
ವಿಧಾನಸಭೆ (ಡಿ.06): ‘ರಾಜ್ಯದಲ್ಲಿ ಪ್ರವಾಸೋದ್ಯಮ ನೀತಿ ಅಡಿ ಖಾಸಗಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ ಪಿಪಿಪಿ ಮಾದರಿಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಸೇರಿ ರಾಜ್ಯಾದ್ಯಂತ ಸಾಹಸಕ್ರೀಡೆ ಸೇರಿ ಹಲವು ಪ್ರವಾಸೋದ್ಯಮ ಉತ್ತೇಜನ ಚಟುವಟಿಕೆ ಪ್ರಾರಂಭಿಸಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಉಮಾನಾಥ್ ಕೋಟ್ಯಾನ್ ಪ್ರಶ್ನೆಗೆ ಉತ್ತರಿಸಿದ ಅವರು, ಕರಾವಳಿ ಪ್ರದೇಶದಲ್ಲಿ ಪ್ರವಾಸಿ ತಾಣಗಳನ್ನು ಹೊಂದಿರುವ ಮೂಡಬಿದರೆ, ಮೂಲ್ಕಿ ತಾಲೂಕು ಪ್ರದೇಶ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಇಲಾಖೆ ಕೈಗೊಂಡ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ವಿವರಣೆ ನೀಡಿ ಮಾತನಾಡಿದ ಅವರು, ವಿದೇಶಗಳಲ್ಲಿ ಒಂದೊಂದು ಪ್ರವಾಸಿ ತಾಣ ನೋಡಲು ನೂರಾರು ಕಿ.ಮೀ. ಪ್ರವಾಸ ಮಾಡುತ್ತಾರೆ. ಅವುಗಳನ್ನು ಅವರು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರುತ್ತಾರೆ. ನಮ್ಮ ರಾಜ್ಯದಲ್ಲಿ 25,000 ಪ್ರವಾಸ ಯೋಗ್ಯ ತಾಣಗಳನ್ನು ಗುರುತಿಸಿದ್ದೇವೆ.
ಪ್ರವಾಸೋದ್ಯಮ ನೀತಿ ಅಡಿ ಸಾಹಸ ಪ್ರವಾಸೋದ್ಯಮ, ಕೃಷಿಪ್ರವಾಸೋದ್ಯಮ ಸೇರಿ 26 ಕ್ಷೇತ್ರಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಉದಾಹರಣೆಗೆ ಯಲ್ಲಮ್ಮ ಗುಡ್ಡಕ್ಕೆ ಪ್ರತಿವರ್ಷ 1.25 ಕೋಟಿ ಜನರು ಬರುತ್ತಾರೆ. ಇಂತಹ ಕಡೆ ಮನೋರಂಜನಾ ಪಾರ್ಕ್, ಕ್ಯಾರಾವಾನ್ ಯೋಜನೆ, ಪಾರಂಪರಿಕ ಹೋಟೆಲ್ ಇಂತಹ ಪ್ರವಾಸೋದ್ಯಮ ಯೋಜನೆಗಳನ್ನು ಮಾಡಬಹುದು. ಇಂತಹ ಯೋಜನೆಗಳಿಗೆ ಸರ್ಕಾರ ಸಬ್ಸಿಡಿ, ಸಹಾಯಧನಗಳನ್ನು ನೀಡಲು ಅವಕಾಶವಿದೆ. ಇದರಡಿ ಕರಾವಳಿಯಲ್ಲಿ ಅದ್ಭುತ ಸಾಹಸ ಕ್ರೀಡೆಗಳನ್ನು ಮಾಡಲು ಸಹ ಯೋಜಿಸಿದ್ದೇವೆ ಎಂದರು.
ಮುಸ್ಲಿಮರೂ ಸೇರಿ ಎಲ್ಲರಿಗೂ ರಕ್ಷಣೆ ಕೊಡ್ತೇವೆ ಅನ್ನೋದು ತಪ್ಪಾ: ಸಿಎಂ ಸಿದ್ದರಾಮಯ್ಯ
ಇದಕ್ಕೂ ಮೊದಲು ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿರ್ಮಾಣಗಳನ್ನು ಮಾಡಲು ಸಿಆರ್ಜಢ್ (ಕೋಸ್ಟಲ್ ರೆಗ್ಯುಲೇಷನ್ ಜೋನ್) ನಿಯಮಾವಳಿಗಳು ಅಡ್ಡಿಯಾಗುತ್ತಿವೆ. ಎಲ್ಲಾ ಪ್ರವಾಸಿಗಳು ಮಂಗಳೂರಿಗೆ ವಿಮಾನದ ಮೂಲಕ ಬಂದು ಕೇರಳಕ್ಕೆ ಪ್ರವಾಸ ಹೋಗುತ್ತಾರೆ. ಮಂಗಳೂರಿನಲ್ಲೇ ಪ್ರವಾಸಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಇದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ