40% Commission: ನಮ್ಮ ಕಾಲದ್ದೂ ತನಿಖೆ ಆಗ್ಲಿ: ಡಿಕೆಶಿ, ಸಿದ್ದು!

By Kannadaprabha NewsFirst Published Nov 28, 2021, 7:40 AM IST
Highlights

*ಶೇ.40 ಕಮಿಷನ್‌: ಜೆಪಿಸಿ ತನಿಖೆಗೆ ಕಾಂಗ್ರೆಸ್‌ ಆಗ್ರಹ
*ಬಿಜೆಪಿಯವರೇ ನೇತೃತ್ವ ವಹಿಸಲಿ
*ನಮ್ಮ ಕಾಲದ್ದೂ ತನಿಖೆ ಆಗ್ಲಿ: ಡಿಕೆಶಿ, ಸಿದ್ದು
 

ಬೆಂಗಳೂರು(ನ.28): ಕಾಂಗ್ರೆಸ್‌ (Congress) ಸರ್ಕಾರದ ಅವಧಿಯಲ್ಲಿ ನಡೆದಿರುವ ಟೆಂಡರ್‌ಗಳ (Tender) ಬಗ್ಗೆಯೂ ತನಿಖೆ ನಡೆಯಲಿ. ಇದಕ್ಕೆ ನಮ್ಮ ಆಕ್ಷೇಪ ಏನೂ ಇಲ್ಲ ಎಂದು ಪ್ರತಿಪಕ್ಷ ಕಾಂಗ್ರೆಸ್‌ ನಾಯಕರಾದ ಡಿ.ಕೆ.ಶಿವಕುಮಾರ್‌ (D K Shivakumar) ಮತ್ತು ಸಿದ್ದರಾಮಯ್ಯ (Siddaramaiah) ಅವರು ಆಡಳಿತಾರೂಢ ಬಿಜೆಪಿಗೆ (BJP) ತಿರುಗೇಟು ನೀಡಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಶೇ. 40 ಕಮಿಷನ್‌ ಪಡೆಯುತ್ತಿರುವ ಕುರಿತು ತನಿಖೆ ನಡೆಸಲು ವಿಧಾನಮಂಡಲದ ಉಭಯ ಸದನಗಳ ಜಂಟಿ ಸದನ ಸಮಿತಿ (joint parliamentary committee) ರಚನೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಬಿಜೆಪಿ ಅವಧಿಯ ಕಾಮಗಾರಿಗಳು ಮಾತ್ರವಲ್ಲ, ಅಗತ್ಯವಾದರೆ ಕಾಂಗ್ರೆಸ್‌ ಅವಧಿಯವೂ ಸೇರಿ ಕಳೆದ 10 ವರ್ಷಗಳ ಕಾಮಗಾರಿಗಳು ಹಾಗೂ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಯಲಿ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.

Karnataka Politics: ಗುಂಡಿನಿಂದ ಬಾಂಬ್‌ಗೆ ಬಡ್ತಿ ಕಾಂಗ್ರೆಸ್‌ ಸಾಧನೆ: ಕಟೀಲ್‌

ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಪಾಲಿಕೆ ಕಾಮಗಾರಿಗಳಲ್ಲಿ ಶೇ.40ರಷ್ಟುಕಮಿಷನ್‌ ಪಡೆಯುತ್ತಿರುವುದಾಗಿ ಗುತ್ತಿಗೆದಾರರ ಸಂಘ ಪ್ರಧಾನಮಂತ್ರಿಗಳಿಗೆ ದೂರು ನೀಡಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ನಾವು ಮನವಿ ಮಾಡಿದ್ದೇವೆ. ಆದರೆ, ಸದ್ಯಕ್ಕೆ ಸರ್ಕಾರದವರು ಸುಪ್ರೀಂ ಕೋರ್ಟ್‌ (Supreme Court) ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಾಂಗ ತನಿಖೆಗೆ ವಹಿಸಲು ಹೋಗುವುದಿಲ್ಲ. ಹೀಗಾಗಿ ಮೊದಲು ಸದನ ಸಮಿತಿಯಿಂದ ತನಿಖೆ ಮಾಡಿಸಲಿ. ಯಾರು ಏನು ಮಾಡಿದ್ದಾರೆ ಎಂಬುದು ಹೊರ ಬರಲಿ ಎಂದು ಹೇಳಿದರು.

ಬಿಜೆಪಿಯವರೇ ಅಧ್ಯಕ್ಷರಾಗಲಿ:

ಕಾಂಗ್ರೆಸ್‌ ಅವಧಿಯ ಕಾಮಗಾರಿಗಳ ಕುರಿತೂ ತನಿಖೆ ನಡೆಸುವುದಾಗಿ ಹೇಳಿರುವ ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಸಾರ್ವಜನಿಕರ ಹಣ ಯಾರು ದುರುಪಯೋಗ ಮಾಡಿದ್ದರೂ ತಪ್ಪೇ. ಅದು ಬಿಜೆಪಿಯವರು ಇರಲಿ, ಕಾಂಗ್ರೆಸ್‌ನವರು ಇರಲಿ, ಜೆಡಿಎಸ್‌ನವರು ಇರಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಬಿಜೆಪಿಯವರ ನೇತೃತ್ವದಲ್ಲೇ ಸದನ ಸಮಿತಿ ರಚನೆ ಆಗಲಿ. ಬಿಜೆಪಿಯವರನ್ನೇ ಅಧ್ಯಕ್ಷರನ್ನಾಗಿ ಮಾಡಲಿ ಎಂದು ಶಿವಕುಮಾರ್‌ ಹೇಳಿದರು.

Letter To PM MOdi : 40% ಕಮಿಷನ್‌ ತನಿಖೆಗೆ ಸಿಎಂ ಬೊಮ್ಮಾಯಿ ಆದೇಶ

ರಾಕೇಶ್‌ಸಿಂಗ್‌ (Rakesh Singh) ಅವರ ನೇತೃತ್ವದಲ್ಲಿ ತನಿಖೆಗೆ ವಹಿಸಲಾಗಿದೆ. ರಾಕೇಶ್‌ಸಿಂಗ್‌ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗಳು. ಅವರು ಯಾವ ರೀತಿ ತನಿಖೆ ಮಾಡಲು ಸಾಧ್ಯ? ಈ ಹೋರಾಟವನ್ನು ಇಲ್ಲಿಗೇ ನಿಲ್ಲಿಸುವುದಿಲ್ಲ. ರಾಜ್ಯಪಾಲರಿಗೆ (Governor) ದೂರು ಕೊಟ್ಟಮೇಲೆ ಸುಮ್ಮನೆ ಇರಲು ಆಗುವುದಿಲ್ಲ. ಖಂಡಿತಾ ಮುಂದುವರಿಸುತ್ತೇವೆ. ಪ್ರಧಾನಿಯವರಿಗೆ ಪತ್ರ ಬರೆದಿರುವ ಗುತ್ತಿಗೆದಾರರು ಸಹ ದಡ್ಡರಲ್ಲ. ಕೊರೋನಾ ಸಂದರ್ಭದಲ್ಲಿ ಯಾರು? ಯಾರನ್ನು ಹೇಗೆ ಸುಲಿಗೆ ಮಾಡಿದರು ಎಂಬುದೂ ಜನರಿಗೆ ಗೊತ್ತಿದೆ. ಹೀಗಾಗಿ ಗುತ್ತಿಗೆದಾರರ ಆರೋಪದ ಬಗ್ಗೆ ಸದನ ಸಮಿತಿ ತನಿಖೆ ಮಾಡಲಿ ಎಂದು ಆಗ್ರಹಿಸಿದರು.

ತನಿಖೆ ಮಾಡಲಿ : ಸಿದ್ದು

ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದಿರುವ ಟೆಂಡರ್‌ಗಳ ಬಗ್ಗೆಯೂ ತನಿಖೆ ನಡೆಯಲಿ. ಇದಕ್ಕೆ ನಮ್ಮ ಆಕ್ಷೇಪ ಏನೂ ಇಲ್ಲ ಎಂದು ತಿಳಿಸಿದರು.

ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ. ಅವರು ಯಾವುದೇ ಪಕ್ಷದವರಾಗಲಿ. ರಾಜ್ಯ ಸರ್ಕಾರದ ವಿರುದ್ಧ ಶೇ.40 ಕಮಿಷನ್‌ ಆರೋಪ ಎದುರಾಗಿದ್ದು, ಪ್ರಧಾನಿ ಮೋದಿ ಪ್ರಾಮಾಣಿಕರಾಗಿದ್ದರೆ ಸರ್ಕಾರ ವಜಾಗೊಳಿಸಲಿ. ಗುತ್ತಿಗೆದಾರರ ಸಂಘದವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿ ತನಿಖೆಗೆ ಆದೇಶಿಸಿದ್ದಾರೆ. ಆದರೆ ಯಾವ ಇಲಾಖೆ ವಿರುದ್ಧ ಭ್ರಷ್ಟಾಚಾರ ಆರೋಪ ಇದೆಯೋ ಅದೇ ಇಲಾಖೆ ಅಧಿಕಾರಿಗಳನ್ನು ತನಿಖೆಗೆ ನೇಮಿಸಿದರೆ ಹೇಗೆ? ಇದರಿಂದ ಸತ್ಯ ಹೊರಬರಲು ಸಾಧ್ಯವೇ ಎಂದು ಪ್ರಶ್ನಿಸಿದರು.

click me!