ನಡು ರಸ್ತೆಯಲ್ಲಿ ರಿಷಬ್‌ಗೆ ಶಾಕ್ ಕೊಟ್ಟ ಪೊಲೀಸರು: ಆದರೆ ಶೆಟ್ಟರ ಸರಳತೆಗೆ ಫಿದಾ ಆದ ಸಿಬ್ಬಂದಿ!

By Govindaraj SFirst Published Nov 30, 2023, 7:03 PM IST
Highlights

ಕಾರವಾರ-ಗೋವಾ ಗಡಿಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಗಡಿ ತಪಾಸಣಾ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸಿ ರಿಷಬ್ ಶೆಟ್ಟಿ ವಾಪಸ್ ಆಗುತ್ತಿದ್ದರು. 

ಕಾರವಾರ (ನ.29): ಕಾರವಾರ-ಗೋವಾ ಗಡಿಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಗಡಿ ತಪಾಸಣಾ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸಿ ರಿಷಬ್ ಶೆಟ್ಟಿ ವಾಪಸ್ ಆಗುತ್ತಿದ್ದರು. ಗೋವಾದಿಂದ ಆಗಮಿಸುತ್ತಿದ್ದ ವೇಳೆ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣಾ ಅಧಿಕಾರಿಗಳು ಅವರ ಕಾರನ್ನು ತಡೆದಿದ್ದಾರೆ. ಕಾರನ್ನು ತಡೆಯುತ್ತಿದ್ದಂತೆ ಕಾಂತಾರ ಸ್ಟಾರ್​ ಒಂದು ಸಲ ಅಚ್ಚರಿಗೆ ಒಳಗಾಗಿದ್ದಾರೆ. 

ಗೋವಾ ಮದ್ಯ ಸೇರಿದಂತೆ ಅಕ್ರಮ ಸಾಗಾಟಗಳ ತಡೆಗೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಜನ ಸಾಮಾನ್ಯರಂತೆ ನಟನ ಕಾರನ್ನೂ ತಪಾಸಣೆ ಮಾಡಿ ಸಿಬ್ಬಂದಿ ಕರ್ತವ್ಯ ಮೆರೆದಿದ್ದಾರೆ. ಅಬಕಾರಿ, ಅರಣ್ಯ ಇಲಾಖೆ ಸಿಬ್ಬಂದಿಯಿಂದ ವಾಹನ ತಪಾಸಣೆ ಮಾಡಲಾಗಿದೆ. ತಪಾಸಣೆ ಬಳಿಕ ನಟ ರಿಷಬ್‌ ಅವರೊಂದಿಗೆ ಸಿಬ್ಬಂದಿ ಫೋಟೋ ತೆಗೆಸಿಕೊಂಡಿದ್ದಾರೆ. ಸಿಬ್ಬಂದಿಯೊಂದಿಗೆ ಆತ್ಮೀಯವಾಗಿ ನಡೆದುಕೊಂಡ ಕಾಂತಾರ ನಟನ ಸರಳತೆಗೆ ಸಿಬ್ಬಂದಿ ಫಿದಾ ಆಗಿದ್ದಾರೆ.

ಯೂಟ್ಯೂಬ್‌ನಲ್ಲಿ ಟ್ರೆಂಡ್ ಸೆಟ್ ಮಾಡಿದ ಕಾಂತಾರ ಪ್ರೀಕ್ವೆಲ್ ಟೀಸರ್: 24 ಗಂಟೆಯಲ್ಲಿ ಎಷ್ಟು ವಿವ್ಸ್?

ಕಾಂತಾರಕ್ಕೆ ಅಂತರರಾಷ್ಟ್ರೀಯ ವಿಶೇಷ ಪ್ರಶಸ್ತಿ: ಗೋವಾದಲ್ಲಿ  ನವೆಂಬರ್​ 28ರಂದು ನಡೆದ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ  ನಟ ರಿಷಬ್​ ಶೆಟ್ಟಿ ಅವರು, ತೀರ್ಪುಗಾರರ ವಿಶೇಷ ಪ್ರಶಸ್ತಿ (ಸಿಲ್ವರ್ ಪೀಕಾಕ್‌ ಸ್ಪೆಷಲ್ ಜ್ಯೂರಿ ಅವಾರ್ಡ್) ಪಡೆದುಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ‘ಕಾಂತಾರ’ ಚಿತ್ರಕ್ಕೆ ಈ ಪ್ರಶಸ್ತಿ ದೊರೆತಿದ್ದು, ಇದನ್ನು ಅವರು ಸ್ವೀಕರಿಸಿದರು. ಈ ಬಾರಿ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 15 ಚಿತ್ರಗಳು ಸ್ಪರ್ಧಿಸಿದ್ದವರು. ಅದರಲ್ಲಿ ಭಾರತದ ಮೂರು ಸಿನಿಮಾಗಳ ಪೈಕಿ ಕಾಂತಾರ ಕೂಡ ಒಂದಾಗಿತ್ತು. 

ಸಿಲ್ವರ್ ಪೀಕಾಕ್‌ ಸ್ಪೆಷಲ್ ಜ್ಯೂರಿ ಅವಾರ್ಡ್ ವಿಭಾಗದಲ್ಲಿ 'ಕಾಂತಾರ' ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿಯು ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ನಟ ರಿಷಬ್​ ಶೆಟ್ಟಿ ಅವರು, ತಮ್ಮ ನೆಚ್ಚಿನ ನಟ, ನಿರ್ದೇಶಕ ಶಂಕರ್ ನಾಗ್ ಅವರಿಗೆ ಅರ್ಪಿಸಿದ್ದಾರೆ. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ರಿಷಬ್​ ಶೆಟ್ಟಿ, ‘54ನೇ ಇಂಟರ್ ​​ನ್ಯಾಷನಲ್ ಫಿಲ್ಮ್​ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಸ್ಪೆಷಲ್ ಜ್ಯೂರಿ ಅವಾರ್ಡ್ ದೊರಕಿದೆ. ಇದು ಎಂದೂ ಮರೆಯಲಾಗದ ಕ್ಷಣಗಳಲ್ಲಿ ಉಳಿದುಕೊಳ್ಳುತ್ತದೆ. ನನ್ನ ಸ್ಫೂರ್ತಿಯಾದ ಶಂಕರ್ ನಾಗ್ ಅವರಿಗೆ 1979ರಲ್ಲಿ ‘ಒಂದಾನೊಂದು ಕಾಲದಲ್ಲಿ’ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಇದೇ ಚಿತ್ರೋತ್ಸವದಲ್ಲಿ ದೊರಕಿತ್ತು. 

ಆನೆಗುಡ್ಡೆ ನನಗೆ ಅದೃಷ್ಟದ ಬಾಗಿಲು, ಕಾಂತಾರದ ಮುನ್ನುಡಿ ಹೇಳಲು ಹೊರಟಿದ್ದೇನೆ: ರಿಷಬ್‌ ಶೆಟ್ಟಿ

ಅವರು ತೋರಿಸಿರುವ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಿರುವ ನನಗೆ ಇಂದು ಈ ಅವಾರ್ಡ್ ದೊರೆತದ್ದು ಅತ್ಯಂತ ಸಂತಸ ನೀಡಿದೆ’ ಎಂದು ಬರೆದಿದ್ದಾರೆ. ‘ಕಾಂತಾರವನ್ನು ನೋಡಿ ಕನ್ನಡಿಗರು ಬೆಂಬಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದೀರಿ. ಇದೀಗ ಕಾಂತಾರ ಒಂದನೇ ಅಧ್ಯಾಯಕ್ಕೆ ಸಿಗುತ್ತಿರುವ ಅಭೂತಪೂರ್ವ ಪ್ರಶಂಸೆ ಮತ್ತು ಬೆಂಬಲ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮತ್ತೊಮ್ಮೆ ಉತ್ತಮವಾದ ಚಿತ್ರವನ್ನು ನೀಡಲು ಶ್ರಮಿಸುತ್ತೇನೆ. ಈ ನನ್ನ ಎಲ್ಲ ಪ್ರಯತ್ನ ಹಾಗೂ ಯಶಸ್ಸಿಗೆ ಕಾರಣರಾದ ಪ್ರೀತಿಯ ಕನ್ನಡಿಗರಿಗೆ ನಾನು ಸದಾ ಆಭಾರಿ. ಈ ಪ್ರಶಸ್ತಿಯನ್ನು ನಾನು ಶಂಕರ್ ನಾಗ್ ಅವರಿಗೆ ಅರ್ಪಿಸುತ್ತಿದ್ದೇನೆ’ ಎಂದು ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದಿದ್ದಾರೆ.

click me!