Omicron ನಿಯಂತ್ರಣಕ್ಕೆ ರಾಜ್ಯ ಸಜ್ಜು: ಸಚಿವ ಸುಧಾಕರ್‌

By Kannadaprabha NewsFirst Published Nov 28, 2021, 6:15 AM IST
Highlights

*   ದ.ಆಫ್ರಿಕಾದಿಂದ ಬರುವವರ ಮೇಲೆ ವಿಶೇಷ ನಿಗಾ
*   ಆತಂಕ ಬೇಕಿಲ್ಲ: ಸಚಿವ ಸುಧಾಕರ್‌
*   ರಾಜ್ಯದಲ್ಲಿ ಕೋವಿಡ್‌ ಏರಿಕೆ: 322 ಕೇಸ್‌
 

ಬೆಂಗಳೂರು(ನ.28):  ಹೊಸ ರೂಪಾಂತರಿ ಕೊರೋನಾ ವೈರಾಣು ರಾಜ್ಯದಲ್ಲಿ(Karnataka) ಹರಡದಂತೆ ಕ್ರಮ ಕೈಗೊಳ್ಳಲಾಗಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌(Dr K Sudhakar) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೋಟ್ಸ್‌ವಾನಾ(Botswana), ದಕ್ಷಿಣ ಆಫ್ರಿಕಾ(South Africa) ಮುಂತಾದ ದೇಶಗಳಲ್ಲಿ ಪತ್ತೆಯಾಗಿರುವ ಕೋವಿಡ್‌ನ(Covid19) ಹೊಸ ಪ್ರಭೇದ ‘ಒಮಿಕ್ರೋನ್‌’(Omicron) ವೇಗವಾಗಿ ಹರಡುತ್ತದೆ ಎಂದು ತಜ್ಞರು ಹೇಳಿರುವುದರಿಂದ ಜನರಿಗೆ ಆತಂಕವಾಗುವುದು ಸಹಜ. ಆದರೆ ರಾಜ್ಯದಲ್ಲಿ ಕೊರೋನಾದ ಹೊಸ ತಳಿ ಪತ್ತೆಯಾಗಿಲ್ಲ. ಆದರೂ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ದಕ್ಷಿಣ ಆಫ್ರಿಕಾದಿಂದ ಬರುವವರ ಮೇಲೆ ವಿಶೇಷ ನಿಗಾ ಇಡಲಾಗಿದೆ. ನೆಗೆಟಿವ್‌ ವರದಿ ಬರುವವರೆಗೆ ವಿಮಾನ ನಿಲ್ದಾಣದಲ್ಲಿ ಇರಬೇಕು. ಏಳು ದಿನದ ಹೋಮ್‌ ಕ್ವಾರಂಟೈನ್‌(Home Quarantine) ಕೂಡ ಕಡ್ಡಾಯ ಮಾಡಲಾಗಿದೆ ಎಂದು ಅವರು ಹೇಳಿದರು.

covid19 Omicron: ಒಮಿಕ್ರಾನ್ ವೈರಸ್, ಕರ್ನಾಟಕದಲ್ಲಿ ಮತ್ತೆ ಕಠಿಣ ನಿಯಮ ಜಾರಿ

ಡೆಲ್ಟಾತಳಿ ದೇಶದಲ್ಲಿ 9 ತಿಂಗಳು ಇದ್ದ ಕಾರಣ ಅದರ ನಿರ್ವಹಣೆ ಮಾಡುವುದು ತಿಳಿದಿತ್ತು. ಹೊಸ ರೂಪಾಂತರದಲ್ಲಿ ವೈರಾಣುವಿನ ಕೊಂಬಿನಂತಹ ರಚನೆಯಲ್ಲಿ 25 ರೂಪಾಂತರಗಳಾಗಿವೆ ಎಂಬ ಮಾಹಿತಿ ಇದೆ. ‘ಒಮಿಕ್ರೋನ್‌’ ವೈರಾಣುವಿನ ತೀವ್ರತೆ ಮತ್ತು ಇದರ ಮೇಲೆ ಈಗಿನ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆಯೂ ಅಧ್ಯಯನಗಳು ನಡೆಯಬೇಕಿದೆ ಎಂದರು.

ರಾಜ್ಯದಲ್ಲಿ ಇನ್ನೂ 45 ಲಕ್ಷ ಜನ ಲಸಿಕೆಯನ್ನೇ ಪಡೆದಿಲ್ಲ

ರಾಜ್ಯದಲ್ಲಿ ಇನ್ನೂ 45 ಲಕ್ಷ ಮಂದಿ ಕೋವಿಡ್‌ ಮೊದಲ ಡೋಸ್‌ ಲಸಿಕೆ(Vaccine) ಪಡೆದಿಲ್ಲ. ಅವರೆಲ್ಲರೂ ಲಸಿಕೆ ಪಡೆಯಬೇಕು. ಲಸಿಕೆ ಪಡೆಯುವ ವಿಚಾರದಲ್ಲಿ ಯಾರೂ ಉದಾಸೀನ ಮಾಡಬಾರದು. ದೇಶದಲ್ಲಿ ಮೊದಲ ಡೋಸ್‌ ಸರಾಸರಿ ಶೇ.80 ಇದ್ದರೆ, ರಾಜ್ಯದಲ್ಲಿ ಶೇ.90ಕ್ಕೂ ಅಧಿಕವಾಗಿದೆ. ಎರಡನೇ ಡೋಸ್‌ನಲ್ಲಿ ದೇಶದ ಸರಾಸರಿ ಶೇ.42-43 ಇದ್ದು, ರಾಜ್ಯದಲ್ಲಿ ಶೇ.57 ಇದೆ. ಜನರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಬೇಕು. ಜನ ಲಸಿಕೆ ಹಾಕಿಸಿಕೊಳ್ಳುವುದನ್ನು ಮತ್ತು ಮಾಸ್ಕ್‌ ಧಾರಣೆ ಮಾಡುವುದನ್ನು ಮರೆಯಬಾರದು ಎಂದು ಆರೋಗ್ಯ ಸಚಿವರು ಇದೇ ವೇಳೆ ತಿಳಿಸಿದರು.

ರಾಜ್ಯದಲ್ಲಿ ಕೋವಿಡ್‌ ಏರಿಕೆ: 322 ಕೇಸ್‌

ರಾಜ್ಯದಲ್ಲಿ ಶನಿವಾರ 322 ಮಂದಿಯಲ್ಲಿ ಕೋವಿಡ್‌-19 ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ(Death). 176 ಮಂದಿ ಗುಣಮುಖರಾಗಿದ್ದಾರೆ.

Corona In Karnataka: ಆನೇಕಲ್‌ನ ಮತ್ತೊಂದು ಕಾಲೇಜಿನಲ್ಲಿ ಕೊರೋನಾ ಸ್ಫೋಟ

ಕಳೆದ ಕೆಲ ದಿನಗಳಿಂದ 60 ಸಾವಿರ ಅಸುಪಾಸಿನಲ್ಲಿದ್ದ ಕೋವಿಡ್‌ ಪರೀಕ್ಷೆಯ(Covid Test)ಪ್ರಮಾಣ ಕ್ಲಸ್ಟರ್‌ಗಳಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾಗುತ್ತಿದ್ದಂತೆ ತುಸು ಏರಿಕೆ ಕಂಡಿದ್ದು 94,651ಕ್ಕೆ ತಲುಪಿದೆ. ಶೇ. 0.34 ಪಾಸಿಟಿವಿಟಿ ದರ ದಾಖಲಾಗಿದೆ.
ಶುಕ್ರವಾರ 402 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ತುಸು ಇಳಿಕೆ ವರದಿಯಾಗಿದೆ. ಬೆಂಗಳೂರು ನಗರದಲ್ಲಿ 149, ಧಾರವಾಡ 76, ಮೈಸೂರು 27 ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13 ಪ್ರಕರಣ ಪತ್ತೆಯಾಗಿವೆ.

ಯಾದಗಿರಿ, ವಿಜಯಪುರ, ರಾಯಚೂರು, ರಾಮನಗರ, ಹಾವೇರಿ, ಕಲಬುರಗಿ, ದಾವಣಗೆರೆ, ಬಳ್ಳಾರಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಒಂದಂಕಿಯಲ್ಲಿ ಪ್ರಕರಣ ವರದಿಯಾಗಿದೆ.
ತುಮಕೂರು, ಧಾರವಾಡ ಮತ್ತು ಚಿತ್ರದುರ್ಗದಲ್ಲಿ ತಲಾ ಒಬ್ಬರು ಕೋವಿಡ್‌ನಿಂದ ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ 29.95 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 29.50 ಲಕ್ಷ ಮಂದಿ ಗುಣಹೊಂದಿದ್ದಾರೆ. 6,754 ಸಕ್ರಿಯ ಪ್ರಕರಣಗಳಿವೆ. 38,196 ಮಂದಿ ಮರಣವನ್ನಪ್ಪಿದ್ದಾರೆ.

ಲಸಿಕೆ ಅಭಿಯಾನ:

ಶನಿವಾರ 3.48 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 2.62 ಲಕ್ಷ ಮಂದಿ ಎರಡನೇ ಮತ್ತು 85,182 ಮಂದಿ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಈವರೆಗೆ ಒಟ್ಟು 7.29 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. 4.43 ಕೋಟಿ ಮಂದಿ ಮೊದಲ ಮತ್ತು 2.86 ಕೋಟಿ ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ.
 

click me!