
ಬೆಂಗಳೂರು(ಏ.02): ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಗದು, ಮದ್ಯ, ಬೆಲೆಬಾಳುವ ಪದಾರ್ಥಗಳ ಅಕ್ರಮ ಸಾಗಾಟದ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು, ಚೆಕ್ಪೋಸ್ಟ್ಗಳಲ್ಲಿ ಬಿಗಿ ತಪಾಸಣೆ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಒಂದೇ ದಿನ ರಾಜ್ಯದ ವಿವಿಧೆಡೆ ದಾಳಿ ನಡೆಸಿರುವ ಪೊಲೀಸರು, 4.62 ಕೋಟಿಗೂ ಅಧಿಕ ಮೌಲ್ಯದ ವಸ್ತು, 2.70 ಕೋಟಿಗೂ ಅಧಿಕ ನಗದು ಹಾಗೂ 4.12 ಲಕ್ಷ ಮೌಲ್ಯದ ಮದ್ಯ ಸೇರಿ ಒಟ್ಟಾರೆ 7.36 ಕೋಟಿ ಮೌಲ್ಯದ ಪದಾರ್ಥ ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ .4.5 ಕೋಟಿ ಮೌಲ್ಯದ ಸೀರೆ ವಶಪಡಿಸಿಕೊಳ್ಳಲಾಗಿದೆ. ಕಾರವಾರದಲ್ಲಿ ಕರಾವಳಿ ಕಾವಲು ಪಡೆಯ ಪೊಲೀಸರು ದಾಳಿ ನಡೆಸಿ, ಸಮುದ್ರ ಮಾರ್ಗದ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 91 ಸಾವಿರ ಮೌಲ್ಯದ ಗೋವಾ ಮದ್ಯ ಹಾಗೂ ಬೋಟು ಸೇರಿ 2.90 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಶಿವಮೊಗ್ಗದ ಯಡವಾಲ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ .3.21 ಲಕ್ಷ ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ.
ತುಮಕೂರು: ದಾಖಲೆಯಿಲ್ಲದ ಲಕ್ಷಾಂತರ ರೂ. ಮೌಲ್ಯದ ಎಲ್ಇಡಿ ಬಲ್ಬ್ ಜಪ್ತಿ
ಇದೇ ವೇಳೆ, ಶಿವಮೊಗ್ಗದ ಅರಕೆರೆ ಚೆಕ್ಪೋಸ್ಟ್ನಲ್ಲಿ ಸೂಕ್ತ ದಾಖಲೆಗಳಿಲ್ಲದೆ ಎಟಿಎಂ ವಾಹನದಲ್ಲಿ 1.40 ಕೋಟಿ ರು.ಸಾಗಿಸಲಾಗುತ್ತಿತ್ತು. ಇದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ 14 ಲಕ್ಷ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಚೂರಿಕಟ್ಟೆಚೆಕ್ಪೋಸ್ಟ್ನಲ್ಲಿ .20 ಲಕ್ಷ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಚೆಕ್ಪೋಸ್ಟ್ನಲ್ಲಿ 5.26 ಲಕ್ಷ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಚೆಕ್ಪೋಸ್ಟ್ನಲ್ಲಿ 5.27 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಅಲ್ಲದೆ, ಶಿವಮೊಗ್ಗದ ವಿನೋಬನಗರದಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 1.56 ಲಕ್ಷ ಮೌಲ್ಯದ 26 ಕ್ವಿಂಟಲ್ ಅಕ್ಕಿ , ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬಂಡೀಹಳ್ಳಿ ಗೇಟ್ ಬಳಿ 6 ಲಕ್ಷಕ್ಕೂ ಅಧಿಕ ಮೌಲ್ಯದ ಎಲ್ಇಡಿ ಬಲ್್ಬ ಹಾಗೂ ಇನ್ವೆಂಟರ್ ಲ್ಯಾಂಪ್, ಗದಗ ಜಿಲ್ಲೆ ರೋಣ ತಾಲೂಕಿನ ಹಿರೇಹಾಳದಲ್ಲಿ 3.15 ಲಕ್ಷ ಮೌಲ್ಯದ 350 ಚೀಲ ಗೋವಿನಜೋಳ ಹಾಗೂ 273 ಕಡಲೆ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 18.16 ಕೇಜಿ ಬೆಳ್ಳಿ ವಸ್ತು ಜಪ್ತಿ
4.5 ಕೋಟಿ ಮೌಲ್ಯದ ಸೀರೆ ಶಿವಮೊಗ್ಗದ ಗೋದಾಮಿಂದ ಜಪ್ತಿ
ಶಿವಮೊಗ್ಗ: ಇಲ್ಲಿನ ಕೆ.ಆರ್.ಪುರಂ ರಸ್ತೆಯಲ್ಲಿರುವ ಗೋಡೌನ್ನಲ್ಲಿ ಅನಧಿಕೃತವಾಗಿ ಸಂಗ್ರಹಿಸಿ ಇಟ್ಟಿದ್ದ ಅಂದಾಜು .4.50 ಕೋಟಿ ಮೌಲ್ಯದ ಸೀರೆಗಳನ್ನು ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಇದನ್ನು ಸಂಗ್ರಹಿಸಿ ಇಡಲಾಗಿದ್ದು, ಮತದಾರರಿಗೆ ಹಂಚಲು ಸಂಗ್ರಹಿಸಿ ಇಟ್ಟಿರಬಹುದು ಎಂಬ ಶಂಕೆ ಮೇಲೆ ಇದನ್ನು ವಶಪಡಿಸಿಕೊಂಡಿದ್ದಾರೆ.
ಪತ್ನಿ ಕಾಟ ತಪ್ಪಿಸಲು ಗೋವಾಕ್ಕೆ ಹೊರಟು 26 ಲಕ್ಷ ಕಕ್ಕಿದ!
ಬೆಳಗಾವಿ: ಕರ್ನಾಟಕ ಚೌಕ ಸಮೀಪದ ಚೆಕ್ಪೋಸ್ಟ್ನಲ್ಲಿ ಮುಂಬೈನ ಪ್ರಥಮ ದರ್ಜೆ ಗುತ್ತಿಗೆದಾರನಿಂದ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 26 ಲಕ್ಷ ರು. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಂಡತಿಯ ಕಾಟ ತಾಳಲಾರದೆ ನೆಮ್ಮದಿ ಅರಿಸಿ, ಗೋವಾಕ್ಕೆ ತೆರಳುತ್ತಿದ್ದೆ. ಆನ್ಲೈನ್ನಲ್ಲಿ ವಹಿವಾಟು ನಡೆಸಿದರೆ ಗೊತ್ತಾಗುತ್ತದೆ ಎಂದು ನಗದು ಒಯ್ಯುತ್ತಿದ್ದೆ. ಗೂಗಲ್ ಮ್ಯಾಪ್ ಬಳಸಿ ಪ್ರಯಾಣಿಸುತ್ತಿದ್ದೆ. ಗೋವಾ ಬದಲಿಗೆ ಬೆಳಗಾವಿಗೆ ಬಂದು ಬಿಟ್ಟಿದ್ದೇನೆ ಎಂದಾತ ಹೇಳಿಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ