
ವಿಧಾನಸಭೆ (ಫೆ.24): ಯಾವುದೇ ವ್ಯಕ್ತಿ ನ್ಯಾಯವಾದಿಯ ಮೇಲೆ ಹಿಂಸೆ ಎಸಗಿದಲ್ಲಿ ಆತನಿಗೆ ಆರು ತಿಂಗಳಿಂದ ಮೂರು ವರ್ಷದವರೆಗೆ ವಿಸ್ತರಿಸಬಹುದಾದ ಜೈಲುವಾಸ ಅಥವಾ ಒಂದು ಲಕ್ಷ ರು.ವರೆಗೆ ದಂಡ ಅಥವಾ ಇವೆರಡೂ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ-2023’ ಅನ್ನು ಸರ್ಕಾರ ಮಂಡಿಸಿತು.
ಯಾವುದೇ ನ್ಯಾಯಾಲಯ, ನ್ಯಾಯಾಧಿಕರಣ ಅಥವಾ ಪ್ರಾಧಿಕಾರದ ಮುಂದೆ ಬಾಕಿ ಇರುವ ವ್ಯಾಜ್ಯ ಅಥವಾ ಮೊಕದ್ದಮೆಯ ಸಂಬಂಧದಲ್ಲಿ ನ್ಯಾಯವಾದಿಯು ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ಅಡ್ಡಿಪಡಿಸಲು ಆತನಿಗೆ ಜೀವಕ್ಕೆ ಅಪಾಯವಾಗುವ ಅಥವಾ ದೈಹಿಕ ಹಾನಿ ಅಥವಾ ಅಪರಾಧಿಕ ಭಯೋತ್ಪಾದನೆಯಂತಹ ಯಾವುದೇ ಚಟುವಟಿಕೆಗಳನ್ನು ‘ಹಿಂಸಾಚಾರ’ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲು ಈ ವಿಧೇಯಕ ಅವಕಾಶ ಮಾಡಿಕೊಡುತ್ತದೆ.
ಜ್ಯೂನಿಯರ್ ಖರ್ಗೆ ಎದುರು ಕೇಸರಿ ಅಭ್ಯರ್ಥಿ ಯಾರು?: ತಂದೆಯಂತೆ ಮಗನನ್ನೂ ಸೋಲಿಸಲು ಬಿಜೆಪಿ ರಣ ತಂತ್ರ
ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ನೀಡಿದ ಸಿಂಧುವಾದ ವೃತ್ತಿ ನಿರತ ಪ್ರಮಾಣ ಪತ್ರವನ್ನು ಹೊಂದಿರುವ ಮತ್ತು ಯಾವುದೇ ಬಾರ್ ಅಸೋಸಿಯೇಷನ್ ಸದಸ್ಯನಾಗಿರುವ ನ್ಯಾಯವಾದಿ ಅಥವಾ ಹಿರಿಯ ನ್ಯಾಯವಾದಿ ಅಥವಾ ಕಾನೂನು ವೃತ್ತಿ ಮಾಡುವವರನ್ನು ‘ನ್ಯಾಯವಾದಿ’ಎಂದು ಪರಿಗಣಿಸಲಾಗುವುದು.
ಬಂಧಿಸಿದರೆ ಮಾಹಿತಿ: ಸಂಜ್ಞೆಯ ಅಪರಾಧದ ಸಂದರ್ಭದಲ್ಲಿ ನ್ಯಾಯವಾದಿಯನ್ನು ಪೊಲೀಸರು ಬಂಧಿಸಿದಾಗ ಅಂತಹ ಬಂಧನದ 24 ಗಂಟೆ ಒಳಗಾಗಿ ನ್ಯಾಯವಾದಿ ಸದಸ್ಯನಾಗಿರುವ ನ್ಯಾಯವಾದಿಗಳ ಅಸೋಸಿಯೇಷನ್ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ ಬಂಧನದ ವಿಷಯ ತಿಳಿಸತಕ್ಕದ್ದು. ಈ ಅಧಿನಿಯಮದ ಮೇರೆಗೆ ದಂಡನೀಯವಾದ ಪ್ರತಿಯೊಂದು ಅಪರಾಧವನ್ನು ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಪ್ರೇಟ್ ನ್ಯಾಯಾಲಯಗಳಿಗಿಂತ ಕಡಿಮೆ ಇರದ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸತಕ್ಕದ್ದು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.
ಬಿಎಂಎಸ್ ಖಾಸಗಿ ವಿವಿ ವಿಧೇಯಕ ಪಾಸ್: ಕಳೆದ ಸೆಪ್ಟಂಬರ್ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಸದಸ್ಯ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಕೋಟ್ಯಾಂತರ ರು. ಅಕ್ರಮದ ಪ್ರಸ್ತಾಪದಿಂದ ಭಾರೀ ಸದ್ದು ಮಾಡಿದ್ದ ಬಿಎಂಎಸ್ ಕಾಲೇಜು ಟ್ರಸ್ಟ್ನ ‘ಬಿಎಂಎಸ್ ವಿಶ್ವವಿದ್ಯಾಲಯ ವಿಧೇಯಕ-2023’ಕ್ಕೆ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು.
ಈ ಖಾಸಗಿ ವಿವಿ ವಿಧೇಯಕಕ್ಕೆ ಜೆಡಿಎಸ್ ಸದಸ್ಯರ ತೀವ್ರ ವಿರೋಧ ಹಾಗೂ ಸಭಾತ್ಯಾಗದ ನಡುವೆಯೇ ಧ್ವನಿಮತದ ಮೂಲಕ ಅನುಮೋದನೆ ನೀಡಲಾಯಿತು. ಮಂಗಳವಾರವಷ್ಟೇ ಆರು ಖಾಸಗಿ ವಿವಿಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿತ್ತು. ಈಗ ಬಿಎಂಎಸ್ ವಿವಿ ಸೇರಿ ಒಟ್ಟು ಏಳು ಖಾಸಗಿ ವಿಶ್ವವಿದ್ಯಾಲಯಗಳ ವಿಧೇಯಕಗಳಿಗೆ ಈ ಅಧಿವೇಶನದಲ್ಲಿ ಅಂಗೀಕಾರ ದೊರೆತಂತಾಗಿದೆ.
ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವೆ: ಬಿ.ಎಸ್.ಯಡಿಯೂರಪ್ಪ
ಬಿಎಂಎಸ್ ಖಾಸಗಿ ವಿಶ್ವವಿದ್ಯಾಲಯದ ವಿಧೇಯಕ ಪರ್ಯಾಲೋಚನೆ ವೇಳೆ ವಿಧೇಯಕ ಅಂಗೀಕಾರಕ್ಕೆ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ವಿಧೇಯಕ ತಡೆ ಹಿಡಿಯುವಂತೆ ಒತ್ತಾಯಿಸಿದರು. ಬಿಎಂಎಸ್ ಟ್ರಸ್ವ್ ವಿವಾದ ಇರುವಾಗ, ಟ್ರಸ್ಟ್ನ ಅಧಿಕಾರ ಹಣ ದುರುಪಯೋಗ, ಭೂ ಅಕ್ರಮದ ಆರೋಪಗಳಿವೆ. ಹೀಗಿರುವಾಗ ವಿಧೇಯಕ ತರದಂತೆ ಜೆಡಿಎಸ್ ಸದಸ್ಯರು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ, ಟ್ರಸ್ಟ್ಗೂ, ವಿಧೇಯಕಕ್ಕೂ ಸಂಬಂಧವಿಲ್ಲವೆಂದರು. ಈವೇಳೆ ವಿಧೇಯಕ ಅಂಗೀಕರಿಸದಂತೆ ಜೆಡಿಎಸ್ ಸದಸ್ಯರು ಜೋರಾಗಿ ಕೂಗಿದರು. ತೀವ್ರ ವಿರೋಧದ ನಡುವೆಯೇ ವಿಧೇಯಕ ಅಂಗೀಕಾರ ಪಡೆದುಕೊಂಡಿತು. ಇದನ್ನು ವಿರೋಧಿಸಿ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ