
ಬೆಂಗಳೂರು (ಆ.11): ರಾಜ್ಯದ ವಿವಿಧೆಡೆ ಕಳೆದ ಕೆಲ ದಿನಗಳಿಂದ ಆರ್ಭಟಿಸುಟ್ಟಿದ್ದ ಮಳೆ ಪ್ರಮಾಣ ಬುಧವಾರ ಇಳಿಕೆಯಾಗಿದ್ದರೂ ಅಲ್ಲಲ್ಲಿ ಭೂಕುಸಿತ, ರಸ್ತೆ ಕುಸಿತ, ಮನೆ ಕುಸಿತ ಮೊದಲಾದ ಅನಾಹುತಗಳು ಮುಂದುವರಿದಿವೆ. ಭಾರಿ ಮಳೆಗೆ ಮನೆ ಕುಸಿದು ಇಬ್ಬರು ಮಹಿಳೆಯರೂ ಸೇರಿ ನಾಲ್ವರು ಮೃತಪಟ್ಟ ಪ್ರತ್ಯೇಕ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಕಳೆದ 10 ದಿನಗಳಲ್ಲಿ ಮಳೆ ಸಂಬಂಧಿ ಕಾರಣಗಳಿಗಾಗಿ ಮೃತಪಟ್ಟವರ ಸಂಖ್ಯೆ 40ಕ್ಕೇರಿದೆ. ಕಳೆದೊಂದು ವಾರದಿಂದ ವರುಣರಾಯ ಆರ್ಭಟಿಸಿದ್ದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ರಾಮನಗರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಬುಧವಾರ ಮಳೆ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆ.ತಲಗೂರು ಗ್ರಾಮದ ಮನೆಯೊಂದರ ಮೇಲೆ ರಾತ್ರಿ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ಸರಿತಾ (37)ಮತ್ತು ಚಂದ್ರಮ್ಮ(55) ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯದ್ದಲದೊಡ್ಡಿಯಲ್ಲಿ ಮನೆ ಗೋಡೆ ಕುಸಿದು ಲಾಲಪ್ಪ ದರಗಪ್ಪ(6) ಎಂಬ ಬಾಲಕ ಮೃತಪಟ್ಟಿದ್ದಾನೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕುನ್ನೂರದಲ್ಲಿ ನಿರಂತರ ಮಳೆಗೆ ಫ್ಲ್ಯಾಟ್ನ ಗೋಡೆ ತೇವಗೊಂಡು ಕುಸಿದು ಮುಸ್ತಾಕ್ ಷರೀಫಸಾಬ್ ಯರಗುಪ್ಪಿ (27)ಮೃತಪಟ್ಟಿದ್ದಾರೆ.
Belagavi: ಮಳೆಯಿಂದ 255 ಕೋಟಿ ಹಾನಿ: ಮಳೆಯಿಂದ ಧರೆಗುರುಳುತ್ತಿರುವ ಮನೆಗಳು
ಕೊಡಗಲ್ಲಿ ಬೆಟ್ಟ ಕುಸಿತ: ಕೊಡಗು ಜಿಲ್ಲೆಯಲ್ಲಿ ಬುಧವಾರ ಬಿಟ್ಟು ಬಿಟ್ಟು ಮಳೆ ಸುರಿದಿದೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹರಪಳ್ಳಿಯ ಬೆಟ್ಟದಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು ಬೆಟ್ಟದ ಒಂದು ಭಾಗ ಕೊಚ್ಚಿ ಹೋಗಿದೆ. ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನು ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕರ್ತೋಜಿ ಬಳಿ ಹೆದ್ದಾರಿ ಭೂಕುಸಿತ ಆತಂಕ ಇರುವ ಹಿನ್ನೆಲೆಯಲ್ಲಿ ಬುಧವಾರ ಮತ್ತು ಹಾಗೂ ರಾತ್ರಿ 8.30 ರಿಂದ ಬೆಳಗ್ಗೆ 6.30 ಗಂಟೆಯವರೆಗೆ ಮಡಿಕೇರಿ - ಸಂಪಾಜೆ ಹೆದ್ದಾರಿ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Kolar: ಪ್ರವಾಸಿಗರ ನ್ಯೂ ಹಾಟ್ ಪಿಕ್ನಿಕ್ ಸ್ಪಾಟ್ ಆಗಿ ಭೋರ್ಗರೆಯುತ್ತಿದೆ ಯರಗೋಳ್ ಡ್ಯಾಂ
ರಾಜ್ಯದಲ್ಲಿ ಒಂದೇ ವಾರದಲ್ಲಿ 4400ಕ್ಕೂ ಅಧಿಕ ಮನೆ ಕುಸಿತ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ರಾಜ್ಯದಲ್ಲಿ ಒಟ್ಟು 4474ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿವೆ. ಬುಧವಾರದಂದು ಮಳೆ ಸಂಬಂಧಿ ಕಾರಣಗಳಿಗಾಗಿ ಐವರು ಮೃತಪಟ್ಟಿದ್ದು, ಅದರಲ್ಲಿ ಮನೆ ಗೋಡೆ ಕುಸಿದು ಮೂವರು ಮೃತಪಟ್ಟಿದ್ದಾರೆ. ಬುಧವಾರದಂದು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ಅತಿ ಹೆಚ್ಚು ಮನೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ತಾಲೂಕು ಒಂದರಲ್ಲೇ ಒಂದೇ ದಿನ 15 ಮನೆಗಳು ಕುಸಿದಿವೆ. ಕಲಬುರಗಿಯಲ್ಲಿ 1050, ಚಾಮರಾಜನಗರ 61, ದಾವಣಗೆರೆ 207, ಚಿಕ್ಕಬಳ್ಳಾಪುರ 181, ಮೈಸೂರು 600, ವಿಜಯನಗರ 60, ಬಳ್ಳಾರಿ 84, ಉತ್ತರ ಕನ್ನಡ 20, ಬೆಳಗಾವಿ 63, ವಿಜಯಪುರ ಜಿಲ್ಲೆ 464, ಬಾಗಲಕೋಟೆ ಜಿಲ್ಲೆ 340, ದಕ್ಷಿಣ ಕನ್ನಡ 206, ಉಡುಪಿ 9 , ಕೊಡಗು 269, ಚಿಕ್ಕಮಗಳೂರು 148, ಶಿವಮೊಗ್ಗ 106, ಹಾಸನ 200, ರಾಮನಗರ 180, ಚಿತ್ರದುರ್ಗ 63, ಮಂಡ್ಯ 154, ಕೋಲಾರದಲ್ಲಿ 9 ಮನೆಗಳಿಗೆ ಹಾನಿಯಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ