
ಬೆಳಗಾವಿ (ಡಿ.06): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯ ನಮ್ಮ ಹೋರಾಟಕ್ಕೆ ಸರಿಯಾದ ನ್ಯಾಯ ಸಿಕ್ಕಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ಪಂಚಮಸಾಲಿ ಸರ್ವಪಕ್ಷಗಳ ಶಾಸಕರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರವೇ ನಮ್ಮ ಶಾಸಕರನ್ನು ಭೇಟಿಯಾಗಿ ಚರ್ಚೆ ಮಾಡಿದ್ದೆವು. ಆದರೆ, ಈಗಷ್ಟೇ ಸರ್ಕಾರ ರಚನೆ ಆಗಿದ್ದರಿಂದ ಶಾಂತವಾಗಿ ಹೋರಾಟ ಮಾಡೋಣ ಎಂದು ನಿರ್ಧಾರ ಮಾಡಿದ್ದೆವು. ನಮ್ಮ ಶಾಸಕರ ಅಭಿಪ್ರಾಯದ ಮೇರೆಗೆ ಅಧಿವೇಶನದಲ್ಲಿ ಹೋರಾಟ ಮಾಡೋಣ ಎಂದು ನಿರ್ಧಾರ ಮಾಡಲಾಗಿತ್ತು ಎಂದರು.
ನಮ್ಮ ಸಮಾಜದ ಸಭೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡುತ್ತೇವೆ. ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಹಾಗೂ ಒಳಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ಕುರಿತು ಸಭೆ ಮಾಡುತ್ತೇವೆ. ಇದನ್ನು ಸಿಎಂ ಜತೆಗೆ ಸಭೆ ಮಾಡಿದ ನಂತರವೇ ನಮ್ಮ ನಿರ್ಧಾರವನ್ನು ನಾವು ಪ್ರಕಟ ಮಾಡುತ್ತೇವೆ. ಸಿಎಂ ಜತೆಗೆ ಸಭೆ ಮಾಡದೆ ಹೋರಾಟ ಮಾಡುವುದು ಸರಿಯಲ್ಲ ಎಂದು ಸಲಹೆಗಳು ಬಂದಿವೆ. ಆದ್ದರಿಂದ ಬುಧವಾರ ಅಥವಾ ಗುರುವಾರ ಸಿಎಂ ನೇತೃತ್ವದಲ್ಲಿ ಸಭೆ ಮಾಡಿದ ನಂತರ ಹೋರಾಟದ ನಿರ್ಣಯ ಮಾಡಲಾಗುವುದು ಎಂದರು.
ಸಿದ್ದರಾಮಯ್ಯ ಸರ್ಕಾರದಿಂದ ರೈತರಿಗೆ ಅನ್ಯಾಯ ಆಗುವುದಿಲ್ಲ: ಸಚಿವ ಮಹದೇವಪ್ಪ
ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದೇವೆ. ಲೋಕಸಭೆ ಚುಣಾವಣೆ ಒಳಗೆ ಮೀಸಲಾತಿ ಘೋಷಣೆ ಮಾಡಬೇಕು, ಕಳೆದ ಬಾರಿಯ ರೀತಿಯ ಹೋರಾಟ ಆಗುತ್ತಿಲ್ಲ ಎಂಬ ಅರವಿಂದ ಬೆಲ್ಲದ ಅವರ ಮಾತಿನ ವಿಚಾರಕ್ಕೆ ಉತ್ತರಿಸಿದ ಅವರು, ಶಾಸಕರು ಒತ್ತಡ ಹಾಕಲಿಕ್ಕೆನೇ ಸಭೆ ಕರೆದಿದ್ದು. ಅಲ್ಲದೆ, ಯತ್ನಾಳ ಅವರು ಮುನಿಸಿಕೊಂಡಿಲ್ಲ. ಈಗಿನ ಶಾಸಕರು ಹೋರಾಟ ಮಾಡಬೇಕು ಎಂದಿದ್ದಾರೆ. ಶಾಸಕರಾದ ವಿಜಯಾನಂದ ಹಾಗೂ ವಿನಯ್ ಅವರನ್ನು ದೆಹಲಿಗೆ ರಾಹುಲ್ ಕರೆದಿದ್ದರು. ಆದಷ್ಟು ಬೇಗ ನಮ್ಮ ಮೀಸಲಾತಿ ಕೊಡಲು ಸರ್ಕಾರದ ಮೇಲೆ ಒತ್ತಡ ಹಾಕಿ ಎಂದು ರಾಹುಲ್ ಅವರಿಗೆ ಮನವಿ ಮಾಡಿದ್ದಾರೆ. ಶೀಘ್ರವೇ ಮಿಸಲಾತಿ ಸಿಗುತ್ತದೆ ಎನ್ನುವ ಭರವಸೆ ಇದೆ ಎಂದರು. ಎಲ್ಲಾ ಪಕ್ಷಗಳಿಗೂ ಪಂಚಮ ಸಾಲಿ ಮತಗಳು ಬೇಕು, ಹೀಗಾಗಿ ಎಲೆಕ್ಷನ್ ಒಳಗೆ ಮೀಸಲಾತಿ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ