ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ರಿಷಬ್‌ ಶೆಟ್ಟಿ ರಾಯಭಾರಿ

By Kannadaprabha NewsFirst Published Jan 5, 2023, 4:22 AM IST
Highlights

ಸಾಮಾಜಿಕ ಜವಾಬ್ದಾರಿಯಲ್ಲಿ ಮುಂಚೂಣಿ ಮಾಧ್ಯಮ ಸಂಸ್ಥೆಗಳಾದ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಮತ್ತು ‘ಕನ್ನಡಪ್ರಭ’ ಸಹಯೋಗದಲ್ಲಿ ಹಮ್ಮಿಕೊಂಡಿರುವ ನಾಲ್ಕನೇ ವೃತ್ತಿಯ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ಕ್ಕೆ ಬುಧವಾರ ಅಭೂತಪೂರ್ವ ಚಾಲನೆ ದೊರೆಯಿತು.

ಬೆಂಗಳೂರು (ಜ.05): ಸಾಮಾಜಿಕ ಜವಾಬ್ದಾರಿಯಲ್ಲಿ ಮುಂಚೂಣಿ ಮಾಧ್ಯಮ ಸಂಸ್ಥೆಗಳಾದ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಮತ್ತು ‘ಕನ್ನಡಪ್ರಭ’ ಸಹಯೋಗದಲ್ಲಿ ಹಮ್ಮಿಕೊಂಡಿರುವ ನಾಲ್ಕನೇ ವೃತ್ತಿಯ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ಕ್ಕೆ ಬುಧವಾರ ಅಭೂತಪೂರ್ವ ಚಾಲನೆ ದೊರೆಯಿತು.

ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಹಾಗೂ ‘ಕಾಂತಾರ’ ಖ್ಯಾತಿಯ ನಟ, ನಿರ್ದೇಶಕ ರಿಷಬ್‌ ಶೆಟ್ಟಿಅವರು ಅಭಿಯಾನದ ಲೋಗೋ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ರಿಷಬ್‌ ಶೆಟ್ಟಿ ಅವರನ್ನು ಈ ವಿಶೇಷ ಅಭಿಯಾನದ ರಾಯಭಾರಿಯಾಗಿ ಅಧಿಕೃತವಾಗಿ ಘೋಷಿಸಲಾಯಿತು. ಈ ವೇಳೆ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಯಾನಕ್ಕೆ ಚಾಲನೆ ನೀಡಿದ ಗಣ್ಯರು ಹಾಗೂ ಅಭಿಯಾನಕ್ಕೆ ತಮ್ಮೊಂದಿಗೆ ಕೈಜೋಡಿಸಿರುವ ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮಹಾಲಬಲೇಶ್ವರ ಭಟ್‌ ಸೇರಿದಂತೆ ಎಲ್ಲ ಪ್ರಾಯೋಜಕ ಸಂಸ್ಥೆಗಳ ಗಣ್ಯರನ್ನು ಸ್ವಾಗತಿಸಿ ಅಭಿನಂದನೆ ತಿಳಿಸಿದರು.

'ಕಿರಿಕ್ ಪಾರ್ಟಿ' ಸಂಭ್ರಮದಲ್ಲಿ ರಶ್ಮಿಕಾ ಹೆಸರು ಕೈ ಬಿಟ್ಟ ರಿಷಬ್; ಮುಂದುವರೆದ ಇಬ್ಬರ ಕೋಲ್ಡ್ ವಾರ್

4ನೇ ಆವೃತ್ತಿಗೆ ಚಾಲನೆ: ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಗಳ ಅಡಿಯಲ್ಲಿ ಸುವರ್ಣನ್ಯೂಸ್‌ ಮತ್ತು ಕನ್ನಡಪ್ರಭ 2017ರಿಂದ ವನ್ಯಜೀವಿ ಸಂರಕ್ಷಣಾ ಅಭಿಯಾನ ನಡೆಸಿಕೊಂಡು ಬರುತ್ತಿವೆ. 2017, 2018 ಮತ್ತು 2019ರಲ್ಲಿ ಯಶಸ್ವಿಯಾಗಿ ಮೂರು ಆವೃತ್ತಿಯಲ್ಲಿ ನಾಡಿನಾದ್ಯಂತ ಅಭಿಯಾನ ಹಮ್ಮಿಕೊಂಡು ವನ್ಯಜೀವಿಗಳ ಬಗ್ಗೆ ಬೃಹತ್‌ ಜನಜಾಗೃತಿ ಮೂಡಿಸುವ ಕೆಲಸ ಮಾಡಿವೆ. ಈ ಹಿಂದೆ ಅಭಿಯಾನದ ರಾಯಭಾರಿಗಳಾಗಿ ಖ್ಯಾತ ನಟ ಪ್ರಕಾಶ್‌ ರೈ, ನಟಿ ಮಯೂರಿ, ನಟ ಶ್ರೀಮುರುಳಿ, ನಟಿ ಶೃತಿನಾಯ್ಡು ರಾಯಭಾರಿಗಳಾಗಿ ಅಭಿಯಾನದ ಯಶಸ್ಸಿಗೆ ಕೈಜೋಡಿಸಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಈ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಹಕಾರ ನೀಡಿದ್ದಾರೆ. ಕೋವಿಡ್‌ ಕಾರಣದಿಂದ ಕೆಲ ಕಾಲ ಸ್ಥಗಿತಗೊಂಡಿದ್ದ ಅಭಿಯಾನ ಈಗ ಪುನಾರಂಭವಾಗಿದೆ.

ರಿಷಬ್‌ ಶೆಟ್ಟಿ ರಾಯಭಾರಿ: ಇದೀಗ ಅಭಿಯಾನದ ನಾಲ್ಕನೇ ಆವೃತ್ತಿಗೆ ಯಶಸ್ವಿ ಚಾಲನೆ ದೊರಕಿದೆ. ‘ಕಾಂತಾರ’ ಸೇರಿದಂತೆ ತಮ್ಮ ಚಿತ್ರಗಳಲ್ಲಿ ಹೆಚ್ಚಾಗಿ ಅರಣ್ಯ, ವನ್ಯಜೀವಿ ಸಂರಕ್ಷಣೆಯ ಬಗ್ಗೆ, ಇವುಗಳ ಸಂರಕ್ಷಣೆಗೆ ಇರುವ ದೈವದ ಸಂಸ್ಕೃತಿಗೆ ಜೀವ ತುಂಬಿದ ನಟ, ನಿರ್ದೇಶಕ ರಿಷಬ್‌ ಶೆಟ್ಟಿಈ ಬಾರಿಯ ಅಭಿಯಾನದ ರಾಯಭಾರಿಯಾಗಿರುವುದು ಇನ್ನಷ್ಟುಪರಿಣಾಮಕಾರಿಯಾಗಿ ಜನ ಜಾಗೃತಿ ಮೂಡಿಸಲು ನೆರವಾಗಲಿದೆ. ನಾಡಿನ ಎಲ್ಲ ಮೂಲೆಗಳ ಹುಲಿ ಅಭಯಾರಣ್ಯ, ವನ್ಯಜೀವಿ ಧಾಮಗಳ ಸುತ್ತಮುತ್ತಲಿನ ಗ್ರಾಮಗಳುದ್ದಕ್ಕೂ ಅಭಿಯಾನ ನಡೆಸಿ ಅರಣ್ಯ, ವನ್ಯಜೀವಿಗಳು ಉಳಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ ಎಂಬ ಸತ್ಯವನ್ನು ಸಾರುವ ಮೂಲಕ ಅವುಗಳ ಸಂರಕ್ಷಣೆಗೆ ಜನರು ಮುಂದಾಗುವಂತೆ ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದೆ.

ಕಣ್ಣು ತೆರೆಸಿದ ಅಭಿಯಾನ: ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಪ್ರಾಣದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಈ ಹಿಂದಿನ ಅಭಿಯಾನದಲ್ಲಿ ಪೊಲೀಸರಿಗೆ ನೀಡುವಂತೆ ಉತ್ತಮ ಕಾರ್ಯ ನಿರ್ವಹಿಸಿದ ಅರಣ್ಯಾಧಿಕಾರಿಗಳಿಗೂ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡುವ ಪ್ರಕ್ರಿಯೆ ಆರಂಭಕ್ಕೆ ಈ ಅಭಿಯಾನ ಕಾರಣವಾಗಿದ್ದನ್ನು ಸ್ಮರಿಸಬಹುದು.

Siddheshwara Swamiji ಲಿಂಗೈಕ್ಯ; ರಿಷಬ್ ಶೆಟ್ಟಿ, ಧನಂಜಯ್, ರಮ್ಯಾ ಸೇರಿ ಸಿನಿ ಗಣ್ಯರ ಕಂಬನಿ

ಕಾರ್ಯಕ್ರಮದಲ್ಲಿ ಅಭಿಯಾಣದ ಪ್ರಾಯೋಜಕರಾದ ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಭಟ್‌, ಅಟ್ರಿಮೆಡ್‌ ಫ್ಲಾಟ್‌ ಸೈನ್ಸ್‌ನ ಸಂಸ್ಥಾಪಕ ಡಾ.ರಿಷಿಕೇಶ್‌ ದಾಮ್ಲೆ, ಇಂಡಸ್‌ 555 ಡಿ ಟಿಎಂಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎಸ್‌.ಶ್ರೀಕಾಂತ್‌, ವಾಸವಿ ಹೆಲ್ತ್‌ ಕೇರ್‌ ಪ್ರಾಡಕ್ಟ್$್ಸನ ನಿರ್ದೇಶಕ ಪ್ರದೀಪ್‌ ಶೆಟ್ಟಿ, ಮಿಡ್‌ ಬ್ಯಾನರ್‌ ಆಗ್ರ್ಯಾನಿಕ್ಸ್‌ ಪ್ರೈ.ಲಿ.ನ ಹಿರಿಯ ಉಪಾಧ್ಯಕ್ಷ ವಿ.ಎಸ್‌.ಶ್ರೀನಿವಾಸ್‌, ಬಯೋಸ್‌ ಫುಡ್‌ ಪ್ರಾಡಕ್ಟ್ಸ್‌ನ ನಿರ್ದೇಶಕರಾದ ಶ್ರೀಕಾಂತ್‌ರಾವ್‌ ಮತ್ತು ನಾಗರಾಜ್‌ ರಾವ್‌, ಮಲ್ಲೇಶ್ವರಂನ ನ್ಯೂ ಸುದರ್ಶನ್‌ ಸಿಲ್ಕ್ಸ್‌ನ ನಿರ್ದೇಶಕ ಜೆ.ಶ್ರೀನಿವಾಸ್‌, ಇನೋವೇಟಿವ್‌ ಅಡ್ವಾನ್ಸ್ಡ್ ಮೀಡಿಯಾ ಮ್ಯಾನೇಜ್ಮೆಂಟ್‌ ಪ್ರೈ.ಲಿ.ನ ಎಂಡಿ ಮಧುಸೂಧನ್‌, ವಿ ಟು ಸಾಫ್ಟ್‌ನ ನಿರ್ದೇಶಕ ಶ್ರೀನಿವಾಸ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ಉಪಸ್ಥಿತರಿದ್ದರು.

click me!