A Narayanaswamy: ಕಾಡುಗೊಲ್ಲರಿಗೆ ಎಸ್‌ಟಿ ಮೀಸಲು ಕೊಡಿಸಲು ಯತ್ನ

Kannadaprabha News   | Asianet News
Published : Feb 07, 2022, 06:07 AM IST
A Narayanaswamy: ಕಾಡುಗೊಲ್ಲರಿಗೆ ಎಸ್‌ಟಿ ಮೀಸಲು ಕೊಡಿಸಲು ಯತ್ನ

ಸಾರಾಂಶ

ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ ಮೀಸಲಾತಿ ಸೌಲಭ್ಯ ಕೊಡಿಸುವ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಭರವಸೆ ನೀಡಿದ್ದಾರೆ.

ಬೆಂಗಳೂರು (ಫೆ.07): ಕಾಡುಗೊಲ್ಲ (Kadugolla) ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ST) ಸೇರ್ಪಡೆ ಮಾಡಿ ಮೀಸಲಾತಿ ಸೌಲಭ್ಯ ಕೊಡಿಸುವ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ (A Narayanaswamy) ಭರವಸೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕಾಡುಗೊಲ್ಲರ ಜೀವನಶೈಲಿ ಕುರಿತ ‘ನಾವು ಕಾಡುಗೊಲ್ಲರು’ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಾಡುಗೊಲ್ಲ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ, ಸೌಲಭ್ಯ ಕಲ್ಪಿಸಲು ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು. ಕಾಡುಗೊಲ್ಲರ ನೋವಿನ ಜೀವನ ಪದ್ಧತಿ ಮತ್ತು ಜೀವನಶೈಲಿ, ನೂರಾರು ವರ್ಷದ ಇತಿಹಾಸವನ್ನು ಎಲ್ಲರಿಗೂ ತಿಳಿಸಬೇಕಿದೆ. ಇವರ ಸಂಸ್ಕೃತಿಯಲ್ಲಿ ಸಿರಿತನವಿದೆ. ಮನುಕುಲಕ್ಕೆ ಸಹಕಾರಿಯಾಗಿ ಬಾಳುವೆ ಮಾಡುವ ಕಾಡುಗೊಲ್ಲರನ್ನು ಸ್ವಾತಂತ್ರ್ಯ ದೊರೆತ ನಂತರವೂ ನಮ್ಮನ್ನು ಆಳಿದ ಸರ್ಕಾರಗಳು ಕಡೆಗಣಿಸಿವೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯವು ಕಾಡುಗೊಲ್ಲ ಸಮಾಜದ ಇತಿಹಾಸವನ್ನು ಸಂಗ್ರಹಿಸಿದ್ದು, ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. 1807ರಲ್ಲಿಯೇ ಬುಕನ್‌ ಸಮಿತಿ ಕಾಡುಗೊಲ್ಲರನ್ನು ಬುಡಕಟ್ಟು ಜನಾಂಗ ಎಂದು ವರದಿ ನೀಡಿದೆ. ಆದರೆ ರಾಜಕೀಯ ತೀರ್ಮಾನ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಇವರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಸಚಿವರು ವಿಷಾದಿಸಿದರು. ಕಾಡುಗೊಲ್ಲ ಸಮುದಾಯದ ಮಾಜಿ ಶಾಸಕ ಉಮಾಪತಿ, ಮುಖಂಡರಾದ ಮಹಲಿಂಗಪ್ಪ, ದೇವರಾಜು, ಬಸವರಾಜ್‌, ತಿಮ್ಮಯ್ಯ, ಗುರುಲಿಂಗಯ್ಯ, ಸಿದ್ದೇಶ್‌, ಮುರುಳಿ, ವಿಶ್ವನಾಥ, ರಂಗಸ್ವಾಮಿ, ಪೂಜಾರಪ್ಪ ಮತ್ತಿತರರು ಉಪಸ್ಥಿತರಿದ್ದರು.

Basavaraj Bommai: ಸ್ತ್ರೀಯರ ಆತ್ಮರಕ್ಷಣೆ ತರಬೇತಿಗೆ ಪೊಲೀಸ್‌ ಶಾಲೆ ಬಳಕೆ

ನಾವಿರೋವರೆಗೂ ಮೀಸಲು ರದ್ದಾಗಲ್ಲ: ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವಷ್ಟುದಿನ ಮೀಸಲಾತಿ ರದ್ದತಿ ವಿಚಾರವನ್ನು ಎತ್ತುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರು 21 ಮಂದಿ ದಲಿತರಿಗೆ ಸಚಿವ ಸ್ಥಾನ ನೀಡಿರುವುದರಿಂದ ಬಿಜೆಪಿ ಯಾರ ಪರ ಇದೆ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ. ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬುಧವಾರ ಜನಾಶೀರ್ವಾದ ಯಾತ್ರೆ ನಡೆಸಿದ ಅವರು ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. 

52 ವರ್ಷ ದಲಿತರಿಗೆ ಹೆಂಡ ಕುಡಿಸಿ, ಖಂಡ ತಿನ್ನಿಸಿ ಅಧಿಕಾರ ನಡೆಸಿದ ಕಾಂಗ್ರೆಸ್ಸಿಗರು ಈಗ ಮೀಸಲಾತಿ ಬಗ್ಗೆ ಮಾತನಾಡ್ತಾರೆ. ಕೇಂದ್ರದಲ್ಲಿ ಬಿಜೆಪಿ ಕೇವಲ ಹದಿಮೂರು ವರ್ಷ ಮಾತ್ರ ಅಧಿಕಾರ ನಡೆಸಿದೆ ಎಂದರು. ಕಾಂಗ್ರೆಸ್ಸಿಗರು ಬಿಜೆಪಿಯನ್ನು ಬ್ರಾಹ್ಮಣರ ಪಕ್ಷವೆಂದು, ಗರ್ಭಗುಡಿ ರಾಜಕೀಯವೆಂದು ಮೂದಲಿಸಿದರು. ಆದರೆ ಹಿಂದುಳಿದ ವರ್ಗಗಳ ನಾಯಕನನ್ನು ಪ್ರಧಾನಿ ಮಾಡಿದ್ದೇ ಬಿಜೆಪಿ. 21 ಜನ ಪರಿಶಿಷ್ಟರನ್ನು ಕೇಂದ್ರ ಸಚಿವರನ್ನಾಗಿ ಮಾಡಿದ್ದೂ ಇದೇ ಬಿಜೆಪಿ ಎಂಬುದನ್ನು ಟೀಕಿಸುವ ವಿಪಕ್ಷಗಳು ಅರಿಯಲಿ. 

Siddaramaiah Press Conference ನಾನು ಯಾವಾಗಲೂ ಕೂಲ್ ಆಗಿ ಇರ್ತೀನಿ, ಆದ್ರೆ…

ಜೊತೆಗೆ ನೀವು ಅಧಿಕಾರದಲ್ಲಿದ್ದಾಗ ಯಾರನ್ನು ಪ್ರಧಾನಿ ಮಾಡಿದ್ದಿರಿ, ಎಷ್ಟುಜನ ಪರಿಶಿಷ್ಟರಿಗೆ ಕೇಂದ್ರ ಸಚಿವ ಸ್ಥಾನ ನೀಡಿದ್ದಿರಿ ಎಂಬುದನ್ನು ಉತ್ತರಿಸಿ ಎಂದು ಅವರು ಸವಾಲು ಹಾಕಿದರು. ಈಗ ಹಾಲಿ ಇರುವ ಪರಿಸ್ಥಿತಿ ಗಮನಿಸಿದರೆ ದಲಿತರ ಪರ ಯಾವ ಸರ್ಕಾರ ಇದೆ ಎನ್ನುವುದು ತೀರ್ಮಾನ ಆಗುತ್ತದೆ ಎಂದರು. ಸಂಸತ್‌ನಲ್ಲಿ ಸದನದ ಸಂಪ್ರದಾಯವನ್ನು ಪಾಲಿಸುವ ನಡವಳಿಕೆ ಕಾಂಗ್ರೆಸ್ಸಿಗರಲ್ಲಿ ಇಲ್ಲ. ಸ್ಪೀಕರ್‌ ಎದ್ದು ನಿಂತರೆ ಅವರ ಮುಖಕ್ಕೆ ಪುಸ್ತಕ ಎಸೆಯುತ್ತಾರೆ. ಟೇಬಲ್‌ ಮೇಲೆ ನಿಂತು ಡ್ಯಾನ್ಸ್‌ ಮಾಡುತ್ತಾರೆ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಈ ರೀತಿ ಮಾಡಲು ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್