ಚೆಕ್‌ ಬೌನ್ಸ್‌ ಕೇಸು ಇತ್ಯರ್ಥಕ್ಕೆ 10 ಲಕ್ಷ ತಂದಿದ್ದೆ: ಪಿಡಬ್ಲ್ಯುಡಿ ಎಂಜಿನಿಯರ್‌ ಜಗದೀಶ್‌

By Govindaraj SFirst Published Jan 7, 2023, 7:24 AM IST
Highlights

ನನ್ನ ವಿರುದ್ಧ ದಾಖಲಾಗಿದ್ದ ಚೆಕ್‌ ಬೌನ್ಸ್‌ ಪ್ರಕರಣಗಳ ಇತ್ಯರ್ಥಕ್ಕೆ 10.5 ಲಕ್ಷ ರು ಹಣ ತಂದಿದ್ದಾಗಿ ಪೊಲೀಸರ ವಿಚಾರಣೆಯಲ್ಲಿ ವಿಧಾನಸೌಧ ಬಳಿ ಅಕ್ರಮ ಹಣ ಸಾಗಾಣಿಕೆ ಆರೋಪದ ಮೇರೆಗೆ ಬಂಧಿತ ಮಂಡ್ಯ ಜಿಲ್ಲೆಯ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ)ಯ ಸಹಾಯಕ ಎಂಜಿನಿಯರ್‌ ಜಗದೀಶ್‌ ಹೇಳಿಕೆ ನೀಡಿದ್ದಾರೆ. 
 

ಬೆಂಗಳೂರು (ಜ.07): ನನ್ನ ವಿರುದ್ಧ ದಾಖಲಾಗಿದ್ದ ಚೆಕ್‌ ಬೌನ್ಸ್‌ ಪ್ರಕರಣಗಳ ಇತ್ಯರ್ಥಕ್ಕೆ 10.5 ಲಕ್ಷ ರು ಹಣ ತಂದಿದ್ದಾಗಿ ಪೊಲೀಸರ ವಿಚಾರಣೆಯಲ್ಲಿ ವಿಧಾನಸೌಧ ಬಳಿ ಅಕ್ರಮ ಹಣ ಸಾಗಾಣಿಕೆ ಆರೋಪದ ಮೇರೆಗೆ ಬಂಧಿತ ಮಂಡ್ಯ ಜಿಲ್ಲೆಯ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ)ಯ ಸಹಾಯಕ ಎಂಜಿನಿಯರ್‌ ಜಗದೀಶ್‌ ಹೇಳಿಕೆ ನೀಡಿದ್ದಾರೆ. ನನ್ನ ಬಳಿ ಜಪ್ತಿಯಾದ ಹಣವು ಅಕ್ರಮ ಸಂಪಾದನೆಯ ಹಣವಲ್ಲ. ಚೆಕ್‌ ಬೌನ್ಸ್‌ ಪ್ರಕರಣದ ಇತ್ಯರ್ಥಕ್ಕಾಗಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ಸಾಲ ಮಾಡಿದ್ದೇನೆ. ಇದಕ್ಕೆ ಸೂಕ್ತವಾದ ದಾಖಲೆಗಳಿವೆ ಎಂದು ವಿಚಾರಣೆ ವೇಳೆ ತನಿಖಾಧಿಕಾರಿಗೆ ಜಗದೀಶ್‌ ಸ್ಪಷ್ಟಪಡಿಸಿರುವುದಾಗಿ ಮೂಲಗಳು ಹೇಳಿವೆ. ಇನ್ನೊಂದೆಡೆ ಈ ಪ್ರಕರಣ ಸಂಬಂಧ ನಗರದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಗದೀಶ್‌ ಪರ ವಕೀಲ ನಾಗರಾಜ್‌ ಸಹ, ಜಪ್ತಿಯಾದ ಹಣವು ಚೆಕ್‌ ಬೌನ್ಸ್‌ ಪ್ರಕರಣದ ಇತ್ಯರ್ಥಕ್ಕೆ ತಂದಿದ್ದ ಹಣ ಎಂದಿದ್ದಾರೆ.

2 ಕೇಸು: ‘ನನ್ನ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ 7 ಲಕ್ಷ ರು ಹಾಗೂ 3 ಲಕ್ಷ ರು ಮೊತ್ತದ ಪ್ರತ್ಯೇಕವಾಗಿ 2 ಚೆಕ್‌ ಬೌನ್ಸ್‌ ಪ್ರಕರಣಗಳು ವಿರುದ್ಧ ದಾಖಲಾಗಿದ್ದವು. ಈ ಪ್ರಕರಣಗಳ ದೂರುದಾರರಿಗೆ ಹಣ ಮರಳಿಸಿ ರಾಜಿ ಸಂಧಾನ ಮೂಲಕ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಲು ಯತ್ನಿಸಿದ್ದೆ. ಇದೇ ವಿಚಾರವಾಗಿ ಮಾತುಕತೆಗೆ ಬುಧವಾರ ನಗರಕ್ಕೆ ಬಂದಿದ್ದ ನಾನು, ಕೆಲಸದ ನಿಮಿತ್ತ ವಿಧಾನಸೌಧಕ್ಕೆ ತೆರಳುವಾಗ ಪಶ್ಚಿಮದ್ವಾರದ ಬಳಿ ಪೊಲೀಸರು ಹಣ ಜಪ್ತಿ ಮಾಡಿದ್ದರು’ ಎಂದು ಜಗದೀಶ್‌ ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ. ವಿಧಾನಸೌಧ ಪಶ್ಚಿಮ ದ್ವಾರದ ಬಳಿ ಬುಧವಾರ 10.5 ಲಕ್ಷರು ಹಣದ ಸಮೇತ ಮಂಡ್ಯ ಜಿಲ್ಲೆಯ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್‌ ಜಗದೀಶ್‌ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ವಿಧಾನಸೌಧದಲ್ಲಿ ಅಧಿಕಾರಿ ಬಳಿ ಸಿಕ್ತು 10 ಲಕ್ಷ ಕ್ಯಾಶ್‌: ಪಿಡಬ್ಲ್ಯುಡಿ ಎಂಜಿನಿಯರ್‌ ಬಂಧನ

ಲಂಚಕ್ಕೆ ತಂದಿದ್ದಲ್ಲ: ನನ್ನ ಕಕ್ಷಿದಾರ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್‌ ಜಗದೀಶ್‌ ಬಳಿ ಜಪ್ತಿಯಾದ ಹಣವು ವಿಧಾನಸೌಧದಲ್ಲಿ ಯಾರಿಗೋ ಲಂಚ ಕೊಡಲು ತೆಗೆದುಕೊಂಡು ಹೋಗುತ್ತಿದ್ದ ಹಣವಲ್ಲ ಎಂದು ಎಇ ಜಗದೀಶ್‌ ಪರ ವಕೀಲ ನಾಗರಾಜ್‌ ಸ್ಪಷ್ಟಪಡಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್‌ ವಿರುದ್ಧ ಚೌಕ್‌ ಬೌನ್ಸ್‌ ಪ್ರಕರಣಗಳು ದಾಖಲಾಗಿದ್ದವು. ಆ ಪ್ರಕರಣಗ ಇತ್ಯರ್ಥ ಸಲುವಾಗಿ ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಂದ ಸಾಲ ಪಡೆದು ಅವರು ಹಣ ತಂದಿದ್ದರು. ಆದರೆ ತುರ್ತು ಕೆಲಸದ ನಿಮಿತ್ತ ವಿಧಾನಸೌಧಕ್ಕೆ ತೆರಳುತ್ತಿದ್ದಾಗ ಅವರ ಬಳಿ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಿಧಾನಸೌಧಕ್ಕೆ ಲಂಚ ಕೊಡಲು ತೆಗೆದುಕೊಂಡು ಹೋಗುತ್ತಿದ್ದ ಹಣವಲ್ಲ ಎಂದರು. ಹಣದ ಕುರಿತು ಡಿಸಿಪಿ ಅವರಿಗೆ ಜಗದೀಶ್‌ ಮಾಹಿತಿ ಕೊಟ್ಟಿದ್ದಾರೆ. ಹೀಗಿದ್ದರೂ ಅವರನ್ನು ಕರ್ನಾಟಕ ಪೊಲೀಸ್‌ ಕಾಯ್ದೆ 98ರಡಿ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಟೀಕಿಸಿದರು.

ಜಗದೀಶ್‌ಗೆ ಜಾಮೀನು: ವಿಧಾನಸೌಧ ಬಳಿ 10.5 ಲಕ್ಷ ರು ಅಕ್ರಮ ಹಣ ಜಪ್ತಿ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಮಂಡ್ಯ ಜಿಲ್ಲೆಯ ಪಿಡಬ್ಲ್ಯುಡಿ ಎಇ ಜಗದೀಶ್‌ ಅವರು ಜಾಮೀನಿನ ಮೇರೆಗೆ ಶುಕ್ರವಾರ ಬಿಡುಗಡೆಯಾದರು. ನಗರದ 1ನೇ ಎಸಿಎಂಎಂ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ.

ನನಗೆ ಲಂಚ ಕೊಡಲು ವಿಧಾನಸೌಧಕ್ಕೆ ಬರಬೇಕಿತ್ತೇ: ಸಿದ್ದು ಆರೋಪಕ್ಕೆ ತಿರುಗೇಟು ನೀಡಿದ ಸಿ.ಸಿ.ಪಾಟೀಲ್

ನಾನು ವೈಯಕ್ತಿಕ ಕೆಲಸಕ್ಕಾಗಿ ಮಂಡ್ಯದಿಂದ ಹಣ ತಂದಿದ್ದೆ. ಈ ಹಣವನ್ನು ಸಂಬಂಧಿಕರು ಹಾಗೂ ಸ್ನೇಹಿತರಿಂದ ಸಾಲದ ರೂಪದಲ್ಲಿ ಪಡೆದಿದ್ದೇನೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ಹಾಗೂ ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ. ಅಕ್ರಮ ಹಣ ಎಂಬುದು ಸುಳ್ಳು ಪ್ರಚಾರ
-ಜಗದೀಶ್‌, ಮಂಡ್ಯ ಜಿಲ್ಲೆ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್‌

click me!