ಬೆಂಗಳೂರು ದಾಂಧಲೆ: ಗಲಭೆಕೋರರಿಂದ ನಷ್ಟ ವಸೂಲಿಗೆ ಲಿಟಿ​ಗೇ​ಷನ್‌ ಕಮಿಷನರ್‌ ನೇಮಕ

By Kannadaprabha NewsFirst Published Aug 19, 2020, 8:00 AM IST
Highlights

ಎಐಜಿಪಿ ಜಗದೀಶ್‌ ನೇಮಿಸಿ ಸರ್ಕಾರದ ಆದೇಶ: ಇಂದಿನಿಂದಲೇ ಕಾರ್ಯಾರಂಭ| ಗಲಭೆಯಲ್ಲಿ ಹಾನಿಯಾಗಿರುವ ಆಸ್ತಿ-ಪಾಸ್ತಿ ಮೌಲ್ಯದ ಬಗ್ಗೆ ಮಾಹಿತಿ ಸಂಗ್ರಹ| ತರುವಾಯ ವರದಿ ಸರ್ಕಾರ ಸಲ್ಲಿಸಲಾಗುತ್ತದೆ|

ಬೆಂಗಳೂರು(ಆ.19): ನಗರದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆಯಿಂದಾಗಿ ಆಗಿರುವ ಆಸ್ತಿ-ಪಾಸ್ತಿ ನಷ್ಟವನ್ನು ಗಲಭೆಕೋರರಿಂದ ವಸೂಲಿ ಮಾಡುವ ಸಂಬಂಧ ರಾಜ್ಯ ಸರ್ಕಾರವು ಲಿಟಿ​ಗೇ​ಷನ್‌ ಕಮಿಷನರ್‌ ಆಗಿ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಸಾಮಾನ್ಯ) ಕೆ.ಜಿ.ಜಗದೀಶ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಲಿಟಿ​ಗೇ​ಷ​ನ್‌ ಕಮಿಷನರ್‌ ನೇಮಕ ಮಾಡುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಅದರಂತೆ ಮಂಗಳವಾರ ಹೈಕೋರ್ಟ್‌ಗೆ ಮನವಿ ಮಾಡಿ ಅನುಮತಿ ಪಡೆದುಕೊಳ್ಳಲಾಯಿತು. ಜಗದೀಶ್‌ ಅವರು ಬುಧವಾರದಿಂದ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಲಿದ್ದಾರೆ.

ಬೆಂಗ್ಳೂರು ಗಲಭೆ: ಸಿಸಿಬಿ ಡ್ರಿಲ್‌ಗೆ ಸತ್ಯ ಒಪ್ಪಿಕೊಂಡ ಜೆಡಿಎಸ್ ಮುಖಂಡ ವಾಜೀದ್ ಪಾಷಾ

ಗಲಭೆಯಲ್ಲಿ ಹಾನಿಯಾಗಿರುವ ಆಸ್ತಿ-ಪಾಸ್ತಿ ಮೌಲ್ಯದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ತರುವಾಯ ವರದಿಯನ್ನು ಸರ್ಕಾರ ಸಲ್ಲಿಸಲಾಗುತ್ತದೆ. ಸರ್ಕಾರವು ಗಲಭೆಕೋರರಿಂದ ವಸೂಲಿ ಮಾಡಿ ಸಂತ್ರಸ್ತರಿಗೆ ನೀಡಲಿದೆ. ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಗಲಭೆಕೋರರು ಬೆಂಕಿ ಹಚ್ಚಿ ಹಾನಿಯನ್ನುಂಟು ಮಾಡಿದ್ದರು. ಅಲ್ಲದೆ, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆಗೆ ಬೆಂಕಿ ಹಾಕಿದ್ದಾರೆ. ಹಲವು ವಾಹನಗಳಿಗೂ ಬೆಂಕಿ ಹಚ್ಚಿ ದಾಂಧಲೆ ಮಾಡಿದ್ದಾರೆ. ಈ ಎಲ್ಲದರ ನಷ್ಟದ ಬಗ್ಗೆ ಕ್ಲೇಮ್‌ ಕಮಿಷನರ್‌ ಮಾಹಿತಿ ಕ್ರೋಢೀಕರಿಸಲಿದ್ದಾರೆ.
 

click me!