ಬಿಜೆಪಿ ಪ್ರತಿಭಟನೆ ಮಧ್ಯೆಯೇ 10 ವಿಧೇಯಕ ಅಂಗೀಕಾರ!

Published : Feb 15, 2019, 08:58 AM ISTUpdated : Feb 15, 2019, 09:01 AM IST
ಬಿಜೆಪಿ ಪ್ರತಿಭಟನೆ ಮಧ್ಯೆಯೇ 10 ವಿಧೇಯಕ ಅಂಗೀಕಾರ!

ಸಾರಾಂಶ

ಚರ್ಚೆಯೇ ಇಲ್ಲದೇ ಮಸೂದೆಗಳು ಪಾಸ್‌| ಮಹತ್ವದ ಧನವಿನಿಯೋಗ ಮಸೂದೆ ಚರ್ಚೆ ಇಲ್ಲದೇ ಅಂಗೀಕಾರ| ಪುನರ್ವಸತಿ, ಋುಣ ಪರಿಹಾರ, ಎನ್‌ಇಇ ವಿವಿ, ಚುಂಚನಗಿರಿ ವಿವಿ, ಶಿಕ್ಷಕರ ವರ್ಗ ಮಸೂದೆ ಪ್ರಮುಖವಾದವು| ಆರೋಗ್ಯ ವಿವಿ, ವಿವಿ ತಿದ್ದುಪಡಿ ವಿಧೇಯಕಕ್ಕೂ ಅಸ್ತು| 

ಬೆಂಗಳೂರು[ಫೆ.15]: ಶಾಸಕ ಪ್ರೀತಂ ಗೌಡ ನಿವಾಸದ ಮುಂದೆ ಜೆಡಿಎಸ್‌ ಕಾರ್ಯಕರ್ತರು ನಡೆಸಿದ ಗಲಾಟೆ ಘಟನೆ ಖಂಡಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಸಭಾಪತಿಗಳ ಪೀಠದ ಎದುರು ನಡೆಸಿದ ಧರಣಿ, ಘೋಷಣೆಗಳ ನಡುವೆ 10 ವಿಧೇಯಕಗಳನ್ನು ಯಾವುದೇ ಚರ್ಚೆ ಇಲ್ಲದೇ ವಿಧಾನ ಪರಿಷತ್‌ನಲ್ಲಿ ಅಂಗೀಕರಿಸಲಾಯಿತು.

ಕಲಾಪ ಆರಂಭದಲ್ಲಿ ಬಹುತೇಕ ಬಿಜೆಪಿ ಸದಸ್ಯರ ಅನುಪಸ್ಥಿತಿಯ ನಡುವೆ ವಿಧೇಯಕಗಳನ್ನು ಒಪ್ಪಿಗೆ ಪಡೆಯಲಾಯಿತು. ನಂತರ ಸದನಕ್ಕೆ ಆಗಮಿಸಿದ ಬಿಜೆಪಿ ಸದಸ್ಯರು ಬಿಜೆಪಿ ಶಾಸಕರಾದ ಪ್ರೀತಂ ಗೌಡ ಮನೆ ಮುಂದೆ ನಡೆಸಿದ ಪ್ರತಿಭಟನೆ, ಕಾರ್ಯಕರ್ತರ ಮೇಲೆ ನಡೆಸಿದ ಹಲ್ಲೆ ಪ್ರಕರಣಗಳನ್ನು ಖಂಡಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಧರಣಿ ಆರಂಭಿಸಿದರು.

ಚರ್ಚೆ ಇಲ್ಲದೇ ಬಜೆಟ್‌ ಪಾಸ್‌, ಇದೇ ಮೊದಲು!

ವಿಧಾನಸಭೆಯಲ್ಲಿ ಅಂಗೀಕೃತವಾದ ರೂಪದಲ್ಲಿರುವ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್‌ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕ, ಕರ್ನಾಟಕ ಋುಣ ಪರಿಹಾರ ವಿಧೇಯಕ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ತಿದ್ದುಪಡಿ ವಿಧೇಯಕ, ಎನ್‌ಇಇ ವಿಶ್ವವಿದ್ಯಾಲಯ ವಿಧೇಯಕ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, ಆದಿಚುಂಚನಗಿರಿ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕವನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು. ಇನ್ನು ಮಹತ್ವದ ಧನವಿನಿಯೋಗ ಮಸೂದೆ ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಗಳ ವಿಧೇಯಕಗಳು ಕೂಡ ಧ್ವನಿಮತದಿಂದ ಗದ್ದಲದ ನಡುವೆಯೇ ಅಂಗೀಕಾರಗೊಂಡವು.

ಬಜೆಟ್‌ ಮೇಲಿನ ಚರ್ಚೆ ಮೊಟಕು:

ಕಲಾಪದ ನಡುವೆ ಬಜೆಟ್‌ ಮೇಲಿನ ಚರ್ಚೆ ಕೈಗೆತ್ತಿಕೊಂಡ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಮಾತನಾಡುವಂತೆ ಕಾಂಗ್ರೆಸ್‌ನ ಎಚ್‌.ಎಂ. ರೇವಣ್ಣ ಅವರಿಗೆ ಸೂಚಿಸಿದರು.

ರೇವಣ್ಣ ಅವರು ಬಜೆಟ್‌ ಮೇಲೆ ಮಾತನಾಡುತ್ತಿದ್ದಂತೆ ಧರಣಿ ನಿರತ ಬಿಜೆಪಿ ಸದಸ್ಯರು ರೈತರ ಸಾಲ ಮನ್ನಾ ಮಾಡದ, ಬಡವರಿಗೆ ಅನುಕೂಲ ಆಗದ ಬಜೆಟ್‌ಗೆ ಧಿಕ್ಕಾರ ಎಂದು ಘೋಷಣೆ ಕೂಗಲು ಆರಂಭಿಸಿದರು. ಇದರ ನಡುವೆಯೇ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ನೀರಾವರಿ, ಶಿಕ್ಷಣಕೆ ಆದ್ಯತೆ ನೀಡಲಾಗಿದೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ. ಇಂತಹ ಉತ್ತಮ ಬಜೆಟ್‌ನ್ನು ಸಹಿಸಲು ಆಗುತ್ತಿಲ್ಲ ಎಂದು ಹೇಳತೊಡಗಿದರು.

ಈ ಮಧ್ಯ ಘೋಷಣೆ ಜಾಸ್ತಿಯಾಗುತ್ತಿದ್ದಂತೆ ಸಭಾಪತಿಗಳು ಹಠಾತ್ತಾಗಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!
ಸಿಎಂ ಪುತ್ರ ಯತೀಂದ್ರ ಹೇಳಿಕೆ ವಿವಾದ; ಬೆಳಗಾವಿಯಲ್ಲಿ ಡಿಕೆಶಿ ಅಲರ್ಟ್, ಆಪ್ತರ ಲಂಚ್ ಮೀಟಿಂಗ್!