೇರಿಸುತ್ತಾರೆ. ಹಜ್‌ ಭವನದ ನವೀಕರಣಕ್ಕೆ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾದಾಗ .5 ಕೋಟಿ ಘೋಷಿಸಿದರು. ಆದರೆ ಬಳಿಕ ಬಂದ ಸರ್ಕಾರಗಳು ಈ ಹಣ ಕೊಡಲಿಲ್ಲ. ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಗೆದ್ದು ಬಂದು ಆ ಹಣ ನೀಡಿದ್ದಾರೆ ಎಂದರು.

ಗೋ ಹತ್ಯೆ ನಿಷೇಧ ಕುರಿತು ಚರ್ಚೆಯಾಗಿಲ್ಲ: ಗೋ ಹತ್ಯೆ ಕಾಯ್ದೆ ನಿಷೇಧ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಇನ್ನೂ ಚರ್ಚೆಯೇ ಆಗಿಲ್ಲ. ಆದರೂ ಯಾಕೆ ಈ ವಿಷಯ ಮುನ್ನೆಲೆಗೆ ತರಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಪ್ರಶ್ನೆ ಮಾಡಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶುಸಂಗೋಪನಾ ಸಚಿವರು ಏನು ಹೇಳಿದ್ದಾರೆಯೋ ಗೊತ್ತಿಲ್ಲ. ಅವರ ಇಲಾಖೆಯದ್ದು ಅವರು ಏನಾದರೂ ಮಾತನಾಡಿರಬಹುದು. ಆದರೆ, ಈ ಕುರಿತು ಮುಖ್ಯಮಂತ್ರಿಯಾಗಲಿ, ಉಪಮುಖ್ಯಮಂತ್ರಿಯಾಗಲಿ ಯಾವುದೇ ಹೇಳಿಕೆ ನೀಡಿಲ್ಲ ಮತ್ತು ಚರ್ಚೆಯನ್ನು ಮಾಡಿಲ್ಲ. ಶಾಸಕಾಂಗ ಸಭೆಯಲ್ಲಿಯೂ ಚರ್ಚೆಯಾಗಿಲ್ಲ. ಆದರೂ ಸರ್ಕಾರ ಈ ಕುರಿತು ತೆಗೆದುಕೊಳ್ಳುವ ತೀರ್ಮಾನದಂತೆಯೇ ನನ್ನ ಅಭಿಪ್ರಾಯ ಇದ್ದೇ ಇರುತ್ತದೆ ಎಂದರು.

ಸಂಸದರಿಗೆ ಟಿಕೆಟ್‌: ಗೊಂದಲ ಇತ್ಯರ್ಥಕ್ಕೆ ಸದಾನಂದಗೌಡ ಆಗ್ರಹ

ತನಿಖೆಯಾಗಲೇಬೇಕು: ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಸಮಗ್ರ ತನಿಖೆಯಾಗಲೇಬೇಕು. ಬಿಜೆಪಿ ಆಡಳಿತದ ಅವಧಿಯಲ್ಲಾಗಿರುವ 40 ಪರ್ಸೆಂಟೇಜ್‌ ಹಗರಣ ಇರಬಹುದು, ಪಿಎಸ್‌ಐ ಹಗರಣ ಇರಬಹುದು, ಎಲ್ಲವೂ ತನಿಖೆಯಾಗಬೇಕು. ಇದರ ಕುರಿತು ನಾವು ಹೋರಾಟ ಮಾಡಿದ್ದೇವೆ. ಖುದ್ದು ಶಾಸಕರೇ ಹಣ ಪಡೆದಿದ್ದೂ ಅಲ್ಲದೆ ಸರ್ಕಾರಕ್ಕೆ ಕೊಟ್ಟಿರುವುದಾಗಿ ಹೇಳಿದ್ದನ್ನು ನೀವೇ ವರದಿ ಮಾಡಿದ್ದೀರಿ. ನಾವು ಹೋರಾಟ ಮಾಡಿದ್ದೇವೆ ಎಂದು ಮಾಜಿ ಶಾಸಕ ಬಸವರಾಜ ದಢೇಸೂಗೂರು ಹೆಸರು ಹೇಳದೇ ಕುಟುಕಿದರು. ಆಗ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರೇ ಈ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಿದ್ದರು. ದಾಖಲೆ ಸಮೇತ ಮಾತನಾಡಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ತನಿಖೆ ಮಾಡಿಸಲೇಬೇಕು ಅಲ್ಲವೇ? ಎಂದರು.

click me!