
ಬೆಂಗಳೂರು (ಮಾ.08): ರಾಜ್ಯದ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ವಾರ್ಷಿಕ 7,246.85 ಕೋಟಿ ಮೀಸಲು ಇಡಲಾಗಿದೆ. ವಿಜಯನಗರದಲ್ಲಿ ಹಂಪಿ ಶುಗರ್ಸ್ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, 454 ಕೋಟಿ ವೆಚ್ಚದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸಲು ಮಾರ್ಗಸೂಚಿ ದರದಲ್ಲಿ 82 ಎಕರೆ ಜಮೀನು ಮಂಜೂರು ಮಾಡಲಾಗುತ್ತದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ರಾಜ್ಯದ ಮಧ್ಯಭಾಗದಲ್ಲಿರುವ ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ಬಳಿ ಹಂಪಿ ಶುಗರ್ಸ್ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಅನುಮೋದನೆ ರಾಜ್ಯ ಸರ್ಕಾರ ಅನುಮೋದನೆಯನ್ನು ನೀಡಿದೆ. ಸಂಸದ ಜಿಎಂ ಸಿದ್ದೇಶ್ವರ ಒಡೆತನದ ಹಂಪಿ ಸಕ್ಕರೆ ಕಾರ್ಖಾನೆ ಕಂಪನಿಯಿಂದ 454 ಕೋಟಿ ವೆಚ್ಚದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸಲಾಗುತ್ತದೆ. ಇನ್ನು ಸರ್ಕಾರದ ಮಾರ್ಗಸೂಚಿ ದರದಲ್ಲಿ 82 ಎಕರೆ ಜಮೀನು ಮಂಜೂರು ಮಾಡಲಾಗುತ್ತದೆ. ಇದರಿಂದ 2 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆಯಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಯಾರಿಗೆ ಎಷ್ಟು?
ಗಣಿಬಾದಿತ ಪ್ರದೇಶಗಳ ಅಭಿವೃದ್ಧಿ: ಗಣಿಬಾದಿತ ಪ್ರದೇಶಗಳಾದ ಬಳ್ಳಾರಿ, ಹೊಸಪೇಟೆ, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಅಕ್ರಮ ಗಣಿಗಾರಿಕೆ ಸರಬರಾಜು ವೇಳೆ ಬರೋಬ್ಬರಿ 25 ಸಾವಿರ ಕೋಟಿ ರೂ. ಸಂಗ್ರಹವಾಗಿತ್ತು. ಈ ಹಣದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಅನುಮತಿ ನೀಡಲಾಗಿದೆ. ಕೆಎಂಇಆರ್ ಸಿ ನಡಿ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಲು ಅವಕಾಶವಿದೆ. ಸುದರ್ಶನ್ ಅಧ್ಯಕ್ಷತೆಯಲ್ಲಿ ಕಮಿಟಿ ರಚಿಸಲಾಗಿದೆ. ಈ ಕಮಿಟಿ ಅಭಿವೃದ್ಧಿ ಬಗ್ಗೆ ಗಮನಹರಿಸಲಿದೆ. ಸರ್ಕಾರದ ಇಲಾಖೆ ಪ್ರಾಜೆಕ್ಟ್ ನೀಡಲಿದೆ. ಕಮಿಟಿ ಹಣ ಕೊಡುವ ಬಗ್ಗೆ ತೀರ್ಮಾನಿಸುತ್ತದೆ. ಗಣಿಬಾಧಿತ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಹಣ ವಿನಿಯೋಗ ಮಾಡಲಾಗುತ್ತದೆ. ಶಾಲೆ ಕಟ್ಟಡ, ನೀರಿನ ಯೋಜನೆಗೆ ಬಳಸಬಹುದು. ಇದರಲ್ಲಿ 17 ಸಾವಿರ ಕೋಟಿ ರೂ. ಹಣ ಬಳ್ಳಾರಿ ಮತ್ತು ಹೊಸಪೇಟೆ ಅಭಿವೃದ್ಧಿಗೆ ಬಳಸಲಾಗುತ್ತದೆ.
ರಾಯಚೂರು ವಿಮಾನ ನಿಲ್ದಾಣಕ್ಕೆ 219 ಕೋಟಿ ಅನುದಾನ: ರಾಯಚೂರು ವಿಮಾನ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ 219 ಕೋಟಿ ಅನುಮೋದನೆ ನೀಡಲಾಗಿದೆ. ಕುಳಾಯಿ ಮೀನು ಸಂಸ್ಕರಣಾ ಘಟಕ ಮೇಲ್ದರ್ಜೆಗೇರಿಸಲಾಗುವುದು. ಇದಕ್ಕಾಗಿ 25 ಕೋಟಿ ವೆಚ್ಚ ಮಾಡಲು ಅನುಮತಿ ನೀಡಲಾಗಿದೆ. ಜೆಎಸ್ ಎಸ್ ಸಂಸ್ಥೆಗೆ 21 ಎಕರೆ ಭೂಮಿ ನೀಡಿಕೆಗೆ ಒಪ್ಪಿಗೆ ನೀಡಿದ್ದೇವೆ. ಚಿಕ್ಕೋಡಿಯ 14 ಗ್ರಾಮಗಳಿಗೆ ನೀರಾವರಿ ಒದಗಿಸಲಾಗುತ್ತದೆ. ಇದಕ್ಕಾಗಿ 567 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮತಿ ನೀಡಲಾಗಿದೆ ಎಂದು ತಿಳಿದಿದರು.
ಬಿಎಂಟಿಸಿ ತೆರಿಗೆ ಹಣಕ್ಕೆ ವಿನಾಯ್ತಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ (ಎನ್ಡಬ್ಲ್ಯೂಕೆಆರ್ಟಿಸಿ) ಮೋಟಾರು ವಾಹನ ತೆರಿಗೆಯಿಂದ ವಿನಾಯ್ತಿಗೆ ನಿರ್ಧಾರ ಮಾಡಲಾಗಿದೆ. ಈ ಮಂಡಳಿಗಳು 2022-23ನೇ ಸಾಲಿನಲ್ಲಿ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಮೊತ್ತ 166.99 ಕೋಟಿ ರೂ.ಗಳಿಗೆ ವಿನಾಯಿತಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಕುರುಬರಹಳ್ಳಿಯಲ್ಲಿ ಜನಸೇವಾ ಟ್ರಸ್ಟ್ ಗೆ 10 ಗುಂಟೆ ಜಮೀನು ಮಂಜೂರು ಮಾಡಲಾಗಿದೆ. ಆರ್ಎಸ್ಎಸ್ನ ಅಡಿಯಲ್ಲಿರುವ ಜನ ಸೇವಾ ಟ್ರಸ್ಟ್ ಇದಾಗಿದೆ. ಹಾವೇರಿಯ ದೇವಗಿರಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ಗೆ 10 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದರು.
ಗೋಕಾಕ: ಅತೀ ಶೀಘ್ರದಲ್ಲೇ ಜನರಿಗೆ ಪುನರ್ವಸತಿ, ರಮೇಶ ಜಾರಕಿಹೊಳಿ
ಗೋಕಾಕ್ ನಗರದ ಸಮುದ್ರ ತೀರಕ್ಕೆ ರಕ್ಷಣಾ ಗೋಡೆ: ಗೋಕಾಕ್ ನಗರವನ್ನು ಪ್ರವಾಹದಿಂದ ರಕ್ಷಿಸಲು ರಕ್ಷಣಾ ಗೋಡೆ ನಿರ್ಮಿಸಲು 650 ಕೋಟಿ ರೂ ಮಂಜೂರು ಮಾಡಲಾಗಿದೆ. ಗೋಕಾಕ್ ಪಟ್ಟಣ ಮತ್ತು ರಾಜ್ಯ ಹೆದ್ದಾರಿ-31ರ ತನಕ ನದಿಯುದ್ದಕ್ಕೂ ರಕ್ಷಣಾ ಗೋಡೆ ನಿರ್ಮಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 22 ಕೋಟಿ ವೆಚ್ಚದಲ್ಲಿ ನೆರೇನ್ ಎಕ್ಸ್ ಪೋರ್ಟ್ ಯುನಿಟ್ ಮಾಡಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಗುಲ್ಬರ್ಗ ವಿಶ್ವ ವಿದ್ಯಾನಿಲಯದಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಕ್ಕೆ 13 ಕೋಟಿ ಅನುದಾನ ನೀಡಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ