ಮಗನ ಅಂತ್ಯಕ್ರಿಯೆ ವೇಳೆ ಗೃಹಲಕ್ಷ್ಮಿ ಬಗ್ಗೆ ತಾಯಿ ಭಾವುಕ ಮಾತು ವೈರಲ್‌!

By Kannadaprabha NewsFirst Published Feb 20, 2024, 12:03 PM IST
Highlights

ಮೃತ ಮಗನ ಅಂತ್ಯಸಂಸ್ಕಾರದ ವೇಳೆ ‘ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ 2 ಸಾವಿರ ರು. ಹಣ ಬರುತ್ತದೆ. ನನ್ನ ಜೀವನಕ್ಕೆ ಅದು ಸಾಕು’ ಎಂದು ತಾಯಿಯೊಬ್ಬರು ಭಾವುಕರಾಗಿ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೆಂಗಳೂರು (ಫೆ.20): ಮೃತ ಮಗನ ಅಂತ್ಯಸಂಸ್ಕಾರದ ವೇಳೆ ‘ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ 2 ಸಾವಿರ ರು. ಹಣ ಬರುತ್ತದೆ. ನನ್ನ ಜೀವನಕ್ಕೆ ಅದು ಸಾಕು’ ಎಂದು ತಾಯಿಯೊಬ್ಬರು ಭಾವುಕರಾಗಿ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಗುರಕ್ಕನವರ (34) ಕೆಲದಿನಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ವಿಶ್ವನಾಥ ಅವರ ತಾಯಿ ನೀಲವ್ವ ಅಳುತ್ತಲೇ ‘ಅಮ್ಮ ನೀನು ಬದುಕಲು ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರು. ಬರುತ್ತದೆ ಬಿಡು’ ಎಂದು ಸಾಯುವುದಕ್ಕೂ ಮುನ್ನ ಮಗ ಹೇಳಿದ್ದನ್ನು ನೆನಪಿಸಿಕೊಂಡರು. ಈ ಕುರಿತು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರೊಬ್ಬರು ವಿಡಿಯೋ ಮಾಡಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಲ್ಲದೆ, ನೀಲವ್ವ ಅವರ ಹೇಳಿಕೆಯಿಂದ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯ ಮಹತ್ವ ಏನು ಎಂಬುದು ತಿಳಿಯುತ್ತದೆ ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

ಕೈ ಮುಗಿದು ಒಳಗೆ ಬಾ, ಧೈರ್ಯವಾಗಿ ಪ್ರಶ್ನಿಸಿ ಎಂದು ಬರೆದರೆ ತಪ್ಪೇನು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸವದತ್ತಿ ತಹಸೀಲ್ದಾರ್‌ ಸೂಚನೆ ಮೇರೆಗೆ ಮರಕುಂಬಿ ಗ್ರಾಮದಲ್ಲಿ ನೀಲವ್ವ ಅವರು ವಾಸವಿದ್ದ ಮನೆಗೆ ಭೇಟಿ ನೀಡಿದ್ದ ಗ್ರಾಮ ಆಡಳಿತಾಧಿಕಾರಿ ದೀಪಾ ಎಸ್‌.ಕೊಪ್ಪಳ ಅವರು, ನೀಲವ್ವ ಅವರ ಆರ್ಥಿಕ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನೀಲವ್ವ ಅವರು ತಮ್ಮನ್ನು ಪೋಷಿಸುತ್ತಿದ್ದ ಮಗ ಈಗ ಸಾವನ್ನಪ್ಪಿದ್ದಾನೆ. ತಮಗೆ ವಿಧವಾ ವೇತನ ದೊರೆಯುತ್ತಿದೆ. ಅದರ ಜತೆಗೆ ಈಗ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಮಾಸಿಕ 2 ಸಾವಿರ ರು. ಸಹಾಯಧನವೂ ಸಿಗುತ್ತಿದೆ. ಅದರಲ್ಲಿಯೇ ಜೀವನ ಸಾಗಿಸಬೇಕಿದೆ ಎಂದು ತಿಳಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಂದನೆ:

ಬದುಕಿಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡು ಅರಣ್ಯರೋಧನೆ ಅನುಭವಿಸುತ್ತಿದ್ದ ಹಿರಿಯ ವಯಸ್ಸಿನ ತಾಯಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮನ ಮಿಡಿದಿದ್ದು, ವೈಯಕ್ತಿಯವಾಗಿ ಧನ ಸಹಾಯ ಮಾಡಿದ್ದಾರೆ. 

ನೀಲವ್ವ ಗುರಕ್ಕನವರ ಮಗನನ್ನು ಕಳೆದುಕೊಂಡು, ಮಗನ ಅಂತಿಮ ಸಂಸ್ಕಾರ ಮಾಡಲು ಸಾಧ್ಯವಾಗದೇ ಅಸಹಾಯಕಳಾಗಿದ್ದಳು. ನಂತರ ಮಾಜಿ ಮೇಯರ್ ವಿಜಯ ಮೋರೆ ಅವರ ಪುತ್ರ ಅಲೆನ್ ಮತ್ತು ಅವರ ಗೆಳೆಯರ ನೆರವಿನಿಂದ ಮಗನ ಅಂತ್ಯಸಂಸ್ಕಾರ ನೇರೆವೇರಿಸಿದ್ದರು. ಅಂತ್ಯಸಂಸ್ಕಾರ ವೇಳೆ ಗೃಹಲಕ್ಷ್ಮೀ ಯೋಜನೆಯಿಂದ ಪಡೆಯುತ್ತಿರುವ ಮಾಸಿಕ ₹2000 ಹಣದ ಕುರಿತು ಪ್ರಸ್ತಾಪಿಸಿ ಆಕ್ರಂದನ ವ್ಯಕ್ತಪಡಿಸಿದ್ದರು.

ಅಂತ್ಯಸಂಸ್ಕಾರ ಸಮಯದಲ್ಲಿ ಮಗನನ್ನು ಕಳೆದುಕೊಂಡ ತಾಯಿ ಅರಣ್ಯ ರೋಧನದ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು. ಈ ವಿಡಿಯೋವನ್ನು ಗಮನಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು, ಅಂತ್ಯಸಂಸ್ಕಾರ ಮುಗಿಸಿ ಸ್ವ ಗ್ರಾಮ ಮರಕುಂಬಿಗೆ ಹೋಗಿದ್ದ ತಾಯಿಯ ನೆರವಿಗೆ ಧಾವಿಸಿ ಆರ್ಥಿಕ ಸಹಾಯ ಮಾಡಿದ್ದಾರೆ.

 

ವಸತಿ ಶಾಲೆಗಳ ಘೋಷವಾಕ್ಯ ಬದಲಾವಣೆ: ಕೈಮುಗಿದು ಒಳಗೆ ಬಾ ಅಥವಾ ಧೈರ್ಯವಾಗಿ ಪ್ರಶ್ನಿಸು ಎರಡೂ ಒಂದೇ ಎಂದ ಹೆಬ್ಬಾಳ್ಕರ್

ಒಂದು ವರ್ಷಕ್ಕೆ ಗೃಹಲಕ್ಷ್ಮೀ ಯೋಜನೆಯ ಮೂಲಕ ಜಮಾ ಆಗುವ ಒಟ್ಟು ₹ 24 ಸಾವಿರ ಹಣದ ನೆರವಿನ ಹಸ್ತ ಚಾಚಿದ್ದಾರೆ. ತಮ್ಮ ಕಚೇರಿಯ ವಿಶೇಷ ಅಧಿಕಾರಿ ಜೆ.ಬಿ.ಬಾಗೋಜಿಕೊಪ್ಪ ಅವರ ಮೂಲಕ ಹಣ ಮಹಿಳೆಯ ಮನೆಗೆ ಕಳುಹಿಸಿದ್ದಾರೆ. ಅಲ್ಲದೇ ನೊಂದ ತಾಯಿಯೊಂದಿಗೆ ಕರೆ ಮೂಲಕ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್‌ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಸಾಂತ್ವಾನದ ಜತೆಗೆ ಆತ್ಮಸ್ಥೈರ್ಯವನ್ನು ತುಂಬಿದರು. ಸದಾಕಾಲವೂ ತಾಯಿಯ ಬೆನ್ನಿಗೆ ನಿಲ್ಲುವುದಾಗಿ ತಿಳಿಸಿದ್ದಾರೆ.

click me!