ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿದ್ದ ಆರೋಪದ ಮೇರೆಗೆ ರಾಜ್ಯ ಅಪರಾಧ ತನಿಖಾ ದಳದ ಬಲೆಗೆ ಬಿದ್ದ ಮತ್ತೆ ಮೂವರು ಅಭ್ಯರ್ಥಿಗಳು
ಬೆಂಗಳೂರು(ಅ.14): 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಅಕ್ರಮ ನೇಮಕಾತಿ ಹಗರಣ ಸಂಬಂಧ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿದ್ದ ಆರೋಪದ ಮೇರೆಗೆ ಮತ್ತೆ ಮೂವರು ಅಭ್ಯರ್ಥಿಗಳು ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಬಲೆಗೆ ಗುರುವಾರ ಬಿದ್ದಿದ್ದಾರೆ.
ವಿಜಯಪುರ ಜಿಲ್ಲೆಯ ಶ್ರೀಶೈಲ ಬಿರಾದಾರ್, ಕಲಬುರಗಿ ಜಿಲ್ಲೆಯ ಶ್ರೀಮಂತ ಸಾದಾಪುರ ಹಾಗೂ ಲಕ್ಕಪ್ಪ ಬಂಧಿತರಾಗಿದ್ದು, ಕಲುಬರಗಿ ಜಿಲ್ಲೆ ಆಳಂದ ತಾಲೂಕಿನ ಕಾಂಗ್ರೆಸ್ ಮುಖಂಡ ರುದ್ರಗೌಡ ಪಾಟೀಲ್ (ಆರ್.ಡಿ.ಪಾಟೀಲ್) ತಂಡದ ನೆರವಿನಿಂದ ಪಿಎಸ್ಐ ಪರೀಕ್ಷೆಯನ್ನು ಬ್ಲೂಟೂತ್ ಬಳಸಿ ಬರೆದು ಈ ಮೂವರು ಆಯ್ಕೆಯಾಗಿದ್ದರು. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಆರ್.ಡಿ. ಪಾಟೀಲ್ ತಂಡದ ಸಂಪರ್ಕ ಜಾಲವನ್ನು ಶೋಧಿಸಿದಾಗ ಈ ಮೂವರು ಆರೋಪಿಗಳ ಕುರಿತು ಮಾಹಿತಿ ಪತ್ತೆಯಾಯಿತು. ಅನುಮಾನದ ಮೇರೆಗೆ ಶಂಕಿತ ಅಭ್ಯರ್ಥಿಗಳನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ: ಮತ್ತಷ್ಟು ಆರೋಪಿಗಳ ಬಂಧನ ಸಾಧ್ಯತೆ..?
ತುಮಕೂರಿನಲ್ಲಿ ಶ್ರೀಶೈಲ ಬಿರಾದಾರ್, ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಲಕ್ಕಪ್ಪ ಹಾಗೂ ಧಾರವಾಡದ ಪರೀಕ್ಷಾ ಕೇಂದ್ರದಲ್ಲಿ ಶ್ರೀಮಂತ ಸಾದಾಪುರದ ಪರೀಕ್ಷೆ ಬರೆದಿದ್ದು, ಈ ಮೂವರ ಮೇಲೆ ಸ್ಥಳೀಯ ಠಾಣೆಗಳಲ್ಲಿ ಪ್ರತ್ಯೇಕವಾಗಿ ಎಫ್ಐಆರ್ ದಾಖಲಿಸಲಾಗಿದೆ. ಅಕ್ರಮವಾಗಿ ಬ್ಲೂಟ್ಟೂತ್ ಬಳಸಿ ಪರೀಕ್ಷೆ ಬರೆದು ರಾರಯಂಕ್ ಪಡೆದು ಆರೋಪಿಗಳು ಆಯ್ಕೆಯಾಗಿದ್ದರು. ಇದಕ್ಕಾಗಿ ಇವರಿಂದ ತಲಾ 40 ಲಕ್ಷ ರು. ಹಣವನ್ನು ಆರ್.ಡಿ.ಪಾಟೀಲ್ ತಂಡ ಡೀಲ್ ಕುದಿರಿಸಿತ್ತು ಎಂದು ಮೂಲಗಳು ಹೇಳಿವೆ.