
ಬೆಂಗಳೂರು(ಅ.25): 2012-13 ಹಾಗೂ 2014-15ನೇ ಸಾಲಿನಲ್ಲಿ ಅಕ್ರಮವಾಗಿ ಶಿಕ್ಷಕ ಹುದ್ದೆ ಪಡೆದವರು ರಾಜ್ಯ ತನಿಖಾ ದಳ (ಸಿಐಡಿ) ತನಿಖೆಯನ್ನು ಎದುರಿಸುವುದು ಮಾತ್ರವಲ್ಲ ಅವರನ್ನು ಸೇವೆಯಿಂದಲೇ ವಜಾಗೊಳಿಸುವ ಕಠಿಣ ನಿರ್ಧಾರಕ್ಕೆ ರಾಜ್ಯ ಬಂದಿದ್ದು, ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಇದುವರೆಗೆ ಅಕ್ರಮ ನೇಮಕಾತಿ ಹಗರಣ ಸಂಬಂಧ 41 ಶಿಕ್ಷಕರನ್ನು ಸಿಐಡಿ ಬಂಧಿಸಿದೆ. ಇನ್ನು ತನಿಖೆ ಪ್ರಗತಿಯಲ್ಲಿದ್ದು, ಸುಮಾರು 100ಕ್ಕೂ ಹೆಚ್ಚಿನ ಶಿಕ್ಷಕರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಬಹುದು ಎಂದು ಸಿಐಡಿ ಹೇಳುತ್ತಿದೆ. ಈ ಅಕ್ರಮದಲ್ಲಿ ತೊಡಗಿದ ಶಿಕ್ಷಕರ ಮೇಲೆ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗ ಬಂಧಿತರಾಗಿರುವ ಶಿಕ್ಷಕರು ಕಾನೂನುಬಾಹಿರವಾಗಿ ಸರ್ಕಾರಿ ಹುದ್ದೆ ಪಡೆದಿರುವುದು ತನಿಖೆಯಲ್ಲಿ ರುಜುವಾತಾಗಿದೆ. ಸರ್ಕಾರಕ್ಕೆ ಆರೋಪಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗಿದ್ದು, ಅದರನ್ವಯ ಶಿಕ್ಷಕರನ್ನು ಸೇವೆಯಿಂದಲೇ ವಜಾಗೊಳಿಸಲು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಅಲ್ಲದೆ, ಈ ಹಗರಣದ ಕುರಿತು ಶಿಕ್ಷಣ ಇಲಾಖೆ ಕೂಡಾ ಪ್ರತ್ಯೇಕವಾಗಿ ಇಲಾಖಾ ಮಟ್ಟದ ಆಂತರಿಕ ವಿಚಾರಣೆ ನಡೆಸಿದೆ ಎಂದು ಸಿಐಡಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ; ಗುಮ್ಮಟನಗರಿಯ ಓರ್ವ ಶಿಕ್ಷಕ ಬಂಧನ!
ಬಂಧಿತರ ಸಂಖ್ಯೆ 100ಕ್ಕೆ?:
2012-13 ಹಾಗೂ 2014-15ನೇ ಸಾಲಿನಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ವಿಧಾನಸೌಧ ಹಾಗೂ ಹಲಸೂರುಗೇಟ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಮೂರು ಎಫ್ಐಆರ್ ದಾಖಲಾಗಿದ್ದು, ಮುಂದಿನ ಹಂತದಲ್ಲಿ ಮತ್ತಷ್ಟುಎಫ್ಐಆರ್ಗಳ ದಾಖಲಾಗಲಿವೆ. ಅದರಂತೆ ಬಂಧಿತ ಶಿಕ್ಷಕರ ಸಂಖ್ಯೆ ಕೂಡ ಹೆಚ್ಚಾಗಲಿದೆ. ಈವರೆಗೆ 41 ಶಿಕ್ಷಕರು, 7 ಮಂದಿ ಜಂಟಿ ನಿರ್ದೇಶಕರು ಹಾಗೂ ಇಬ್ಬರು ನೌಕರರು ಬಂಧಿತರಾಗಿದ್ದಾರೆ. ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಹೆಚ್ಚುವರಿ ಪಟ್ಟಿಗೆ 4 ವರ್ಷಗಳು
ಶಿಕ್ಷಕರ ನೇಮಕಾತಿ ಸಂಬಂಧ ಹೆಚ್ಚುವರಿ ಪಟ್ಟಿಯಲ್ಲಿದವರ ಆಯ್ಕೆ ಪ್ರಕ್ರಿಯೆಯನ್ನು ನಾಲ್ಕೈದು ವರ್ಷ ನಡೆಸಿದ್ದಾರೆ. ಇದರಿಂದ ಹಂತ ಹಂತವಾಗಿ ವಾಮಮಾರ್ಗದಲ್ಲಿ ಕೆಲವರು ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಅನುಕೂಲವಾಗಿದೆ. ಈ ಅಕ್ರಮದಲ್ಲಿ ಬೆಂಗಳೂರು ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಪ್ರಸಾದ್ ಪ್ರಮುಖ ಪಾತ್ರವಹಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
3 ಅಲ್ಲ, ಎಲ್ಲ ಜಿಲ್ಲೆಗಳಲ್ಲೂ ಶಿಕ್ಷಕರ ನೇಮಕ ಅಕ್ರಮ: ಹಾಲಿ, ಮಾಜಿ ಅಧಿಕಾರಿಗಳಿಗೆ ಬಂಧನ ಭೀತಿ..!
ನಗದು ರೂಪದಲ್ಲೇ ಡೀಲ್
ಶಿಕ್ಷಕರ ನೇಮಕಾತಿಯಲ್ಲಿ ನಗದು ರೂಪದಲ್ಲಿ ಹಣದ ವ್ಯವಹಾರ ನಡೆದಿದೆ. ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ನಡೆದಿಲ್ಲ. ಹೀಗಾಗಿ ಅಕ್ರಮದಲ್ಲಿ ಹಣ ಚಲಾವಣೆಗೆ ಪುರಾವೆ ಪತ್ತೇದಾರಿಕೆ ಸವಾಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಬ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣದಲ್ಲಿ 102 ಮಂದಿ ಬಂಧಿತರಾಗಿದ್ದಾರೆ. ಅದೇ ರೀತಿ ಶಿಕ್ಷಕರ ನೇಮಕಾತಿಯಲ್ಲಿ ಕೂಡಾ ಬಂಧಿತರ ಸಂಖ್ಯೆ ಶತಕ ದಾಟುವ ಲಕ್ಷಣಗಳು ಕಂಡು ಬಂದಿವೆ. ತಪ್ಪಿಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುವಂತೆ ಸರ್ಕಾರ ಕೂಡಾ ತನಿಖಾ ತಂಡಗಳಿಗೆ ಫ್ರೀ ಹ್ಯಾಂಡ್ ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ