Anti Conversion Act: ಮತಾಂತರ ನಿಷೇಧ ಕಾಯ್ದೆ ಹಿಂದಿನ ಶಕ್ತಿ ಮುನಿರಾಜಗೌಡ..!

By Kannadaprabha NewsFirst Published Sep 16, 2022, 9:48 AM IST
Highlights

ಕಳೆದ ಬೆಳಗಾವಿ ಅಧಿವೇಶನದಲ್ಲಿ ಖಾಸಗಿ ಕಾಯ್ದೆ ಮಂಡನೆಗೆ ಯತ್ನ, ಇದರಿಂದ ಅನಿವಾರ್ಯವಾಗಿ ತಾನೇ ವಿಧೇಯಕ ರಚಿಸಿದ ಸರ್ಕಾರ

ಬೆಂಗಳೂರು(ಸೆ.16):  ಮತಾಂತರ ನಿಷೇಧ ಎಂದೇ ಕರೆಯಲ್ಪಡುತ್ತಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಗುರುವಾರ ವಿಧಾನಮಂಡಲದ ಉಭಯ ಸದನಗಳಲ್ಲೂ ಅಂಗೀಕಾರಕೊಂಡಿದ್ದು, ಇದರ ಮೂಲ ಶ್ರೇಯಸ್ಸು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ತುಳಸಿ ಮುನಿರಾಜುಗೌಡ ಅವರಿಗೆ ಸಲ್ಲಬೇಕು. ಕಳೆದ ಬಾರಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನದವರೆಗೂ ಹಿಂದುತ್ವದ ಬಗ್ಗೆ ಉಗ್ರ ಭಾಷಣ ಮಾಡುತ್ತಿದ್ದ ಬಿಜೆಪಿ ನಾಯಕರು ಮತಾಂತರ ನಿಷೇಧ ಮಾಡುತ್ತೇವೆ ಎಂಬ ಹೇಳಿಕೆಗಳನ್ನು ನೀಡುವುದಕ್ಕೆ ಮಾತ್ರ ಸೀಮಿತವಾಗಿದ್ದರು. ಆದರೆ, ಬೆಳಗಾವಿ ಅಧಿವೇಶನದಲ್ಲಿ ತುಳಸಿ ಮುನಿರಾಜುಗೌಡ ಅವರು ಭಾಷಣದಾಚೆಗೆ ಹೆಜ್ಜೆ ಇರಿಸಿದರು.

ಮುನಿರಾಜುಗೌಡ ಅವರು ಮತಾಂತರ ನಿಷೇಧಿಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಖಾಸಗಿ ವಿಧೇಯಕ ಮಂಡಿಸಲು ಮುಂದಾದರು. ಇದಕ್ಕಾಗಿ ಸ್ಪೀಕರ್‌ಗೆ ಅವಕಾಶ ಕೋರಿದರು. ಅವರು ಅವಕಾಶ ಕೋರಿದ ವಿಷಯ ಮಾಧ್ಯಮಗಳಲ್ಲಿ ಸುದ್ದಿಯಾಗಿ ಭಾರಿ ಚರ್ಚೆಗೆ ನಾಂದಿ ಹಾಡಿತು. ಆಗ ಅನಿವಾರ್ಯವಾಗಿ ರಾಜ್ಯ ಸರ್ಕಾರ ತಾನೇ ಮುಂದಾಗಿ ವಿಧೇಯಕ ಮಂಡಿಸಲು ನಿರ್ಧರಿಸಿತು.

Conversion Politics: ಮತಾಂತರ ನಿಷೇಧಕ್ಕೆ ಸಹಿ ಹಾಕಿದ್ದು ನಿಜ: ಸಿದ್ದರಾಮಯ್ಯ

ಪರಿಣಾಮ, ಬೆಳಗಾವಿ ಅಧಿವೇಶನದಲ್ಲಿ ವಿಧೇಯಕದ ಕರಡು ಸಿದ್ಧಪಡಿಸಿ ವಿಧಾನಸಭೆಯಲ್ಲಿ ಮಂಡಿಸಿತು. ಸಂಖ್ಯಾಬಲದ ಆಧಾರದ ಮೇಲೆ ವಿಧಾನಸಭೆಯಲ್ಲಿ ಅಂಗೀಕಾರವನ್ನೂ ಪಡೆಯಿತು. ಆದರೆ, ವಿಧಾನಪರಿಷತ್ತಿನಲ್ಲಿ ಬಹುಮತದ ಕೊರತೆ ಇದ್ದುದರಿಂದ ವಿಧೇಯಕ ಅಂಗೀಕಾರವಾಗಲಿಲ್ಲ. ಇದೀಗ ಪರಿಷತ್ತಿನಲ್ಲಿ ಆಡಳಿತಾರೂಢ ಬಿಜೆಪಿ ಬಹುಮತ ಗಳಿಸಿರುವುದರಿಂದ ವಿಧೇಯಕ ಮಂಡಿಸಿ ಅಂಗೀಕಾರ ಪಡೆಯಲು ಸಾಧ್ಯವಾಯಿತು.

ಗುರುವಾರ ಪರಿಷತ್ತಿನ ಬಿರುಸಿನ ಚರ್ಚೆ ನಡೆಯಿತು. ಈ ಬಗ್ಗೆ ವಿಧೇಯಕಕ್ಕೆ ಪೂರಕವಾಗಿ ಹಲವು ಸಲಹೆಗಳನ್ನು ನೀಡಲು ತುಳಸಿ ಮುನಿರಾಜುಗೌಡ ಅವರು ಬುಧವಾರ ಇಡೀ ದಿನ ಸಿದ್ಧತೆ ನಡೆಸಿದ್ದರು. ಮಾತನಾಡಲು ಅವಕಾಶ ನೀಡುವುದಾಗಿ ಸರ್ಕಾರಿ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಭರವಸೆಯನ್ನೂ ನೀಡಿದ್ದರು. ಆದರೆ, ಚರ್ಚೆ ಕಾವೇರಿ ಕೊನೆಗೆ ಅಂಗೀಕಾರವೂ ಆಯಿತು. ಆದರೆ, ತುಳಸಿ ಮುನಿರಾಜುಗೌಡ ಅವರಿಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ.
 

click me!