
ಬೆಂಗಳೂರು (ಜು.13): ‘ದುಡಿಯುವ ಶಕ್ತಿ ಇರುವ ಪುರುಷ ವಿಚ್ಛೇದನದ ಬಳಿಕ ಪತ್ನಿಯಿಂದ ಶಾಶ್ವತ ಜೀವನಾಂಶ ಕೇಳುವುದಕ್ಕೆ ಅರ್ಹನಲ್ಲ’ ಎಂದು ಎಂದು ಹೈಕೋರ್ಟ್ ಹೇಳಿದೆ. ಪತ್ನಿಯಿಂದ ಜೀವನಾಂಶ ಕೋರಿ ಉಡುಪಿಯ ಬಡನಿಡಿಯೂರು ಗ್ರಾಮದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹಿರಿಯ ನ್ಯಾ. ಅಲೋಕ್ ಅರಾಧೆ ಹಾಗೂ ನ್ಯಾ. ಜೆ.ಎಂ. ಖಾಜಿ ಅವರಿದ್ದ ಪೀಠ ಈ ಅಭಿಪ್ರಾಯಪಟ್ಟಿದೆ.
‘ವಿಚ್ಛೇದನದ ಬಳಿಕ ಶಾಶ್ವತ ಜೀವನಾಂಶ ಕೋರಿ ಅರ್ಜಿ ಸಲ್ಲಿಕೆಯಾದಾಗ ಎರಡೂ ಪಕ್ಷಗಾರರ ಸ್ಥಿತಿಗತಿ, ಸತಿ ಅಥವಾ ಪತಿಯ ಅಗತ್ಯತೆಗಳು ಹಾಗೂ ಜೀವನಾಂಶ ಕೋರಿದವರ ಆದಾಯ ಮತ್ತು ಆಸ್ತಿಯನ್ನು ಪರಿಗಣಿಸಬೇಕು. ಈ ಪ್ರಕರಣದಲ್ಲಿ ಪಾಟಿ ಸವಾಲಿನ ಸಂದರ್ಭದಲ್ಲಿ, ಪಿತ್ರಾರ್ಜಿತ ಜಮೀನು ಹಾಗೂ ಸದ್ಯ ವಾಸವಿರುವ ಮನೆಯಲ್ಲಿ ತಾವು ಪಾಲು ಹೊಂದಿರುವುದಾಗಿ ಮೇಲ್ಮನವಿದಾರರೇ ಒಪ್ಪಿಕೊಂಡಿದ್ದಾರೆ. ಆದರೆ, ಸಹಕಾರ ಸಂಘವೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ತಮ್ಮ 15 ವರ್ಷದ ಮಗನನ್ನೂ ನೋಡಿಕೊಳ್ಳುತ್ತಿದ್ದಾರೆ.
ಗಂಡನ ಅನುಮಾನಿಸುವುದು, ಸಹೋದ್ಯೋಗಿಗಳೊಂದಿಗೆ ಸಂಬಂಧ ಕಲ್ಪಿಸುವುದು ಕ್ರೌರ್ಯ
ಮಗನ ವಿದ್ಯಾಭ್ಯಾಸಕ್ಕೆ ಸಾಕಷ್ಟುಹಣದ ಅಗತ್ಯವಿದ್ದು, ಈ ಎಲ್ಲ ಹೊರೆಯೂ ತಾಯಿಯ ಮೇಲೇ ಇದೆ. ಇನ್ನು ಜೀವನಾಂಶ ಕೋರಿ ಅರ್ಜಿ ಸಲ್ಲಿಸಿರುವ ಮೇಲ್ಮನವಿದಾರರು ದುಡಿಯು ಸಾಮರ್ಥ್ಯವಿರುವ ಸಶಕ್ತ ವ್ಯಕ್ತಿಯಾಗಿದ್ದಾರೆ. ಆದ್ದರಿಂದ, ಅವರಿಗೆ ಶಾಶ್ವತ ಜೀವನಾಂಶ ನಿರಾಕರಿಸಿರುವ ಕೌಟುಂಬಿಕ ನ್ಯಾಯಾಲಯದ ಕ್ರಮ ಸರಿಯಾಗಿದೆ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಮೇಲ್ಮನವಿ ವಜಾಗೊಳಿಸಿದೆ. ಪ್ರಕರಣದ ವಿಚಾರಣೆ ವೇಳೆ ಮೇಲ್ಮನವಿದಾರರ ಪರ ವಕೀಲರು, ‘ಪ್ರತಿವಾದಿ ಮಹಿಳೆ ಸಹಕಾರ ಸಂಘವೊಂದರಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ದೇವಸ್ಥಾನವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಮೇಲ್ಮನವಿದಾರರು ಈಗ ಕೆಲಸ ಕಳೆದುಕೊಂಡಿದ್ದು, ಜೀವನ ನಿರ್ವಹಣೆಗೆ ಯಾವುದೇ ಆದಾಯವಿಲ್ಲದಂತಾಗಿದೆ’ ಎಂದು ವಾದ ಮಂಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದ ಮಹಿಳೆಯ ಪರ ವಕೀಲರು, ‘ಬ್ರಹ್ಮಾವರದ ಸಹಕಾರ ಸಂಘದಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ಮಾಸಿಕ 8 ಸಾವಿರ ವೇತನ ಪಡೆಯುತ್ತಿದ್ದು, ತಮ್ಮ 15 ವರ್ಷದ ಮಗನನ್ನೂ ಆ ಹಣದಲ್ಲೇ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ, ಜೀವನಾಂಶ ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಮತ್ತು ಪ್ರತಿವಾದಿಗಳು 1993ರ ಮಾ.25ರಂದು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. ಪತ್ನಿ ಗರ್ಭವತಿಯಾದ ಬಳಿಕ ಮಗುವಿಗೆ ಜನ್ಮ ನೀಡುವ ಮೊದಲೇ 1994ರ ಫೆಬ್ರವರಿಯಲ್ಲಿ ಪತಿಯ ಮನೆ ತೊರೆದು ಹೋಗಿದ್ದರು. ಮಗು ಹುಟ್ಟಿದ ನಂತರ ಹಲವು ವರ್ಷಗಳೇ ಕಳೆದರೂ ಆಕೆ ಗಂಡನ ಮನೆಗೆ ತೆರಳಿರಲಿಲ್ಲ. ಇದರಿಂದ, ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಪತಿ ಅರ್ಜಿ ಸಲ್ಲಿಸಿದ್ದರು.
ಎಸಿಬಿಗೆ ಕಳಂಕಿತರನ್ನ ನಿಯೋಜನೆ ಮಾಡಬೇಡಿ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ಅಲ್ಲದೆ, ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 25ರ ಅಡಿ ಶಾಶ್ವತ ಜೀವನಾಂಶ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ದಂಪತಿಗೆ ವಿಚ್ಛೇದನ ನೀಡಿ 2015ರ ಆ.19ರಂದು ಆದೇಶಿಸಿತ್ತು. ಆದರೆ, ಶಾಶ್ವತ ಜೀವನಾಂಶ ಕೊಡಿಸುವಂತೆ ಮಾಡಿದ್ದ ಮನವಿ ಮಾನ್ಯ ಮಾಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ