
ಬಳ್ಳಾರಿ (ಜ.6): ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಮೃತಪಟ್ಟ ರಾಜಶೇಖರ್ ಅವರ ಅಂತ್ಯಸಂಸ್ಕಾರದ ವಿಚಾರವಾಗಿ ಮಾಜಿ ಸಚಿವ ಶ್ರೀರಾಮುಲು ಸ್ಫೋಟಕ ಆರೋಪ ಮಾಡಿದ್ದಾರೆ. ಸಾಕ್ಷಿ ನಾಶಪಡಿಸಲು ಮೃತದೇಹವನ್ನು ಹೂಳುವ ಬದಲಿಗೆ ದಹನ ಮಾಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಇಂದು ಬಳ್ಳಾರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು ಅವರು, ರಾಜಶೇಖರ್ ತಂದೆ ಸುರೇಂದ್ರ ರೆಡ್ಡಿ ಅವರ ಅಂತ್ಯಸಂಸ್ಕಾರದ ಫೋಟೋ ಪ್ರದರ್ಶಿಸಿದರು. ರಾಜಶೇಖರ್ ಕುಟುಂಬದ ಸಂಪ್ರದಾಯದಂತೆ ಮೃತದೇಹವನ್ನು ಮಣ್ಣು ಮಾಡಬೇಕಿತ್ತು. ಅದಕ್ಕಾಗಿ ಮೊದಲೇ ಗುಂಡಿಯನ್ನೂ ಅಗೆಯಲಾಗಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಕುಟುಂಬ ಸದಸ್ಯರು ಎಷ್ಟೇ ಬೇಡಿಕೊಂಡರೂ ಕೇಳದ ಪೊಲೀಸರು ಮತ್ತು ಅಧಿಕಾರಿಗಳು, ಮೃತದೇಹವನ್ನು ಸುಟ್ಟು ಹಾಕಿದ್ದಾರೆ. ಮಣ್ಣು ಮಾಡಿದರೆ ಮುಂದೆಂದಾದರೂ ಸಾಕ್ಷ್ಯಕ್ಕಾಗಿ ಶವವನ್ನು ಹೊರತೆಗೆಯಬಹುದು ಎಂಬ ಭಯದಿಂದಲೇ ಈ ರೀತಿ ಸಾಕ್ಷಿ ನಾಶ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ರಾಜಶೇಖರ್ ಸಾವಿನ ಸುತ್ತಲಿನ ನಿಗೂಢತೆಯನ್ನು ಬಿಚ್ಚಿಟ್ಟ ಶ್ರೀರಾಮುಲು ಅವರು, ರಾಜಶೇಖರ್ ಅವರ ದೇಹದಲ್ಲಿ ಒಂದಲ್ಲ, ನಾಲ್ಕಾರು ಬುಲೆಟ್ ಹೊಕ್ಕಿದ್ದವು. ಮೃತದೇಹವನ್ನು ಸುಟ್ಟು ಹಾಕಿದರೆ ಬುಲೆಟ್ಗಳು ಇರುವ ಬಗ್ಗೆ ಪತ್ತೆಯಾಗುವುದಿಲ್ಲ ಎಂಬುದು ಪೊಲೀಸ್ ಅಧಿಕಾರಿಗಳ ಲೆಕ್ಕಾಚಾರ. ಎಎಸ್ಪಿ ರವಿಕುಮಾರ್ ಅವರೇ ಸ್ವತಃ ಮುಂದೆ ನಿಂತು, ಪೊಲೀಸ್ ಸರ್ಪಗಾವಲಿನಲ್ಲಿ ಕುಟಂಬಸ್ಥರಿಗೆ ಬೆದರಿಕೆ ಹಾಕಿ ಮೃತದೇಹ ದಹನ ಮಾಡಿಸಿದ್ದಾರೆ. ಇದು ಉದ್ದೇಶಪೂರ್ವಕವಾಗಿ ನಡೆದ ಕೊಲೆ. ನಮ್ಮ ಮೇಲೆ ಕೇಸ್ ಹಾಕಿ ನಮ್ಮ ರಾಜಕೀಯ ಭವಿಷ್ಯ ನಾಶ ಮಾಡಲು ಭರತ್ ರೆಡ್ಡಿ ಈ ಸಂಚು ರೂಪಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ದೇವರಿಗೆ ಮಾತ್ರ ಜೀವ ತೆಗೆಯುವ ಅಧಿಕಾರವಿದೆ
ರಾಜಕೀಯ ದ್ವೇಷದ ಬಗ್ಗೆ ಮಾತನಾಡಿದ ರಾಮುಲು, ರಾಜಕೀಯದಲ್ಲಿ ಗೆಲುವು-ಸೋಲು ಶಾಶ್ವತವಲ್ಲ. ನೀನು ಸೋಲಬಹುದು ಅಥವಾ ನಾನು ಸೋಲಬಹುದು. ಈ ಜಗತ್ತೇ ಒಂದು ನಾಟಕ ರಂಗ. ಆದರೆ ಇನ್ನೊಬ್ಬರ ಜೀವ ತೆಗೆಯುವ ಅಧಿಕಾರ ಯಾರಿಗೂ ಇಲ್ಲ, ಅದು ದೇವರಿಗೆ ಮಾತ್ರ ಇರುವುದು. ಜನಾರ್ದನ ರೆಡ್ಡಿ ಮತ್ತು ನನ್ನ ಮೇಲೆ ಗುಂಡು ಹಾರಿಸಿದ್ದಾರೆ ಎಂಬ ಸುದ್ದಿ ತಿಳಿದಾಗ ಜನರು ಆಕ್ರೋಶದಿಂದ ಬರುವುದು ಸಹಜ. ಆದರೆ ಎಎಸ್ಪಿ ರವಿಕುಮಾರ್ ಅಂದು ಘಟನೆಯನ್ನು ತಡೆಯುವ ಬದಲು ವಿಳಂಬ ಮಾಡಿದರು, ಈ ಎಲ್ಲ ಘಟನೆಯ ಹಿಂದೆ ಪೂರ್ವನಿಯೋಜಿತ ಸಂಚಿದೆ ಎಂದರು.
ಘಟನಾ ಸ್ಥಳದಲ್ಲಿ ಹತ್ತು ಗುಂಡುಗಳು ಪತ್ತೆಯಾಗಿವೆ ಎಂದು ತಿಳಿಸಿದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಸಿಬಿಐ ತನಿಖೆಯಾದರೆ ಎಎಸ್ಪಿ ರವಿಕುಮಾರ್ ಮತ್ತು ಡಿಎಸ್ಪಿ ನಂದಾರೆಡ್ಡಿ ಅವರ ಅಸಲಿ ಬಣ್ಣ ಬಯಲಾಗುತ್ತದೆ. ಈ ಪ್ರಕರಣದಲ್ಲಿ ಎಎಸ್ಪಿ ರವಿಕುಮಾರ್ ಅವರನ್ನು ನಾವು ಬಿಡುವ ಪ್ರಶ್ನೆಯೇ ಇಲ್ಲ. ಸಿಬಿಐ ತನಿಖೆ ನಡೆದರೆ ಸತ್ಯ ಹೊರಗೆ ಬರುತ್ತದೆ. ಈ ಕೇಸ್ನಲ್ಲಿ ಸದ್ಯ 14 ಬಿಜೆಪಿ ಕಾರ್ಯಕರ್ತರನ್ನ ಬಂಧಿಸಿದ್ದಾರೆ ಆದರೆ ಗಲಭೆ ಎಬ್ಬಿಸಿದ ಗುಂಡು ಹಾರಿಸಿದ್ದ 12 ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ನಿಜವಾದ ತಪ್ಪಿತಸ್ಥ ಆರೋಪಿಯಾದ ಭರತ್ ರೆಡ್ಡಿ ಅವರಿಗೆ ಪೊಲೀಸ್ ಅಧಿಕಾರಿಗಳೇ ಸಾಥ್ ನೀಡಿದ್ದಾರೆ. ಪವನ್ ನೆಜ್ಜೂರ್ ಅವರನ್ನ ಅಮಾನತು ಮಾಡುವ ಬದಲು ರವಿಕುಮಾರ್ ಅವರನ್ನ ಮಾಡಬೇಕಿತ್ತು. ಆದರೆ ಪೂರ್ವನಿಯೋಜಿವಾಗಿಯೇ ನಡೆದಿದೆ ಎಂದು ಆರೋಪಿಸಿದರು.
ಎಎಸ್ಪಿ ರವಿಕುಮಾರ್ ಅಮಾನತ್ತಿಗೆ ಅಂತಿಮ ಎಚ್ಚರಿಕೆ
ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಿಕ್ಕಾಪಟ್ಟೆ ಗುಂಡು ಹಾರಾಟ ನಡೆದಿದ್ದರೂ ಅದನ್ನು ಮುಚ್ಚಿಡಲು ಸರ್ಕಾರ ಪ್ರಯತ್ನಿಸುತ್ತಿದೆ. ಎಎಸ್ಪಿ ರವಿಕುಮಾರ್ ಮತ್ತು ಡಿಎಸ್ಪಿ ನಂದಾರೆಡ್ಡಿ ಅಮಾನತಿಗೆ ನಮ್ಮ ಆಗ್ರಹ ಮುಂದುವರಿಯುತ್ತದೆ. ಇಡೀ ಪ್ರಕರಣದ ಹಿಂದೆ ಶಾಸಕ ಭರತ್ ರೆಡ್ಡಿ ಅವರ ನೇರ ಕೈವಾಡವಿದೆ, ಎಂದು ಸುದ್ದಿಗೋಷ್ಠಿಯಲ್ಲಿ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ