
ಬಳ್ಳಾರಿ (ಜ.6): ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ, ಮಾಜಿ ಸಚಿವ ಶ್ರೀರಾಮುಲು ಮತ್ತು ಶಾಸಕ ಜನಾರ್ದನ ರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಗೈದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ಬಳ್ಳಾರಿ ಘಟನೆ ಆಕಸ್ಮಿಕವಲ್ಲ, ಇದು ಪೂರ್ವನಿಯೋಜಿತ ಸಂಚು. ಶಾಸಕ ಭರತ್ ರೆಡ್ಡಿ ಫಿಲ್ಮ್ ಸ್ಟೈಲ್ನಲ್ಲಿ ಎಂಟ್ರಿ ಕೊಟ್ಟರು. ಅವರ ಬೆಂಬಲಿಗರು ಬಾರ್ಗಳಿಂದ ಸೋಡಾ ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಬಂದಿದ್ದರು. ನಮ್ಮ ಮೇಲೆ ದಾಳಿ ಮಾಡಲು ನೂರಾರು ಜನರನ್ನು ಕರೆತಂದಿದ್ದು ಕಾಂಗ್ರೆಸ್ ಶಾಸಕರೇ ಹೊರತು ನಾವಲ್ಲ. ಜನಾರ್ದನ ರೆಡ್ಡಿ ಅವರನ್ನು ಸ್ಥಳದಲ್ಲೇ ಮುಗಿಸಲು ಭರತ್ ರೆಡ್ಡಿ ಪ್ಲಾನ್ ಮಾಡಿಕೊಂಡು ಬಂದಿದ್ದರು ಎಂದು ನೇರ ಆರೋಪ ಮಾಡಿದರು.
ಘಟನೆಯ ವೇಳೆ ಪೊಲೀಸರ ವೈಫಲ್ಯವನ್ನು ಪ್ರಶ್ನಿಸಿದ ಅವರು, ಡಿಕೆಶಿ ಅವರೇ, ನೀವು ಎಸ್ಪಿ ಪವನ್ ನೆಜ್ಜೂರು ಅವರನ್ನು ಅಮಾನತ್ತು ಮಾಡಿದ್ದೀರಿ. ಆದರೆ ಅಸಲಿ ತಪ್ಪಿತಸ್ಥ ಎಎಸ್ಪಿ ರವಿಕುಮಾರ್. ಘಟನೆ ನಡೆಯುವಾಗ ಸ್ಥಳದಲ್ಲಿ ಇಲ್ಲ. ಅವರು ಉದ್ದೇಶಪೂರ್ವಕವಾಗಿ, ಬೇಕೆಂದೇ ವಿಳಂಬ ಮಾಡಿದರು. ಪರಿಸ್ಥಿತಿ ಕೈಮೀರುತ್ತಿದ್ದರೂ ಟಿಯರ್ ಗ್ಯಾಸ್ ಬಳಸಲು ಅನುಮತಿ ನೀಡಲಿಲ್ಲ. ರಾಮುಲು ವಿರುದ್ಧ ಕೆಲಸ ಮಾಡಿದ್ದಕ್ಕೆ ಅವರಿಗೆ ಇಲ್ಲಿ ಮತ್ತೆ ಪೋಸ್ಟಿಂಗ್ ನೀಡಲಾಗಿದೆ. ಐಜಿ ಅವರು ಭರತ್ ರೆಡ್ಡಿ ಜೊತೆ ಚರ್ಚಿಸಿ ನಮ್ಮ ಮೇಲೆ ಯಾವ ಕೇಸ್ ಹಾಕಬೇಕು ಎಂದು ನಿರ್ಧರಿಸುತ್ತಾರೆ ಇದೆಂಥ ಕಾನೂನು ವ್ಯವಸ್ಥೆ? ಎಂದು ಆಕ್ರೋಶ ಹೊರಹಾಕಿದರು.
ಶಾಸಕರ ಗನ್ ಮ್ಯಾನ್ ಫೈರಿಂಗ್ ವಿಚಾರವಾಗಿ ಮಾತನಾಡಿದ ರಾಮುಲು, ಸತೀಶ್ ರೆಡ್ಡಿ ಗನ್ ಮ್ಯಾನ್ ಗುಂಡು ಹಾರಿಸಿದ್ದು ಜನಾರ್ದನ ರೆಡ್ಡಿ ಅವರನ್ನೇ ಗುರಿ ಮಾಡಿ. ಸ್ವಲ್ಪ ಅಂತರದಲ್ಲಿ ರೆಡ್ಡಿ ಅವರು ಪಾರಾದರು, ಇಲ್ಲದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಇವತ್ತು ಘಟನಾ ಸ್ಥಳದಲ್ಲಿ ಗುಂಡುಗಳು ಪತ್ತೆಯಾಗಿವೆ. ಮೃತ ರಾಜಶೇಖರ್ ಭರತ್ ರೆಡ್ಡಿ ಪಕ್ಕದಲ್ಲೇ ಇದ್ದರು, ಅವರಿಗೆ ಇವರ ಗನ್ ಮ್ಯಾನ್ ಹಾರಿಸಿದ ಗುಂಡೇ ತಗುಲಿರಬಹುದು. ಅದನ್ನು ಮುಚ್ಚಿ ಹಾಕಲು ಮತ್ತು ಜನಾರ್ದನ ರೆಡ್ಡಿ ತಲೆಗೆ ಕೊಲೆ ಕೇಸ್ ಕಟ್ಟಲು ಎರಡು ಬಾರಿ ಪೋಸ್ಟ್ ಮಾರ್ಟಂ ಮಾಡಲಾಗಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಆತ್ಮ೧ಹತ್ಯೆ ಯತ್ನದ ಗುಲ್ಲು: ಪವನ್ ನೆಜ್ಜೂರು ಎಲ್ಲಿದ್ದಾರೆ?
ಎಸ್ಪಿ ಪವನ್ ನೆಜ್ಜೂರು ಆತ್ಮ೧ಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಯ ಬಗ್ಗೆ ಮಾತನಾಡಿದ ಅವರು, ಇದು(ಕಾಂಗ್ರೆಸ್ ಸರ್ಕಾರ) ಕೊಲೆಗಡುಕ ಸರ್ಕಾರ. ಗಣಪತಿ ಹೆಗಡೆ ಆತ್ಮ೧ಹತ್ಯೆ ಮಾಡ್ಕೊಂಡ್ರು, ಡಿಕೆ ರವಿ, ವಾಲ್ಮೀಕಿ ಹಗರಣದ ಚಂದ್ರಶೇಖರ್ ಅವರೂ ಆತ್ಮ೧ಹತ್ಯೆ ಮಾಡ್ಕೊಂಡ್ರು ಈಗ ಪವನ್ ಅವರಿಗೂ ಏನಾದರೂ ತೊಂದರೆಯಾಗಿದೆಯೇ? ಅವರು ಎಲ್ಲಿದ್ದಾರೆ ಎಂದು ಸ್ಪಷ್ಟಪಡಿಸಲಿ. ಪವನ್ ನೆಜ್ಜೂರ್ ತಂದೆಯವರನ್ನ ಕರೆಸಿದ್ದು ಹೇಳಿಕೆ ಕೊಡಿಸಿದ್ದು ಯಾರು? ಅವರನ್ನ ಯಾಕೆ ಕರೆಸಿದ್ದು? ಪವನ್ ನೆಜ್ಜೂರ್ ಅವರೇ ಬಂದು ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಬಹುದಿತ್ತಲ್ಲ? ಎಂದು ಸಂಶಯ ವ್ಯಕ್ತಪಡಿಸಿದರು.
ನಾನು ರಾಜಕೀಯ ಮೀರಿ ಡಿಕೆಶಿಗೆ ಫೋನ್ ಕಾಲ್ ಮಾಡಿದ್ದೆ
ನಾನು ರಾಜಕೀಯ ಮೀರಿ ಡಿಕೆ ಶಿವಕುಮಾರ್ ಅವರಿಗೆ ಫೋನ್ ಮಾಡಿದ್ದು ನಿಜ. ಅಂದು ಅಸಹಾಯಕ ಸ್ಥಿತಿಯಲ್ಲಿದ್ದ ಕಾರಣ ಗೆಳೆತನದ ನೆಲೆಯಲ್ಲಿ ಕರೆ ಮಾಡಿದ್ದೆ. ಗೃಹ ಸಚಿವರು ಮತ್ತು ಸಂತೋಷ್ ಲಾಡ್ ಅವರಿಗೂ ಮಾಹಿತಿ ನೀಡಿದ್ದೆ. ಈಗ ಭರತ್ ರೆಡ್ಡಿ ಪಕ್ಕದಲ್ಲಿ ಕುಳಿತು ಮುಖ್ಯಮಂತ್ರಿಗಳು ಮಾತನಾಡಿದರೆ ನ್ಯಾಯ ಸಿಗಲು ಸಾಧ್ಯವೇ? ಮೊದಲು ಕೊಲೆ ಆರೋಪಿ ಭರತ್ ರೆಡ್ಡಿ ಅವರನ್ನು ಬಂಧಿಸಬೇಕು ಎಂದು ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಜಂಟಿಯಾಗಿ ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ