ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜಿಟಿ ದೇವೇಗೌಡರ 3 ವರ್ಷದ ಮೊಮ್ಮಗಳು ವಿಧಿವಶ

By Santosh NaikFirst Published May 15, 2022, 11:17 AM IST
Highlights

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡರ ಮೂರು ವರ್ಷದ ಮೊಮ್ಮಗಳು ಗೌರಿ, ಶನಿವಾರ ತಡರಾತ್ರಿ ಅನಾರೋಗ್ಯದಿಂದ ನಿಧನಳಾದಳು. ಪುಟ್ಟ ಹುಡುಗಿಯ ನಿಧನಕ್ಕೆ ಎಚ್ ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ರಾಜ್ಯ ರಾಜಕೀಯದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
 

ಮೈಸೂರು (ಮೇ.15): ಚಾಮುಂಡೇಶ್ವರಿ ಕ್ಷೇತ್ರದ ಶಾಸಕ (Chamundeshwari MLA ) ಜಿಟಿ ದೇವೇಗೌಡರ (GT Devegowda ) ಮೂರು ವರ್ಷದ ಮೊಮ್ಮಗಳು ಗೌರಿ (Gowri Gowda), ಶನಿವಾರ ತಡರಾತ್ರಿ ಅನಾರೋಗ್ಯದಿಂದ ನಿಧನಳಾದಳು. ಮೂರು ವರ್ಷದ ಮಗು ಕ್ಯಾನ್ಸರ್ ನಿಂದ ಬಳಲುತ್ತಿತ್ತು. 

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಪುಟಾಣಿ. ಬೆಂಗಳೂರಿನ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಜಿ ಟಿ ದೇವೇಗೌಡ ಪುತ್ರ ಹರೀಶ್ ಗೌಡರ (Harish Gowda) ಮಗಳು ಗೌರಿ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಗೌರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ 12.30ಕ್ಕೆ ಗೌರಿ ಕೊನೆಯುಸಿರೆಳೆದಿದ್ದಾಳೆ.

ಇಂದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ಗುಂಗ್ರಾಲ್ ಛ್ರತದ ಜಿಟಿಡಿ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಜಿಟಿಡಿ ಮೊಮ್ಮಗಳ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. "ಮಾಜಿ ಮಂತ್ರಿಗಳಾದ ಶ್ರೀ ಜಿ.ಟಿ.ದೇವೇಗೌಡರ ಮೊಮ್ಮಗಳು, ಮೂರು ವರ್ಷದ ಹಸುಗೂಸು ಗೌರಿ ಅನಾರೋಗ್ಯದಿಂದ ಅಸುನೀಗಿರುವ ಸುದ್ದಿ ಕೇಳಿ ದಿಗ್ಭ್ರಮೆಯಾಯಿತು. ಮುದ್ದು ಕಂದಳ ಅಗಲಿಕೆ ನನಗೆ ಬಹಳ ದುಃಖ ಉಂಟು ಮಾಡಿದೆ. ಆ ಮಗುವಿನ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ಜಿ.ಟಿ.ದೇವೇಗೌಡರು, ಅವರ ಪುತ್ರ ಹರೀಶ್‌ ಮತ್ತು ಕುಟುಂಬಕ್ಕೆ ಆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

"ಜಿ.ಟಿ. ದೇವೇಗೌಡರ ಮೊಮ್ಮಗಳು, ಸಹೋದರ ಜಿ.ಡಿ.ಹರೀಶ್ ಗೌಡ ಅವರ ಪುತ್ರಿ ಗೌರಿ ಅನಾರೋಗ್ಯದಿಂದ ನಮ್ಮನ್ನಗಲಿದ ವಿಷಯ ಕೇಳಿ ತೀವ್ರ ದುಃಖವಾಯಿತು.. ಭಗವಂತ ಹರೀಶ್ ಗೌಡ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ, ಕಂದಮ್ಮನ ಆತ್ಮಕ್ಕೆ ಶಾಂತಿ ದೊರೆಯಲಿ..' ಎಂದು ಎಚ್ ಡಿ ಕುಮಾರ ಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ (Siddaramaiah) ಕೂಡ ಈ ಕುರಿತಾಗಿ ಟ್ವೀಟ್ ಮಾಡಿದ್ದು, "ಮಾಜಿ ಸಚಿವರು, ಆತ್ಮೀಯರು ಆದ ಜಿ.ಟಿ ದೇವೇಗೌಡರ ಮೊಮ್ಮಗಳು ಗೌರಿ ಸಾವಿನ ಸುದ್ದಿ ತಿಳಿದು ಅತೀವ ಸಂಕಟವಾಯಿತು. ಬದುಕಿ ಬಾಳಬೇಕಿದ್ದ ಎಳೆಯ ಕಂದಮ್ಮನ ಅಗಲಿಕೆಯಿಂದ ನೊಂದಿರುವ ಜಿ.ಟಿ ದೇವೇಗೌಡರ ಕುಟುಂಬದ ಶೋಕದಲ್ಲಿ ನಾನೂ ಭಾಗಿ. ಮೃತ ಗೌರಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ, ಮಗುವಿನ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಜಿ.ಟಿ ದೇವೇಗೌಡರು ಹಾಗೂ ಆಕೆಯ ತಂದೆ, ತಾಯಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

click me!