ರಾಜ್ಯದಲ್ಲಿ ಮತ್ತೆ 11 ಮಂದಿಗೆ ಕೊರೋನಾ, 14 ಮಂದಿ ಗುಣ!

By Kannadaprabha NewsFirst Published Apr 29, 2020, 8:33 AM IST
Highlights

ಮತ್ತೆ 11 ಮಂದಿಗೆ ಕೊರೋನಾ, 14 ಮಂದಿ ಗುಣ| ಪ್ರಕರಣಗಳ ಸಂಖ್ಯೆ 523ಕ್ಕೆ ಏರಿಕೆ| ಇದುವೆರೆ 207 ಮಂದಿ ಗುಣಮುಖ| ಸಕ್ರಿಯ ಪ್ರಕರಣಗಳ ಸಂಖ್ಯೆ 295| ಕಲಬುರಗಿಯಲ್ಲಿ 6, ಬಾಗಲಕೋಟೆ 3, ಬೆಂಗಳೂರು, ಗದಗದಲ್ಲಿ ತಲಾ 1 ಕೇಸು

 ಬೆಂಗಳೂರು(ಏ.29): ರಾಜ್ಯದಲ್ಲಿ ಸೋಮವಾರ ತಡರಾತ್ರಿ ಕಲಬುರಗಿಯಲ್ಲಿ ವರದಿಯಾದ ಆರು ಪ್ರಕರಣ ಸೇರಿದಂತೆ ಮಂಗಳವಾರ ಸಂಜೆ 5 ಗಂಟೆ ವೇಳೆಗೆ ಹೊಸದಾಗಿ 11 ಕೊರೋನಾ ವೈರಾಣು ಸೋಂಕು ಪ್ರಕರಣ ದೃಢಪಟ್ಟಿದ್ದು, ಸೋಂಕು ಪ್ರಕರಣಗಳ ಸಂಖ್ಯೆ 523ಕ್ಕೆ ಏರಿಕೆಯಾಗಿದೆ.

ಸೋಮವಾರ ಸಂಜೆ 5 ಗಂಟೆ ವೇಳೆಗೆ ರಾಜ್ಯದಲ್ಲಿ 512 ಪ್ರಕರಣ ದಾಖಲಾಗಿತ್ತು. ಸೋಮವಾರ ಸಂಜೆ 5 ಗಂಟೆಯಿಂದ ಮಂಗಳವಾರ ಸಂಜೆ 5 ಗಂಟೆವರೆಗೆ 11 ಸೋಂಕು ದೃಢಪಟ್ಟಿದ್ದು, 14 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಸತತ ಮೂರನೇ ದಿನವೂ ಸೋಂಕಿತರ ಸಂಖ್ಯೆಗಿಂತಲೂ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿ ವರದಿಯಾಗಿದ್ದು, ಸೋಂಕಿನ ಪ್ರಮಾಣ ಸ್ಥಿರತೆಯತ್ತ ಸಾಗುತ್ತಿರುವ ಲಕ್ಷಣ ಗೋಚರಿಸಿವೆ.

ದೇಶದಲ್ಲಿ 30 ಸಾವಿರದ ಗಡಿ ದಾಟಿದ ವೈರಸ್‌!

ಮಂಗಳವಾರ ಸಂಜೆ ವೇಳೆಗೆ ಒಟ್ಟು 523 ಮಂದಿಗೆ ಸೋಂಕು ದೃಢಪಟ್ಟಿದ್ದು, 207 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 20 ಮಂದಿ ಮೃತಪಟ್ಟಿದ್ದು, ಉಳಿದಂತೆ 295 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ ತಡರಾತ್ರಿ ಕಲಬುರಗಿಯಿಂದ ಆರು ಪ್ರಕರಣ ವರದಿಯಾಗಿದ್ದು, ಮಂಗಳವಾರ ಪತ್ತೆಯಾದ ಐದು ಪ್ರಕರಣಗಳಲ್ಲಿ ಬಾಗಲಕೋಟೆ ಮೂರು ಮಂದಿ, ಬೆಂಗಳೂರು ನಗರ ಹಾಗೂ ಗದಗದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಈ ಎಲ್ಲಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಲಾಗಿದ್ದು, ಅವರಿಗೆ ಸೋಂಕು ಪರೀಕ್ಷೆ ನಡೆಸಲಾಗುತ್ತದೆ. ಪಾಸಿಟಿವ್‌ ಬಂದವರನ್ನು ಆಸ್ಪತ್ರೆಗೆ ಹಾಗೂ ನೆಗೆಟಿವ್‌ ಬಂದವರನ್ನು ಸರ್ಕಾರ ನಿಯಂತ್ರಣದ ಸಾಮೂಹಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬಾಗಲಕೋಟೆಯಲ್ಲಿ ಮತ್ತೆ 3 ಮಂದಿಗೆ ಸೋಂಕು:

ಬಾಗಲಕೋಟೆಯಲ್ಲಿ ಕಳೆದ ಎರಡು ದಿನಗಳಲ್ಲಿ ಐದು ಮಂದಿಗೆ ಸೋಂಕು ತಗುಲಿದೆ. ಈ ನಾಲ್ಕು ಸೋಂಕಿತರಿಗೂ ಇನ್ಫೂ ಎಂಜಾ ಲೈಕ್‌ ಇಲ್‌ನೆಸ್‌ (ಐಎಲ್‌ಐ) ಹಿನ್ನೆಲೆ ಹೊಂದಿದ್ದವರಿಂದ ಸೋಂಕು ತಗುಲಿದೆ. ಸೋಮವಾರ 46 ವರ್ಷದ ಐಎಲ್‌ಐ ಹಿನ್ನೆಲೆ ಹೊಂದಿದ್ದ ಸೋಂಕಿತ ಪುರುಷನ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರು ಮಹಿಳೆಯರಿಗೆ ತಗುಲಿತ್ತು. ಮಂಗಳವಾರ ಅದೇ ವ್ಯಕ್ತಿ ದ್ವಿತೀಯ ಸಂಪರ್ಕ ಹೊಂದಿದ್ದ 11 ವರ್ಷದ ಬಾಲಕನಿಗೂ ತಗುಲಿದೆ. ಜತೆಗೆ ಎರಡು ಪ್ರಕರಣಗಳಲ್ಲಿ 47 ವರ್ಷದ ಮತ್ತೊಬ್ಬ ಐಎಸ್‌ಐ ಹಿನ್ನೆಯ ಸೋಂಕಿತ ಪುರುಷನಿಂದ 20 ವರ್ಷದ ಯುವತಿ ಹಾಗೂ 23 ವರ್ಷದ ಯುವಕನಿಗೆ ಸೋಂಕು ಹರಡಿದೆ.

BMTCಯಿಂದಲೇ ಕೊರೋನಾ ಸೋಂಕು ಹರಡುವ ಆತಂಕ!

ಗದಗದಲ್ಲಿ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 75 ವರ್ಷದ ವೃದ್ಧನಿಗೆ ಸೋಂಕು ಖಚಿತಪಟ್ಟಿದೆ. ಬೆಂಗಳೂರಿನ ಪಾದರಾಯಪುರ ಸಂಪರ್ಕ ಹಿನ್ನೆಲೆ ಹೊಂದಿದ್ದ 48 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ರಾಜ್ಯದಲ್ಲಿರುವ 20 ಸೋಂಕಿತರು ಅನ್ಯ ರಾಜ್ಯದವರು!

ಬೆಂಗಳೂರು: ರಾಜ್ಯದಲ್ಲಿ ವರದಿಯಾಗಿರುವ ಒಟ್ಟು 523 ಸೋಂಕು ಪ್ರಕರಣಗಳ ಪೈಕಿ 20 ಮಂದಿ ಹೊರ ರಾಜ್ಯದವರೇ ಇದ್ದಾರೆ. ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯದಿಂದ ರಾಜ್ಯಕ್ಕೆ ಬಂದಿರುವವರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ರಾಜ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಕೇರಳದ 9 ಮಂದಿ ವಿದೇಶಿ ಪ್ರಯಾಣಿಕರೂ ಇದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಉಳಿದಂತೆ ಆಂಧ್ರಪ್ರದೇಶದಿಂದ ಗೌರೀಬಿದನೂರಿಗೆ ಆಗಮಿಸಿದ್ದ ಇಬ್ಬರು ಹಿಂದೂಪುರ ನಿವಾಸಿಗಳು, ಮಂಗಳೂರಿಗೆ ಚಿಕಿತ್ಸೆಗೆ ಬಂದಿದ್ದ ಕಾಸರಗೋಡು ನಿವಾಸಿಗಳು ಸೇರಿದಂತೆ ಒಟ್ಟು 20 ಮಂದಿ ಅನ್ಯ ರಾಜ್ಯದವರಾಗಿದ್ದು, 16 ಮಂದಿ ಗುಣಮುಖರಾಗಿದ್ದಾರೆ. ಇನ್ನು 4 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾದವರನ್ನೂ ಕ್ವಾರಂಟೈನ್‌ನಲ್ಲಿ ಇಟ್ಟುಕೊಂಡಿದ್ದು ಲಾಕ್‌ಡೌನ್‌ ಮುಗಿದ ಬಳಿಕ ಕಳುಹಿಸಲಾಗುವುದು.

BMTCಯಿಂದಲೇ ಕೊರೋನಾ ಸೋಂಕು ಹರಡುವ ಆತಂಕ!

ದಿನದ ಅತೀ ಹೆಚ್ಚು ಸೋಂಕು ಪರೀಕ್ಷೆ!

ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆ ಪ್ರಯೋಗಾಲಯಗಳ ಸಂಖ್ಯೆ 22ಕ್ಕೆ ಹೆಚ್ಚಳವಾಗಿರುವುದು ಹಾಗೂ ರಾರ‍ಯಪಿಡ್‌ ಪರೀಕ್ಷಾ ಕಿಟ್‌ ಮೂಲಕ ಪರೀಕ್ಷೆ ನಡೆಸುತ್ತಿರುವುದರಿಂದ ಮಂಗಳವಾರ ಬರೋಬ್ಬರಿ 4,827 ಮಂದಿಯ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಈವರೆಗೆ ನಡೆಸಿದ ಅತಿ ಹೆಚ್ಚು ಪರೀಕ್ಷೆಗಳ ಸಂಖ್ಯೆ ಇದಾಗಿದ್ದು, ಈವರೆಗೆ ಒಟ್ಟು 50,512 ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 48,508 ಮಾದರಿಗಳು ನೆಗೆಟಿವ್‌ ಹಾಗೂ 523 ಮಾದರಿಗಳು ಪಾಸಿಟಿವ್‌ ಬಂದಿವೆ. ಉಳಿದ ವರದಿಗಳು ಬರಬೇಕಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.

ಇತರೆ ಅಂಕಿ-ಅಂಶ

- ರಾಜ್ಯದಲ್ಲಿ ಸೋಂಕಿತರ ಸಂಪರ್ಕಿದಿಂದ ಕ್ವಾರಂಟೈನ್‌ನಲ್ಲಿರುವವರು- 23,943.

- ಈ ಪೈಕಿ ಸೋಂಕಿತನ ಪ್ರಾಥಮಿಕ ಸಂಪರ್ಕಿತರು -5,861

- ದ್ವಿತೀಯ ಸಂಪರ್ಕಿತರು - 18,082

- ಸೋಮವಾರ ಸಂಜೆ 5 ಗಂಟೆಯಿಂದ ಮಂಗಳವಾರ ಸಂಜೆ 5ಗಂಟೆವರೆಗೆ ನಡೆದ ಒಟ್ಟು ಪರೀಕ್ಷೆ - 4,827

- ನೆಗೆಟಿವ್‌ ಬಂದ ವರದಿಗಳು - 4,717,

- ಪಾಸಿಟಿವ್‌ ಬಂದ ವರದಿಗಳು - 11

click me!