
ಶಿವಮೊಗ್ಗ: ಆರ್ಎಸ್ಎಸ್ ವಿರುದ್ಧ ಜೋರಾಗಿ ಹೇಳಿದ್ರೇ ಮುಸ್ಲಿಂರಿಗೆ ಮೆಸೇಜ್ ಹೋಗುತ್ತೆ. ಆಗ ಅವರ ವೋಟ್ ನಮಗೆ ಬರುತ್ತೇ ಎಂಬ ಭಾವನೆಯಿಂದ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ತೆಗಳುತ್ತಿದ್ದಾರೆ. ಇದಕ್ಕೆ ಜನರೇ ಉತ್ತರ ಕೊಡ್ತಾರೆ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಹಾಗೂ ಹರಿಪ್ರಸಾದ್ ಅವರು ಹಗುರವಾಗಿ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮದ ಬಗ್ಗೆ ಇದೇ ಜನಗಳು ಕೀಳಾಗಿ ಮಾತಾಡುತ್ತಿದ್ದರು. ಈಗ ಹಿಂದೂ ಧರ್ಮದ ಬಗ್ಗೆ ಮಾತಾಡಿದರೆ ವೋಟ್ ಹೋಗುತ್ತೆ ಎಂದು ಗೊತ್ತಾಗಿದೆ. ಹೀಗಾಗಿ ಆರ್ಎಸ್ಎಸ್ ಅನ್ನು ಟಾರ್ಗೆಟ್ ಮಾಡುವ ಪ್ರಯತ್ನ ಮಾಡ್ತಿದ್ದಾರೆ ಎಂದು ಟೀಕಿಸಿದರು.
ಆರ್ಎಸ್ಎಸ್ಗೆ 100 ವರ್ಷ ಆಗಿದ್ದು, ದೇಶಭಕ್ತರನ್ನು ನಿರ್ಮಾಣ ಮಾಡುತ್ತಿದೆ. ಈಗ ಮೊದಲಿನ ಹಾಗೇ ಅಲ್ಲ. ಪ್ರತಿಯೊಬ್ಬರಿಗೂ ಆರ್ಎಸ್ಎಸ್ ಬಗ್ಗೆ ಗೊತ್ತಿದೆ.ಆರ್ಎಸ್ಎಸ್ ಇರಬೇಕು ಎಂಬ ಭಾವನೆ ಜನರಲ್ಲಿದೆ. ಹೀಗಾಗಿ ಕೋಟ್ಯಂತರ ಜನ ಆರ್ಎಸ್ಎಸ್ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ. ಹೀಗಿರುವಾಗ ಕಾಂಗ್ರೆಸ್ನವರಿಂದ ಆರ್ಎಸ್ಎಸ್ ಅನ್ನು ಏನು ಮಾಡೋಕೆ ಸಾಧ್ಯವಿಲ್ಲ. ನೋಟಿಸ್ ಕೊಡ್ತೇವೆ ಅಂದಿದ್ದಾರೆ. ಕೊಡಲಿ, ಲೀಗಲ್ ಬ್ಯಾಟಲ್ ಆಗಲಿ, ಹೇಗೆ ರಿಜಿಸ್ಟ್ರೇಷನ್ ಆಗಬೇಕು, ಯಾವ ಕಾರಣಕ್ಕೆ ಆಗಬೇಕು. ಕಾನೂನುಬದ್ಧವಾಗಿ ಅವರೇ ಕೊಡಲಿ ಎಂದು ಕುಟುಕಿದರು.
100 ವರ್ಷದಿಂದ ಎಲ್ಲರೂ ಕೇಳಿದ್ದನ್ನು ಹೇಳಿದ್ದೇವೆ. ಅನೇಕ ಕೋರ್ಟ್ ನಲ್ಲಿ ಪ್ರಕರಣ ನಡೆದಿದೆ. ಈಗ ಹೊಸದಾಗಿ ಇವರು ಹೇಳುತ್ತಿದ್ದಾರಷ್ಟೆ. ದಾವಣಗೆರೆ ಸೇರಿದಂತೆ ಹಲವೆಡೆ ಮುಸ್ಲಿಂ ವೋಟ್ ಕಾಂಗ್ರೆಸ್ಗೆ ವ್ಯತ್ಯಾಸ ಆಗಿದೆ. ಮೌಲ್ವಿಗಳು, ಧರ್ಮ ಗುರುಗಳು ಕಾಂಗ್ರೆಸ್ ಮೇಲೆ ಒತ್ತಡ ಹಾಕ್ತಿದ್ದಾರೆ. ನಮ್ಮವರಿಗೆ ಇಷ್ಟು ಮಂತ್ರಿ ಕೊಡಿ, ನಮ್ಮವರಿಂದನೇ ನೀವು ಗೆದ್ದಿದ್ದು ಅಂತಿದ್ದಾರೆ. ಅಲ್ಲಿ ಸಮಾಧಾನ ಮಾಡೋಕೆ ಆರ್ಎಸ್ಎಸ್ ಮೇಲೆ ಗೂಬೆ ಕೂರಿಸೋಕೆ ಹೊರಟಿದ್ದಾರೆ. ಇದೊಂದು ತಂತ್ರ ಅಷ್ಟೇ. ಕಾಂಗ್ರೆಸ್ನವರ ಪ್ರಶ್ನೆಗೆ ಮೋಹನ್ ಭಾಗವತ್ ಅವರ ಉತ್ತರ ಸರಿ ಇದೆ ಎಂದು ಹರಿಹಾಯ್ದರು.
ಅಡ್ಡ ಮತದಾನದ ಬಗ್ಗೆ ಎಲ್ಲರಿಗೂ ಬಹಳ ನೋವಿದೆ. ಬಿಜೆಪಿಯಂತ ಪಕ್ಷಕ್ಕೆ ದ್ರೋಹ ಮಾಡುವುದನ್ನ ಯಾರು ಮಾಡಬಾರದು. ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆಗಿದೆ. ಬಿಜೆಪಿ ಹೈಕಮಾಂಡ್ ತೀವ್ರ ನಿಗಾ ಇಟ್ಟಿದೆ. ರಾಜ್ಯಾಧ್ಯಕ್ಷರು ಒಂದು ಸಮಿತಿ ರಚಿಸಿದ್ದಾರೆ. ಇಂದು ಅಥವಾ ನಾಳೆ ಸಮಿತಿಯ ರಿಪೋರ್ಟ್ ಬರುತ್ತೇ. ವರದಿ ಬಂದ ಮೇಲೆ ಅಡ್ಡ ಮತದಾನ ಮಾಡಿದವರ ಮೇಲೆ ಕ್ರಮ ಆಗಲೇಬೇಕು. ಕ್ರಮ ಆಗುತ್ತೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಕಾಂಗ್ರೆಸ್ ಅವರ ಶಾಸಕರನ್ನು ರೆಸಾರ್ಟ್ನಲ್ಲಿ ಎರಡು ದಿನ ಕೂಡಿ ಹಾಕಿತ್ತು. ಸಿಎಂ, ಸಚಿವರು, ಶಾಸಕರು ಎಲ್ಲರೂ ಇದ್ದರು.ಕಾಂಗ್ರೆಸ್ ಮತ ಅಡ್ಡ ಹೋಗಬಾರದು ಎಂದು ಬಂದೋಬಸ್ತ್ ಮಾಡುವ ಸರ್ಕಸ್ ನಡೆಯಿತು. ನಮ್ಮ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ನಮ್ಮನ್ನು ನಂಬಿದರು. 69 ಜನ ಶಾಸಕರು ಹಾಗೇ ಮಾಡಲ್ಲ ಎಂದು ನಂಬಿಕೆ ಇಟ್ಟಿದ್ದರು. ಆದರೆ, ಈಗ ವಿಶ್ವಾಸ ಘಾತಕತನ ಆಗಿದೆ. ಅಧ್ಯಕ್ಷರು ನೋವನ್ನು ಪಟ್ಟುಕೊಂಡು, ದೇವರ ಬಳಿ ಇತ್ಯರ್ಥ ಆಗಲಿ ಎಂದರು.
ನಾವೆಲ್ಲ ಸೇರಿದಂತೆ ಕೆಲ ಹಿರಿಯರು ಧರ್ಮಸ್ಥಳದಂತ ಶ್ರದ್ಧಾ ಕೇಂದ್ರ ರಾಜಕಾರಣಕ್ಕೆ ಬಳಸೋದು ಬೇಡ ಅಂದಿದ್ದೆವು. ಹೀಗಾಗಿ ಅವರು ಹಿಂದೆ ಸರಿದಿದ್ದಾರೆ. ನಮ್ಮ ವೋಟಿಂದ ನಾವು ಗೆದ್ದಿದ್ದೇವೆ. ಕೆಲವು ವೋಟ್ ಅಡ್ಡ ಮತದಾನ ಆಗಿದೆ. ಅನುಮಾನ ಇದ್ದಿದ್ದರೆ ಬಂದೋಬಸ್ತ್ ಮಾಡುತ್ತಿದ್ದರು. ನಮ್ಮ ನಂಬಿಕೆಗೆ ಕೆಲವರು ದ್ರೋಹ ಮಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ