ಡಿಕೆಶಿ ಕುಟುಂಬದ ವಿರುದ್ಧ ದಾಖಲಾಯ್ತು ದೂರು

By Kannadaprabha NewsFirst Published Oct 7, 2020, 7:49 AM IST
Highlights

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಹಾಗೂ ಕುಟುಂಬದ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. 

ಬೆಂಗಳೂರು (ಅ.07):  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಸೇರಿದ ಸ್ಥಳಗಳ ಮೇಲೆ ಅಕ್ರಮ ಗಸ್ತಿ ಗಳಿಕೆ ಆರೋಪದಡಿ ಸಿಬಿಐ ದಾಳಿ ನಡೆಸಿದ ಬೆನ್ನಲ್ಲೇ ಮತ್ತೊಂದು ಸಂಕಷ್ಟಎದುರಾಗಿದ್ದು, ಸಿಬಿಐಗೆ ಶಿವಕುಮಾರ್‌ ಮತ್ತವರ ಕುಟುಂಬದವರ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

ಕನಕಪುರ ತಾಲೂಕಿನ ನಿವಾಸಿ ರವಿಕುಮಾರ್‌ ಎಂಬುವವರು ಶಿವಕುಮಾರ್‌ ವಿರುದ್ಧ ಸಿಬಿಐಗೆ ದೂರು ನೀಡಿದ್ದು, ಶಿವಕುಮಾರ್‌ ಕುಟುಂಬದವರ ಅಕ್ರಮ ಹೂಡಿಕೆಗಳ ಮಾಹಿತಿ ನೀಡುವುದಾಗಿ ಸಿಬಿಐಗೆ ಹೇಳಿದ್ದಾರೆ.

ಶಿವಕುಮಾರ್‌ ಮತ್ತು ಸಹೋದರ ಡಿ.ಕೆ.ಸುರೇಶ್‌ ಅಕ್ರಮವಾಗಿ ಹಣ ಗಳಿಸಿ ಹಲವು ರಿಯಲ್‌ ಎಸ್ಟೇಟ್‌ ಕಂಪನಿ, ಶುಗರ್ಸ್‌ ಕಂಪನಿಯಲ್ಲಿ ಹೂಡಿಕೆ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಶಿವಕುಮಾರ್‌ ವಿರುದ್ಧ ಹಲವು ಕಾನೂನು ಹೋರಾಟಗಳನ್ನು ರವಿಕುಮಾರ್‌ ನಡೆಸಿಕೊಂಡು ಬರುತ್ತಿದ್ದಾರೆ.

ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಡಿ.ಕೆ.ಶಿವಕುಮಾರ್ ..

ಶೋಭಾ, ಪ್ರೆಸ್ಟೀಜ್‌ ಸೇರಿದಂತೆ ಹಲವು ಡೆವಲಪರ್ಸ್‌ ಸಂಸ್ಥೆಯಲ್ಲಿ ಹೂಡಿಕೆ ಮಾಡಲಾಗಿದೆ. ಅಲ್ಲಿ ಬೇನಾಮಿ ಷೇರುಗಳನ್ನು ಸಹ ಹೊಂದಿದ್ದಾರೆ. ಬೆಂಗಳೂರು ಪೂರ್ವದ ಬೆನ್ನಿಗಾನಹಳ್ಳಿಯಲ್ಲಿ ನಕಲಿ ದಾಖಲೆಗಳ ಮೂಲಕ ನೊಟೀಫೈ ಆಗಿದ್ದ 4.10 ಎಕರೆ ಜಮೀನನ್ನು ಡಿ-ನೊಟೀಫಿಕೇಶನ್‌ ಮಾಡಿಸಿ ಡೆವಲಪರ್ಸ್‌ಗೆ ಕೊಡಿಸಿದ್ದಾರೆ. ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹಾಗೆಯೇ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್‌ ಅವರ ಶುಗರ್‌ ಕಂಪನಿಯಲ್ಲಿ ಬೇನಾಮಿ ಷೇರು ಹೊಂದಿದ್ದಾರೆ. ರಾಮನಗರ, ಕನಕಪುರದಲ್ಲಿ ಹಲವು ವ್ಯಕ್ತಿಗಳ ಹೆಸರಲ್ಲಿ ಬೇನಾಮಿಯಾಗಿ ಕೋಟ್ಯಂತರ ರು.ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ . ಈ ಎಲ್ಲಾ ವಿಷಯಗಳಿಗೆ ಲಭ್ಯ ಇರುವ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಲಾಗುವುದು. ಅಕ್ರಮ ವ್ಯವಹಾರಗಳ ಕುರಿತು ಅಗತ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ದೂರುದಾರರು ಮನವಿ ಮಾಡಿದ್ದಾರೆ.

click me!