ಓಲಾ, ಉಬರ್‌ಗೆ 30,000 ಆಟೋ ಗುಡ್‌ಬೈ!

Published : Oct 18, 2022, 08:45 AM ISTUpdated : Oct 18, 2022, 10:17 AM IST
ಓಲಾ, ಉಬರ್‌ಗೆ 30,000 ಆಟೋ ಗುಡ್‌ಬೈ!

ಸಾರಾಂಶ

ಓಲಾ, ಉಬರಿಂದ 30 ಸಾವಿರ ಆಟೋ ದೂರ! ಆ್ಯಪ್‌ ಡಿಲೀಟ್‌, ಬಂದ್‌ ಮಾಡಿದ ಶೇ.25ಕ್ಕೂ ಅಧಿಕ ಚಾಲಕರು ಹಿಂದಿನಂತೆ ಮೀಟರ್‌ ಹಾಕಿ ಸೇವೆ ನೀಡಲು ನಿರ್ಧಾರ ಪ್ರಯಾಣಿಕರಿಂದಲೂ ಮೀಟರ್‌ ಆಟೋಗಳಿಗೆ ಬೇಡಿಕೆ ಓಲಾ, ಉಬರ್‌ಗಳಲ್ಲಿ ತಲೆದೂರಿದ ಆಟೋ ಬುಕ್ಕಿಂಗ್‌ ಸಮಸ್ಯೆ

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು (ಅ.18) : ಓಲಾ, ಉಬರ್‌ ಹಾಗೂ ರಾರ‍ಯಪಿಡೋ ದರ ಸುಲಿಗೆ ಪ್ರಕರಣದ ರಂಪಾಟದಿಂದ ಬೇಸತ್ತ ರಾಜಧಾನಿ ಬೆಂಗಳೂರಿನ ಶೇಕಡ 25ರಿಂದ 30ರಷ್ಟು(30 ಸಾವಿರಕ್ಕೂ ಅಧಿಕ) ಆಟೋರಿಕ್ಷಾ ಚಾಲಕರು ಆ್ಯಪ್‌ ಆಧಾರಿತ ಸೇವೆಯಿಂದ ಹಿಂದೆ ಸರಿದಿದ್ದಾರೆ!

ಕೊನೆಗೂ ಹೈಕೋರ್ಟ್ ತೀರ್ಪಿಗೆ ಬಗ್ಗಿದ Ola, uber ಕಂಪೆನಿಗಳು

ಜಪ್ತಿ, ದಂಡ ವಸೂಲಿ ಭಯ ಹಾಗೂ ಪ್ರಯಾಣಿಕರ ಕಣ್ಣಲ್ಲಿ ತಪ್ಪಿತಸ್ಥರಂತೆ ಕಾಣುವ ಬದಲು ಈ ಮೊದಲಿನಂತೆ ಮೀಟರ್‌ ಹಾಕಿಕೊಂಡು ಆಟೋ ಓಡಿಸಲು ಚಾಲಕರು ಸ್ವಯಂಪ್ರೇರಿತವಾಗಿ ನಿರ್ಧರಿಸಿದ್ದಾರೆ. ಈ ಬೆಳವಣಿಗೆಯಿಂದ ಆ್ಯಪ್‌ಗಳಲ್ಲಿ ಈ ಮುಂಚೆ ಒಂದು ನಿಮಿಷದೊಳಗೆ ಸಿಗುತ್ತಿದ್ದ ಆಟೋರಿಕ್ಷಾಗಳು ಸದ್ಯ 8ರಿಂದ 10 ನಿಮಿಷಗಳು ಕಾಯಬೇಕಾಗಿದೆ. ಕೆಲವೊಮ್ಮೆ ಆಟೋರಿಕ್ಷಾ ಬುಕ್ಕಿಂಗ್‌ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ, ಪ್ರಯಾಣಿಕರು ಕೂಡಾ ಮೀಟರ್‌ ಆಟೋರಿಕ್ಷಾಗಳಿಗೆ ಆದ್ಯತೆ ನೀಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಓಲಾ, ಉಬರ್‌ ಹಾಗೂ ರಾರ‍ಯಪಿಡೋ ಆ್ಯಪ್‌ಗಳಿಗೆ 1.1 ಲಕ್ಷಕ್ಕೂ ಅಧಿಕ ಆಟೋರಿಕ್ಷಾಗಳು ಒಪ್ಪಂದ ಮಾಡಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದವು. ಎರಡು ವಾರದಿಂದ ಆ್ಯಪ್‌ಗಳ ಪ್ರಯಾಣ ದರ ಸುಲಿಗೆ ಕುರಿತು ಸಾರ್ವಜನಿಕರಿಂದ ಸಾಕಷ್ಟುವಿರೋಧ ವ್ಯಕ್ತವಾಗಿತ್ತು. ಸಾರಿಗೆ ಇಲಾಖೆಯು ಆ್ಯಪ್‌ಗಳಿಗೆ ಆಟೋರಿಕ್ಷಾ ಸೇವೆ ಅನುಮತಿ ಇಲ್ಲ ಎಂದು ನೋಟಿಸ್‌ ನೀಡಿ, ಕೆಲವೆಡೆ ಆಟೋರಿಕ್ಷಾ ಜಪ್ತಿ, ದಂಡ ಮುಂದಾಗಿತ್ತು. ಓಲಾ, ಉಬರ್‌ ಕಂಪನಿಗಳ ಜತೆ ಸಭೆ ನಡೆಸಿ ಕಠಿಣ ಎಚ್ಚರಿಕೆ ನೀಡಿದ ಆನಂತರವೂ ಆ್ಯಪ್‌ ಕಂಪನಿಗಳು ದರ ಸುಲಿಗೆ ಮುಂದುವರೆಸಿದ್ದವು.

ಸಾರ್ವಜನಿಕರಿಗೆ ಮೀಟರ್‌ ಆಟೋರಿಕ್ಷಾ ಆದ್ಯತೆ ನೀಡಿ, ಆ್ಯಪ್‌ಗಳ ಆಟೋರಿಕ್ಷಾ ಕಂಡರೆ ದೂರು ನೀಡುವಂತೆ ಸಾರಿಗೆ ಇಲಾಖೆ ಸೂಚಿಸಿತ್ತು. ಇದ್ದರಿಂದ ನೂರಾರು ಸಂಖ್ಯೆಯಲ್ಲಿ ದೂರು ಕೂಡಾ ದಾಖಲಾದವು. ಇತ್ತ ಸಾರಿಗೆ ಇಲಾಖೆ ಕ್ರಮ ಕುರಿತು ಕಂಪನಿಗಳು ಕೋರ್ಚ್‌ ಮೆಟ್ಟಿಲೇರಿದ್ದವು. ಈ ಎಲ್ಲಾ ಬೆಳವಣಿಗಳಿಂದ ಬೇಸತ್ತ ಆಟೋರಿಕ್ಷಾ ಚಾಲಕರು ದಿನದಿಂದ ದಿನಕ್ಕೆ ಓಲಾ, ಉಬರ್‌ ಹಾಗೂ ರಾರ‍ಯಪಿಡೋ ಸಹವಾಸ ಸಾಕು ಎನ್ನುತ್ತಿದ್ದಾರೆ. ಆಟೋ ಚಾಲಕರು ಆ್ಯಪ್‌ ಡಿಲಿಟ್‌ ಕೂಡಾ ಮಾಡುತ್ತಿದ್ದಾರೆ. ಸದ್ಯ 30 ಸಾವಿರಕ್ಕೂ ಅಧಿಕ ಆಟೋಗಳು ಆ್ಯಪ್‌ ಸೇವೆಯಿಂದ ಹಿಂದೆ ಸರಿಸಿದ್ದಾರೆ ಎಂದು ನಗರದ ಆಟೋ ಚಾಲಕರ ಸಂಘಗಳು ಮಾಹಿತಿ ನೀæಡಿವೆ.

ಆ್ಯಪ್‌ಗಳಲ್ಲಿ ಆಟೋ ಬುಕ್ಕಿಂಗ್‌ ಕಷ್ಟಾಕಷ್ಟ

ಆಟೋಗಳ ಪ್ರಯಾಣ ದರವನ್ನು ತಗ್ಗಿಸಬೇಕು ಎಂಬ ಸೂಚನೆ ಹೈಕೋರ್ಚ್‌ನಿಂದ ಬಂದಿದೆ. ಇತ್ತ ಆಟೋ ರಿಕ್ಷಾಗಳ ಸಂಖ್ಯೆ ಕಡಿಮೆಯಾಗಿವೆ. ಇದರಿಂದ ಆ್ಯಪ್‌ಗಳಲ್ಲಿ ಆಟೋರಿಕ್ಷಾ ಬುಕ್ಕಿಂಗ್‌ ಕ್ಷಣ ಮಾತ್ರದಲ್ಲಿ ಸಿಗುತ್ತಿಲ್ಲ. ಆ್ಯಪ್‌ನ ಮ್ಯಾಪ್‌ಗಳಲ್ಲಿಯೂ ಸುತ್ತಮುತ್ತ ಲಭ್ಯವಿರುವ ಆಟೋರಿಕ್ಷಾಗಳ ಸಂಖ್ಯೆಯೂ ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಒಂದು ಅಥವಾ ಎರಡು ಇವೆ. 10 ನಿಮಿಷದ ಬಳಿಕ ಬುಕ್ಕಿಂಗ್‌ ಲಭ್ಯವಾದರೂ ಆಟೋರಿಕ್ಷಾ 2 ಕಿ.ಮೀ. ದೂರವಿದ್ದು, ನಿಮ್ಮ ಸ್ಥಳ ತಲುಪುವುದು ತಡವಾಗುತ್ತಿದೆ ಎಂದು ತೋರಿಸುತ್ತದೆ. ನಗರದ ಕೆಲ ಬಡಾವಣೆಗಳಲ್ಲಿ ಆಟೋರಿಕ್ಷಾ ಬುಕ್ಕಿಂಗ್‌ ತೆಗೆದುಕೊಳ್ಳುತ್ತಲೇ ಇಲ್ಲ. ಕಾರು ಬುಕ್ಕಿಂಗ್‌ ಮಾಡುವಂತೆ ಆಯ್ಕೆ ತೋರಿಸುತ್ತಿದೆ.

ಆರಂಭದಲ್ಲಿ ಆಸೆ ತೋರಿಸಿ ಈಗ ಮೋಸ ಮಾಡ್ತಿದ್ದಾರೆ’

ಆ್ಯಪ್‌ಗಳು ಆಟೋರಿಕ್ಷಾ ಸೇವೆಯನ್ನು ಆರಂಭಿಸುವ ಸಂದರ್ಭದಲ್ಲಿ ಚಾಲಕರಿಗೆ ಮೊಬೈಲ್‌ ನೀಡಿದ್ದವು. 10 ಟ್ರಿಪ್‌ ಆದರೆ .500 ಅಥವಾ .750, 20 ಟ್ರಿಪ್‌ಗೆ .1000 ಪ್ರೋತ್ಸಾಹ ಧನ ನೀಡುತ್ತಿದ್ದರು. ಪ್ರಯಾಣಿಕರನ್ನು ಆಕರ್ಷಿಸಲು ಕಡಿಮೆ ದರ ನಿಗದಿ ಮಾಡಿದ್ದರೂ ಚಾಲಕರಿಗೆ ಮಾತ್ರ ಸರ್ಕಾರ ನಿಗದಿ ಪಡಿಸಿರುವ ಮೀಟರ್‌ ದರಕ್ಕಿಂತ ಶೇ.10ರಷ್ಟುಹೆಚ್ಚಿನ ದರ ನೀಡುತ್ತಿದ್ದರು. ಸದ್ಯ ಎಲ್ಲವು ಬದಲಾಗಿದ್ದು, ಪ್ರಯಾಣಿಕರಿಂದ ಪಡೆಯುವ ದರದಲ್ಲಿ ಅರ್ಧದಷ್ಟುನೀಡುತ್ತಿಲ್ಲ. 20 ಟ್ರಿಪ್‌ ಆದ ನಂತರವಷ್ಟೇ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. 19 ಟ್ರಿಪ್‌ ಬಳಿಕ ಕೊನೆಯ ಟ್ರಿಪ್‌ ನೀಡಲು ಸತಾಯಿಸುತ್ತಾರೆ, ಪ್ರಯಾಣಿಕರ ದೂರು ನೆಪ ಹೇಳಿ ಪ್ರೋತ್ಸಾಹ ಧನ ನೀಡುವುದೇ ಇಲ್ಲ. ಈ ಮೂಲಕ ಮೋಸ ಮಾಡುತ್ತಿದ್ದಾರೆ. ಗ್ರಾಹಕರಿಂದ ದೂಚಿ ಅವರಿಗೆ ಕೊಡುವ ಬದಲು ನಾನೇ ದುಡಿದು ತಿನ್ನುತ್ತೇನೆ ಎನ್ನುತ್ತಾರೆ ಆ್ಯಪ್‌ ಡಿಲಿಟ್‌ ಮಾಡಿದ ಆಟೋ ಚಾಲಕ ರಮೇಶ್‌.

ಓಲಾ, ಉಬರ್‌ ಆಟೋಗೆ ಕೋರ್ಟ್‌ನಲ್ಲಿ ಸಿಹಿ-ಕಹಿ..!

ದೂರ ಸರಿಯಲು ಇತರೆ ಕಾರಣಗಳಿವು

  • ಸಾರಿಗೆ ಇಲಾಖೆಯಿಂದ ಆಟೋರಿಕ್ಷಾ ಜಪ್ತಿ, ದಂಡ ಭಯ.
  • ಆ್ಯಪ್‌ ಕಂಪನಿಗಳಿಂದ ಚಾಲಕರಿಗೆ ಅಭಯ ನೀಡಿಲ್ಲ.
  • ಆ್ಯಪ್‌ಗಳ ವಂಚನೆ ಅರಿವಿಗೆ ಬಂದಿದೆ.
  • ಬೆಲೆ ಏರಿಕೆಯನ್ನು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.
  • *ಪ್ರಯಾಣಿಕರು ಚಾಲಕರನ್ನೇ ತಪ್ಪಿತಸ್ಥರಂತೆ ನೋಡುತ್ತಾರೆ.
  • ಸಾರ್ವಜನಿಕರು ಫೋಟೋ ಜತೆಗೆ ಸಾರಿಗೆ ಇಲಾಖೆಗೆ ದೂರು ನೀಡುತ್ತಿದ್ದಾರೆ.
  • ದರ ತಗ್ಗಿಸಬೇಕೆಂದು ಹೆಚ್ಚಿನ ಆಟೋರಿಕ್ಷಾಗಳಿಗೆ ಬುಕ್ಕಿಂಗ್‌ ನೀಡುತ್ತಿಲ್ಲ.

ಬೆಲೆ ಏರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಗಳು ಚಾಲಕರೊಂದಿಗೆ ಸೂಕ್ತವಾಗಿ ಸಂವಹನ ನಡೆಸಿಲ್ಲ. ಚಾಲಕರು ಮತ್ತು ವಾಹನ ರಕ್ಷಣೆ ಭರವಸೆಯನ್ನು ನೀಡಿಲ್ಲ. ಜತೆಗೆ ಆರಂಭದಲ್ಲಿ ನೀಡುತ್ತಿದ್ದ ವಿಶೇಷ ನೆರವುಗಳನ್ನು ಬಂದ್‌ ಮಾಡಿದ್ದಾರೆ. ಬೇಸತ್ತ 25 ಸಾವಿರಕ್ಕೂ ಅಧಿಕ ಆಟೋರಿಕ್ಷಾ ಚಾಲಕರು ಆ್ಯಪ್‌ ಆಧಾರಿತ ಸೇವೆಯನ್ನು ನಿಲ್ಲಿಸಿದ್ದಾರೆ.

-ತನ್ವೀರ್‌ ಪಾಷಾ, ಅಧ್ಯಕ್ಷ, ಓಲಾ, ಉಬರ್‌ ಟ್ಯಾಕ್ಸಿ ಚಾಲಕರು ಮತ್ತು ಮಾಲಿಕರ ಸಂಘ

ಆರಂಭದಲ್ಲಿ ಆ್ಯಪ್‌ ಕಂಪನಿಗಳ ಆಫರ್‌ಗಳಿಂದ ಸಾಕಷ್ಟುಮಂದಿ ಚಾಲಕರು ಒಪ್ಪಂದ ಮಾಡಿಕೊಂಡಿದ್ದರು. ಸದ್ಯ ದರ ಏರಿಕೆ ಕುರಿತು ಸಾರಿಗೆ ಇಲಾಖೆ, ಕಂಪನಿಗಳ ನಡುವೆ ಜಟಾಪಟಿ ನಡೆಯುತ್ತಿದೆ. ಆಟೋರಿಕ್ಷಾ ಜಪ್ತಿ, ದಂಡ ಹಾಕಬಹುದು ಎಂಬ ಭಯ ಸಾಕಷ್ಟುಚಾಲಕರಿಗೆ ಇದೆ. ಸಾರ್ವಜನಿಕರು ಕೂಡಾ ದರ ಏರಿಕೆ ಪ್ರಶ್ನಿಸಿದ್ದು, ಕಂಪನಿಗಳು ಮೋಸ ಮಾಡುತ್ತಿರುವುದು ಚಾಲಕರ ಗಮನಕ್ಕೆ ಬಂದಿದೆ. ಶೇ.30ರಷ್ಟುಚಾಲಕರು ಆ್ಯಪ್‌ಗಳನ್ನು ಬಂದ್‌ ಮಾಡಿ ಮೀಟರ್‌ ಹಾಕಿ ಸೇವೆ ನೀಡುತ್ತಿದ್ದಾರೆ.

-ಎಂ.ಮಂಜುನಾಥ್‌ ಅಧ್ಯಕ್ಷ, ಆದರ್ಶ ಆಟೋ ಮತ್ತು ಕ್ಯಾಬ್‌ ಚಾಲಕರ ಸಂಘ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!