
ಮಂಗಳೂರು(ಜೂ.07): ಉಳ್ಳಾಲದಲ್ಲಿ ನೈತಿಕ ಪೊಲೀಸ್ಗಿರಿ ಘಟನೆ ನಡೆದ ಬೆನ್ನಲ್ಲೇ ಮಂಗಳೂರಿನಲ್ಲಿ ಕೋಮು ಸೌಹಾರ್ದತೆ ಕದಡುವುದನ್ನು ನಿಯಂತ್ರಿಸಲು ಕೋಮುವಾದ ನಿಗ್ರಹ ದಳ (ಆ್ಯಂಟಿ ಕಮ್ಯುನಲ್ ವಿಂಗ್) ರಚಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಂಗಳವಾರ ನಾಲ್ಕು ಜಿಲ್ಲೆಗಳ ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಂಗಳೂರಿನಲ್ಲಿ ಕೋಮು ಸೌಹಾರ್ದತೆ ಕೆಡಿಸುವ ಅನೇಕ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಕೋಮುವಾದ ನಿಗ್ರಹ ದಳ ಸ್ಥಾಪಿಸುತ್ತೇವೆ. ಅಗತ್ಯಬಿದ್ದರೆ ಇತರೆಡೆ ವಿಸ್ತರಿಸುತ್ತೇವೆ. ಹಾಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಇದಕ್ಕಾಗಿ ಬಳಸುತ್ತೇವೆ. ಸದ್ಯ ನಮ್ಮ ರಾಜ್ಯದಲ್ಲೆಲ್ಲೂ ಈ ದಳ ಇಲ್ಲ. ಇದೇ ಮೊದಲು ಮಂಗಳೂರಿನಲ್ಲಿ ಇಂಥದ್ದೊಂದು ರಚನೆಯಾಗಲಿದೆ. ಸೈಬರ್ ಕ್ರೈಂ, ಕ್ರಿಮಿನಲ್ ಚಟುವಟಿಕೆಗಳ ವಿಚಾರವೂ ಇದರಲ್ಲಿ ಇರುತ್ತದೆ ಎಂದರು.
ಉಳ್ಳಾಲ ಪೊಲೀಸರ ಹಿಂದೂ ವಿರೋಧಿ ನೀತಿಗೆ ಸೂಕ್ತ ಉತ್ತರ: ಪುತ್ತಿಲ ಎಚ್ಚರಿಕೆ
ಇದೀಗ ಪಶ್ಚಿಮ ವಲಯದ ಜಿಲ್ಲೆಗಳಾದ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಪ್ರಗತಿ ಪರಿಶೀಲನೆ ನಡೆಸಿ ಇಲಾಖೆಯ ಸವಾಲುಗಳು, ಸಮಸ್ಯೆ ಬಗ್ಗೆ ಪರಿಶೀಲಿಸಿದ್ದೇನೆ. ಕರಾವಳಿಯ ಈ ಭಾಗದಲ್ಲಿ ಬಹಳ ಒಳ್ಳೆಯ ಜನ, ಬುದ್ಧಿವಂತ ಹಾಗೂ ಶ್ರಮಜೀವಿಗಳು ಇದ್ದಾರೆಂದು ಭಾವಿಸಿದ್ದೇವೆ. ಆದರೆ ಕೆಲವರು ಸಮಾಜದಲ್ಲಿ ಶಾಂತಿ ಕದಡಿ ಭಯದ ವಾತಾವರಣ ನಿರ್ಮಿಸುತ್ತಿರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಮಿತಿ ಅಧ್ಯಕ್ಷನಾಗಿ ನಾನೇ ಇದನ್ನು ಪ್ರಸ್ತಾಪಿಸಿದ್ದೇನೆ. ಅದರಲ್ಲಿ ಕೋಮು ಸೌಹಾರ್ದತೆ ಸ್ಥಾಪನೆ ವಿಚಾರವೂ ಇದೆ. ಕೆಪಿಸಿಸಿ ಅಧ್ಯಕ್ಷನಾಗಿದ್ದಾಗಲೂ ಉಳ್ಳಾಲ ಮತ್ತು ಉಡುಪಿವರೆಗೆ ಪಾದಯಾತ್ರೆ ನಡೆಸಿದ್ದೆ. ಇಂದು ಇಲ್ಲಿ ಭಯದ ವಾತಾವರಣದಿಂದ ಜೀವನ ನಡೆಸುವಂತಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕೋಮು ಸೌಹಾರ್ದತೆ ತರಲು ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗೆ ಆದಾಯದ ಮೂಲ ಯಾವುದು?: ನಳಿನ್ ಕುಮಾರ್ ಕಟೀಲ್
ನೈತಿಕ ಪೊಲೀಸ್ಗಿರಿಗೆ ತಡೆ:
ದಕ್ಷಿಣ ಕನ್ನಡದಲ್ಲಿ ನೈತಿಕ ಪೊಲೀಸ್ಗಿರಿ ನಡೆಯುತ್ತಿದೆ. ಯಾರು ಇದನ್ನು ಮಾಡುತ್ತಾರೆ ಎಂಬುದು ಗೊತ್ತಿದೆ. ಪೊಲೀಸ್ ಇಲಾಖೆ ಇದ್ದರೂ ನಾವು ಇದನ್ನು ತಡೆಯದೆ ಹೋದರೆ ಇಲಾಖೆಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಕೆಟ್ಟಹೆಸರು. ಹೀಗಾಗಿ ನೈತಿಕ ಪೊಲೀಸ್ಗಿರಿ ನಡೆಯಲು ಬಿಡಬಾರದು ಎಂದು ಪೊಲೀಸರಿಗೆ ಕಠಿಣ ಸೂಚನೆ ನೀಡಿದ್ದೇನೆ. ಇದಕ್ಕಾಗಿ ಕೋಮುವಾದ ನಿಗ್ರಹ ದಳವನ್ನು ಮೊದಲು ಇಲ್ಲಿನ ಕಮಿಷನರೆಟ್ ವ್ಯಾಪ್ತಿಯಲ್ಲಿ ಆರಂಭಿಸುತ್ತೇವೆæ. ಒಬ್ಬ ಸಮರ್ಥ ಅಧಿಕಾರಿಯನ್ನು ಇಲ್ಲಿನ ಕಮಿಷನರ್ ಆಗಿ ನೇಮಿಸಲಾಗುತ್ತದೆ. ಕೋಮುವಾದ ನಿಗ್ರಹ ದಳದ ರೂಪುರೇಷೆಯನ್ನು ಕಮಿಷನರ್ ಅವರೇ ನಿರ್ಧರಿಸುತ್ತಾರೆ. ಮುಂದಿನ ದಿನಗಳಲ್ಲಿ ಈ ದಳ ಕಾರ್ಯಾಚರಣೆ ಮಾಡಲಿದೆ ಎಂದು ಡಾ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಕೇಸರೀಕರಣ ಬಿಟ್ಟು ಚೆನ್ನಾಗಿ ಕೆಲಸ ಮಾಡಿ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಸರೀಕರಣ ಮಾಡಿದಿರೋ, ಮತ್ತೊಂದು ಮಾಡಿದಿರೋ ಅದು ನನಗೆ ಅಗತ್ಯ ಇಲ್ಲ. ಆದರೆ ಇನ್ನು ಮುಂದೆ ಪೊಲೀಸರು ಸರಿಯಾಗಿ ನಡೆದುಕೊಳ್ಳಬೇಕು. ಹಿಂದಿನ ಆಟ ನಡೆಯುವುದಿಲ್ಲ ಅಂತ ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ