
ವಿಧಾನಸಭೆ(ಡಿ.08): ಬೆಂಗಳೂರು ಸುತ್ತಮುತ್ತಲ ವನ್ಯಜೀವಿ ಆವಾಸ ಸ್ಥಾನಗಳ ಒತ್ತುವರಿಯಿಂದಾಗಿ ಚಿರತೆ, ಆನೆ ದಾಳಿಯಂತಹ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ರಾಜಧಾನಿಯ ಸುತ್ತಮುತ್ತ ಒತ್ತುವರಿ ಆಗಿರುವ ಅರಣ್ಯ ಭೂಮಿಯ ತೆರವಿಗೆ ಆ ಭಾಗದ ಶಾಸಕರು ಸಹಕರಿಸಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮನವಿ ಮಾಡಿದರು.
ಪ್ರಶ್ನೋತ್ತರ ಕಲಾಪದ ವೇಳೆ ಬೆಂಗಳೂರಿನ ಚಿರತೆ ದಾಳಿ ಪ್ರಕರಣ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಎಂ.ಸತೀಶ್ ರೆಡ್ಡಿ ಅವರು, ವನ್ಯಜೀವಿಗಳು ನಾಡಿಗೆ ಬರುತ್ತಿರುವುದ್ದನ್ನು ತಡೆಯಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿದ ಪ್ರಶ್ನೆಗೆ, ಬೆಂಗಳೂರು ನಗರ ಭಾಗದಲ್ಲಿ ಸಂಘರ್ಷ ತಡೆಯಲು ಕಗ್ಗಲೀಪುರ ವಲಯದಲ್ಲಿ ಮೂರು ಮತ್ತು ಆನೇಕಲ್ ವಲಯದಲ್ಲಿ ಮೂರು ವನ್ಯಪ್ರಾಣಿ ಹಿಮ್ಮೆಟ್ಟಿಸುವ ತಂಡ ರಚಿಸಲಾಗಿದೆ. ಅಲ್ಲದೆ, 59 ಸಿಬ್ಬಂದಿಯ ಚಿರತೆ ಕಾರ್ಯಪಡೆ ರಚಿಸಲಾಗಿದೆ. ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿ ಚಿರತೆ ಕಾರ್ಯಪಡೆ ಸಿಬ್ಬಂದಿಗೆ ಅಗತ್ಯ ಸೌಲಭ್ಯ, ತರಬೇತಿ ನೀಡಲು ಸೂಚಿಸಲಾಗಿದೆ ಎಂದರು.
ಸಂಸತ್ ವೀಕ್ಷಿಸಿ ವಾವ್ ಎಂದ ಸುಧಾಮೂರ್ತಿಗೆ ಎಂಪಿ ಆಗೋದು ಯಾವಾಗ ಕೇಳಿದ ನೆಟ್ಟಿಗರು..!
ಜನಸಂಖ್ಯೆ ಹೆಚ್ಚಾದಂತೆ ವನ್ಯಜೀವಿ ಆವಾಸ ಸ್ಥಾನಗಳು ಒತ್ತುವರಿಯಗಿ ನಗರೀಕರಣ ಆಗುತ್ತಿರುವುದಿಂದ ವನ್ಯಜೀವಿಗಳು ಮತ್ತು ಮಾನವ ಸಂಘರ್ಷ ಹೆಚ್ಚುತ್ತಿದೆ. ಬೆಂಗಳೂರು ಸುತ್ತಮುತ್ತ 8900 ಹೆಕ್ಟೇರ್ ಅರಣ್ಯ ಭೂಮಿ ಇದೆ. ಇದರಲ್ಲಿ 2500 ಎಕರೆಯಷ್ಟು ಒತ್ತುವರಿಯಾಗಿದ್ದು, 403 ಎಕರೆ ತೆರವು ಮಾಡಿದ್ದೇವೆ. 500 ಹೆಕ್ಟೇರ್ ವ್ಯಾಪ್ತಿಯಲ್ಲಿ ಹಸಿರು ವ್ಯಾಪ್ತಿ ಕಡಿಮೆ ಆಗಿದೆ. ಹಾಗಾಗಿ ಉಳಿದ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಆ ಭಾಗದ ಶಾಸಕರು ಸಹಕಾರ ನೀಡಬೇಕು ಎಂದು ಹೇಳಿದರು.
ಪ್ರಾಣಿಗಳು ಹೆಚ್ಚಿದಾಗ ಬೇಟೆಗೆ ಅವಕಾಶ ನೀಡಿ: ಜ್ಞಾನೇಂದ್ರ
ಬಿಜೆಪಿಯ ಸುನಿಲ್ ಕುಮಾರ್, ಸಚಿವರಿಗೆ ಜನರ ಮೇಲೆ ಪ್ರೀತಿಯೋ, ಪ್ರಾಣಿಗಳ ಪ್ರೀತಿಯೋ ಎಂದರು. ಮತ್ತೊಬ್ಬ ಸದಸ್ಯ ಆರಗ ಜ್ಞಾನೇಂದ್ರ, ವನ್ಯ ಜೀವಿ ಸಂಘರ್ಷ ರಾಜ್ಯದ ಎಲ್ಲ ಕಡೆ ಹೆಚ್ಚುತ್ತಿದೆ. ಹಿಂದೆ ರಾಜಾಳ್ವಿಕೆಯಲ್ಲಿ ವನ್ಯಪ್ರಾಣಿಗಳು ಹೆಚ್ಚಾದಾಗ ಬೇಟೆಯಾಡಲು ಅವಕಾಶವಿತ್ತು. ಆ ಮಾದರಿಯಲ್ಲಿ ವನ್ಯಜೀವಿಗಳ ದಾಳಿ ತಡೆಗೆ ಸರ್ಕಾರ ಕೊಂಚ ನಿಯಮ ಸಡಿಲ ಮಾಡಬೇಕು ಎಂದು ವಾದಿಸಿದರು. ಇದಕ್ಕೆ ಸಚಿವರು, ಬೆಂಗಳೂರಿಗೆ ಬಂದ ಚಿರತೆ ಸೆರೆ ಹಿಡಿಯುವಾಗ 4 ಜನರ ಮೇಲೆ ದಾಳಿ ಮಾಡಿತು. ಹಾಗಾಗಿ ಅದಕ್ಕೆ ಗುಂಡು ಹಾರಿಸಬೇಕಾಯಿತು. ಆದರೆ, ಜವಾಬ್ದಾರಿಯುತ ಸರ್ಕಾರವಾಗಿ ಮನುಷ್ಯರ ಜೀವ, ಜೀವನೋಪಾಯಕ್ಕೂ ತೊಂದರೆ ಆಗದಂತೆ ಜೊತೆಗೆ ವನ್ಯಪ್ರಾಣಿಗಳನ್ನೂ ಸಂರಕ್ಷಿಸುವ ಕೆಲಸ ಮಾಡಬೇಕಾಗುತ್ತದೆ. ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ