
ವಿಧಾನಸಭೆ (ಫೆ.22): ವಿವಿಧ ಸಾರಿಗೆ ನಿಗಮಗಳ ಸಾಲ ಪಾವತಿಗೆ 1 ಸಾವಿರ ಕೋಟಿ ರು., ಕನಿಷ್ಠ ಬೆಂಬಲ ಬೆಲೆ ಆವರ್ತನಿಧಿಗೆ 1 ಸಾವಿರ ಕೋಟಿ ರು., ಮಠ ಮಾನ್ಯಗಳಿಗೆ 32 ಕೋಟಿ ರು. ಸೇರಿದಂತೆ ರಾಜ್ಯ 11,267 ಕೋಟಿ ರು.ಗಳ ಮೂರನೇ ಹಾಗೂ ಅಂತಿಮ ಕಂತಿನ ಪೂರಕ ಅಂದಾಜುಗಳನ್ನು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಂಡಿಸಿದ ಪೂರಕ ಅಂದಾಜುಗಳಲ್ಲಿ ಸಾಲ ಬಾಬ್ತು ಪಾವತಿಗೆ ಬಿಎಂಟಿಸಿಗೆ 300 ಕೋಟಿ ರು., ವಾಯುವ್ಯ ಸಾರಿಗೆ ನಿಗಮಕ್ಕೆ 400 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 75 ಕೋಟಿ ರು., ಕೆಎಸ್ಆರ್ಟಿಸಿಗೆ 225 ಕೋಟಿ ರು ಸೇರಿ ಒಟ್ಟು 1 ಸಾವಿರ ಕೋಟಿ ರು. ನೀಡಲು ಪ್ರಸ್ತಾಪಿಸಲಾಗಿದೆ.
ಶಾಸಕಿ ಅನಿತಾಗೆ ಕಾಯದೆ ತಾಲೂಕು ಉದ್ಘಾಟನೆ: ಸಚಿವ ಅಶ್ವತ್ಥ್ ವಿರುದ್ಧ ಆಕ್ರೋಶ
ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು ಹಾಗೂ ಇತರೆ ಗಣ್ಯರ ಹೆಲಿಕಾಪ್ಟರ್ ಓಡಾಟಕ್ಕಾಗಿ 30 ಕೋಟಿ ರು. ಹೆಚ್ಚುವರಿಯಾಗಿ ನೀಡಲು ಹಾಗೂ ಸಾರಿಗೆ ಸಚಿವ, ವಸತಿ ಸಚಿವ, ಜವಳಿ ಸಚಿವ, ಬಾಗಲಕೋಟೆ ಹಾಗೂ ಕೋಲಾರ ಸಂಸದರ ಉಪಯೋಗಕ್ಕಾಗಿ 5 ಹೊಸ ಕಾರು ಖರೀದಿಗೆ 1.39 ಕೋಟಿ ರು. ಪಾವತಿಸಲು ಪೂರಕ ಅಂದಾಜುಗಳಲ್ಲಿ ಹಣ ಮೀಸಲಿಡಲಾಗಿದೆ.
ಉಳಿದಂತೆ ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಂಬಲ ಬೆಲೆ ಆಧಾರದ ಮೇಲೆ ಖರೀದಿಸಲು ಅನುವಾಗುವಂತೆ ಕನಿಷ್ಠ ಬೆಂಬಲ ಬೆಲೆ ಆವರ್ತ ನಿಧಿಗೆ 1 ಸಾವಿರ ಕೋಟಿ ರು., ಮುಖ್ಯಮಂತ್ರಿಗಳ ವಿವೇಚನಾ ನಿಧಿಯಡಿ ಮಠ ಹಾಗೂ ದೇವಾಲಯಗಳಿಗೆ 32 ಕೋಟಿ ರು., ಬಳ್ಳಾರಿ ಉತ್ಸವಕ್ಕೆ 2, ಚಿಕ್ಕಬಳ್ಳಾಪುರ 2 ಹಾಗೂ ಕದಂಬೋತ್ಸವಕ್ಕೆ 2 ಕೋಟಿ ರು. ಹೆಚ್ಚುವರಿಯಾಗಿ ನೀಡಲು ಪೂರಕ ಅಂದಾಜು ಸಲ್ಲಿಸಲಾಗಿದೆ.
ಇಂಧನ ಇಲಾಖೆ ವ್ಯಾಪ್ತಿಯಲ್ಲಿ 2022ರ ಅಕ್ಟೋಬರ್ನಿಂದ 2023ರ ಮಾಚ್ರ್ವರೆಗೆ ಇಂಧನ ಹೊಂದಾಣಿಕೆ ವೆಚ್ಚ ಪಾವತಿಗೆ 300 ಕೋಟಿ ರು. ಹೆಚ್ಚುವರಿ ಮೊತ್ತ, ಸಬ್ಸಿಡಿ ಬಾಕಿ ಮೊತ್ತ ಪಾವತಿಸಲು 1,600 ಕೋಟಿ ರು. ಸೇರಿದಂತೆ ಇಂಧನ ಇಲಾಖೆಗೆ 1,900 ಕೋಟಿ ರು. ಒದಗಿಸಲಾಗಿದೆ.
ನೀರಾವರಿ ಇಲಾಖೆ ಬಾಕಿ ಬಿಲ್ ಪಾವತಿಗೆ ಕೃಷ್ಣ ಭಾಗ್ಯ ಜಲ ನಿಗಮಕ್ಕೆ 400 ಕೋಟಿ ರು., ಕರ್ನಾಟಕ ನೀರಾವರಿ ನಿಗಮಕ್ಕೆ 700 ಕೋಟಿ ರು., ವಿಶ್ವೇಶ್ವರಯ್ಯ ಜಲ ನಿಗಮಕ್ಕೆ 600 ಕೋಟಿ ರು., ಕಾವೇರಿ ನೀರಾವರಿ ನಿಗಮಕ್ಕೆ 300 ಕೋಟಿ ರು., ಕೆರೆಗಳ ಪ್ರಧಾನ ಕಾಮಗಾರಿಗಳ ಬಿಲ್ ಬಾಕಿ ಪಾವತಿಗೆಇ 30 ಕೋಟಿ ರು. ಮೀಸಲಿಡಲಾಗಿದೆ.
ಲಾ ಸ್ಕೂಲ್ನಲ್ಲಿ ಕನ್ನಡಿಗರ ಮೀಸಲಿಗೆ ಬದ್ಧ: ಸಚಿವ ಮಾಧುಸ್ವಾಮಿ
ಇಲಾಖಾವಾರು ವಿವರ: ಪೂರಕ ಅಂದಾಜುಗಳಲ್ಲಿ ಪ್ರಮುಖವಾಗಿ ಜಲಸಂಪನ್ಮೂಲ 2,550 ಕೋಟಿ ರು., ಧನ ಇಲಾಖೆ 1,900 ಕೋಟಿ ರು., ಲೋಕೋಪಯೋಗಿ ಇಲಾಖೆಗೆ 1,503.81 ಕೋಟಿ ರು., ನಗರಾಭಿವೃದ್ಧಿ 1,355 ಕೋಟಿ ರು., ಒಡಾಳಿತ ಮತ್ತು ಸಾರಿಗೆ 1,050 ಕೋಟಿ ರು., ಮೂಲಭೂತ ಸೌಕರ್ಯ ಅಭಿವೃದ್ಧಿಗೆ 1,050 ಕೋಟಿ ರು., ಸಹಕಾರ 1,061.41 ಕೋಟಿ ರು., ಹಾಗೂ ಸಮಾಜ ಕಲ್ಯಾಣ 513.82 ಕೋಟಿ ರು., ಒದಗಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ