
ಚಿಕ್ಕೋಡಿ (ಮೇ.22): ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದ ವೀರ ಯೋಧ ಶಂಕರ್ ಪರಗೌಡ ಜಾಲಗೇರಿ, 24 ವರ್ಷಗಳ ಸುದೀರ್ಘ ದೇಶ ಸೇವೆಯ ನಂತರ ಸೇವಾ ನಿವೃತ್ತಿ ಹೊಂದಿ ತಮ್ಮ ಸ್ವಗ್ರಾಮಕ್ಕೆ ಮರಳಿದಾಗ, ಗ್ರಾಮಸ್ಥರಿಂದ ಅದ್ದೂರಿಯಾಗಿ ಸ್ವಾಗತಿಸಿದ್ದು ರಾಜ್ಯಾದ್ಯಂತ ಗಮನ ಸೆಳೆದು, ಮೆಚ್ಚುಗೆಗೆ ಪಾತ್ರವಾಗಿದೆ.
ಗಡಿಯಲ್ಲಿ ಪಾಕಿಸ್ತಾನದ ಸೊಕ್ಕನ್ನು ಅಡಗಿಸಿ, ದೇಶದ ಗೌರವವನ್ನು ಎತ್ತಿ ಹಿಡಿದ ಈ ವೀರ ಯೋಧ, ರೈಲ್ವೆ ನಿಲ್ದಾಣದಿಂದ ಅಥಣಿ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಶಿವಾಜಿ ಪುತ್ತಳಿಗೆ ಪೂಜೆ ಸಲ್ಲಿಸಿ, ತೆರೆದ ವಾಹನದಲ್ಲಿ ಡಾಲ್ಬಿ ಸೌಂಡ್ನೊಂದಿಗೆ ಪಟಾಕಿಗಳನ್ನ ಸಿಡಿಸಿ ಸಂಭ್ರಮದಲ್ಲಿ ಮೆರವಣಿಗೆ ನಡೆಸಿದರು. ಬಸವೇಶ್ವರ ಪುತ್ತಳಿಗೆ ಪೂಜೆ ಸಲ್ಲಿಸಿ, ಪ್ರಮುಖ ರಸ್ತೆಗಳ ಮೂಲಕ ಗ್ರಾಮದವರೆಗೆ ಈ ಮೆರವಣಿಗೆ ಸಾಗಿತು. ರಸ್ತೆಯುದ್ದಕ್ಕೂ ಗ್ರಾಮಸ್ಥರು ಹೂಮಳೆಗರೆದು ಸಂಭ್ರಮಿಸಿದರು.
ಗ್ರಾಮಕ್ಕೆ ಆಗಮಿಸಿದಾಗ, ಮುತೈದೆಯರು ಶಂಕರ್ ಅವರಿಗೆ ಆರತಿ ಬೆಳಗಿ ಬರಮಾಡಿಕೊಂಡರು. ಕುಟುಂಬಸ್ಥರು ಪ್ರೀತಿಯಿಂದ ತವರಿಗೆ ಬಂದ ಮಗನನ್ನು ಆಲಂಗಿಸಿದರು. ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಗಣ್ಯರು ಯೋಧನಿಗೆ ಹೂಮಾಲೆ ಹಾಕಿ, ಗೌರವ ಸತ್ಕಾರ ನೀಡಿದರು.
ಗಡಿಯಲ್ಲಿ ಜೀವ ಪಣಕ್ಕಿಟ್ಟು ದೇಶವನ್ನು ರಕ್ಷಿಸಿ, ಸುರಕ್ಷಿತವಾಗಿ ತವರಿಗೆ ಮರಳಿದ ಶಂಕರ್ ಅವರಿಗೆ ಸಿಕ್ಕ ಈ ಹೃದಯಸ್ಪರ್ಶಿ ಸ್ವಾಗತ ಎಲ್ಲರ ಗಮನ ಸೆಳೆಯಿತು. ಚಿಕ್ಕೋಡಿಯ ಜನರ ದೇಶಭಕ್ತಿ ಮತ್ತು ಯೋಧರಿಗೆ ಗೌರವ ತೋರಿಸಿದ ಈ ಕ್ಷಣವು ಎಲ್ಲರಿಗೂ ಹೆಮ್ಮೆಯ ಮತ್ತು ಭಾವುಕತೆಯ ಕ್ಷಣವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ